ಉಡುಪಿ: ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸಲು ವಿವಿಧ ಇಲಾಖೆಗಳು ಕೋಟ್ಪಾ ಕಾಯಿದೆ ಅನುಷ್ಠಾನಕ್ಕೆ ಪರಿಣಾಮಕಾರಿಯಾಗಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಅವರು ಹೇಳಿದರು.
ಫೆ. 26ರಂದು ಪೊಲೀಸ್ ಇಲಾಖೆಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳಿಗಾಗಿ ಆಯೋಜಿಸಲಾದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 30 ದಿನಗಳೊಳಗೆ ಉಡುಪಿ ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸಲು ಎಲ್ಲ ಇಲಾಖೆಗಳ ಸಹಕಾರ ಮುಖ್ಯ ಎಂದರು.
ಶಾಲಾ, ಕಾಲೇಜುಗಳ ಆವರಣದಲ್ಲಿ ಈ ಬಗ್ಗೆ ಮಾಹಿತಿ ಫಲಕಗಳನ್ನು ಲಗತ್ತಿಸಲು 7 ದಿನಗಳ ಕಾಲಾವಕಾಶ ನೀಡಿದರು. ಇತರ ಇಲಾಖೆಗಳು ತಮ್ಮ ಆವರಣದಲ್ಲಿ ತಂಬಾಕು ನಿಷೇಧ ಫಲಕಗಳನ್ನು ಅಳವಡಿಸುವಂತೆ, ನಗರ ಸಭೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸಲು ಸೂಚನೆ ನೀಡಿದರು.
ವಾರ್ತಾ ಇಲಾಖೆಯ ಪ್ರಚಾರ ಫಲಕಗಳನ್ನು ಈ ಸಂಬಂಧ ಬಳಸಲು ಹೇಳಿದರು. ಬಸ್ ಸ್ಟ್ಯಾಂಡ್, ಹೋಟೆಲ್, ಬೇಕರಿ, ಶಾಪ್ಸ್, ಸಿನಿಮಾ ಥಿಯೇಟರ್, ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್ಗಳಲ್ಲಿ ತಂಬಾಕು ನಿಷೇಧ ವಲಯಗಳ ಬಗ್ಗೆ ಪ್ರಚಾರ ಫಲಕಗಳನ್ನು ಅಳವಡಿಸಿ ಮಾಹಿತಿ ನೀಡಲು 7 ದಿನಗಳ ಕಾಲಾವಕಾಶ ಬಳಕೆ ಮಾಡಲು ಸಂಬಂಧಪಟ್ಟ ಇಲಾಖಾಧಿಕಾರಿ ಗಳಿಗೆ ಹೇಳಿದರು.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ಡಾ| ಜಾನ್ ಕೆನಡಿ ಅವರು ತಂಬಾಕಿನ ದುಷ್ಪರಿಣಾಮಗಳನ್ನು ವಿವರಿಸಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಪ್ರಭಾರ ಉಪನಿರ್ದೇಶಕ ಯೋಗೇಶ್ವರ್, ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ನ ಪ್ರವೀಣ್ ರಾವ್ ಉಪಸ್ಥಿತರಿದ್ದರು.