ಕುಂದಾಪುರ: ಇದೊಂದು ಕಷ್ಟ ಜೀವಿಗಳ ಪುಟ್ಟ ಸಂಸಾರ. ದುಡಿಮೆ ಅರಿಸಿ ದೂರದ ಊರಿನಿಂದ ಬಂದ ಈ ಜೋಡಿ ನೆಲೆಸಿ ಕೂಲಿ ಮಾಡಿಕೊಂಡಿದ್ದು ಕುಂದಾಪುರದಲ್ಲಿ. ಆದರೇ ಶುಕ್ರವಾರ ಸಂಜೆ ನಡೆದ ದುರಂತ ಮಾತ್ರ ಈ ದಂಪತಿಗಳನ್ನು ಕಣ್ಣೀರ ಕಡಲಲ್ಲಿ ತೇಲಿಸಿದೆ. ಮುದ್ದಾದ ಪುಟ್ಟ ಕಂದಮ್ಮ ತಾವು ಕೆಲಸ ಮಾಡಿಕೊಂಡಿದ್ದ ಸ್ಥಳದ ಸಮೀಪವವೇ ಟಿಪ್ಪರ್ ಚಕ್ರದಡಿಗೆ ಸಿಕ್ಕು ಧಾರುಣವಾಗಿ ಸಾವನ್ನಪ್ಪಿದ್ದರೇ, ಆ ಹೆತ್ತ ತಂದೆ-ತಾಯಿ ನೋವು ಹೇಗಿರಬಹುದು….
ಮಿನಿ ಟಿಪ್ಪರ್ ವಾಹನವೊಂದು ವಲಸೆ ಕಟ್ಟಡ ಕೆಲಸ ಕಾರ್ಮಿಕನ ಮಗುವಿನ ಮೇಲೆ ಹರಿದ ಪರಿಣಾಮ ಒಂದೂವರೆ ವರ್ಷ ಪ್ರಾಯದ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರದ ಪಾರಿಜಾತ ವೃತ್ತದ ಸಮೀಪದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಕೊಪ್ಪಳ ಮೂಲದ ಕಾರ್ಮಿಕರಾದ ಮಾರುತಿ ಹಾಗೂ ಲಕ್ಷ್ಮಿ ದಂಪತಿಗಳ ಒಂದೂವರೆ ವರ್ಷ ಪ್ರಾಯದ ದ್ಯಾಮಣ್ಣ ಎಂಬ ಕೂಸು ಈ ಅವಘಡಕ್ಕೆ ಬಲಿಯಾದ ದುರ್ದೈವಿ.
(ದುರಂತ ಅವಘಡಕ್ಕೆ ಬಲಿಯಾದ ದ್ಯಾಮಣ್ಣ)
(ಹೆತ್ತವರ ಆಕ್ರಂಧನ)
(ಮಿನಿ ಟಿಪ್ಪರ್ ಚಾಲಕ ಗೋವಿಂದ)
ಆಗಿದ್ದಾದರೂ ಏನು..?: ಕುಂದಾಪುರದ ಪಾರಿಜಾತ ವೃತ್ತದ ಸಮೀಪ ಕಟ್ಟಡದ ಕೆಡುವುವ ಕೆಲಸ ನಡೆಯುತ್ತಿದ್ದು ಇದರ ಕೆಲಸಕ್ಕಾಗಿ ದೂರದ ಕೊಪ್ಪಳದಿಂದ ಬಂದಿದ್ದ ಕುಟುಂಬವಿದು. ಕಳೆದ ಕೆಲವು ತಿಂಗಳುಗಳಿಂದ ಇಲ್ಲಿ ಕೆಲಸ ಮಾಡಿಕೊಂಡಿದ್ದ ಮಾರುತಿ-ಲಕ್ಷ್ಮೀ ದಂಪತಿಗಳು ಇಲ್ಲೇ ಸಮೀಪದಲ್ಲಿಯೇ ನೆಲೆಸಿದ್ದರು. ಕಟ್ಟಡದ ಕೆಡವು ಕೆಲಸವಾಗುವ ಸ್ಥಳದಲ್ಲಿ ಇಕ್ಕಟ್ಟಿದ್ದು ವಾಹನ ತೆರಳಿದರೇ ಹಿಮ್ಮುಖವಾಗಿಯೇ ಚಲಿಸಬೇಕಾದ ಅನಿವಾರ್ಯತೆ ಇತ್ತು. ಶುಕ್ರವಾರ ಎಂದಿನಂತೆ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಡವಿದ ಕಟ್ಟಡದ ಮಣ್ಣನ್ನು ಕೊಂಡೊಯ್ಯಲು ಬಂದ ಮಿನಿ ಟಿಪ್ಪರ್ ಮಣ್ಣು ತುಂಬಿಸಿಕೊಂಡು ಹಿಮ್ಮುಖವಾಗಿ ಚಲಿಸುತ್ತಿದ್ದ ಸಂದರ್ಭ ಆಟವಾಡುತ್ತಿದ್ದ ಮಗುವಿನ ಮೇಲೆ ಟಿಪ್ಪರ್ ಹರಿದು ಈ ನಡೆಯಬಾರದ ಅವಘಡ ನಡೆದಿದೆ.
ಪೋಷಕರ ಆಕ್ರಂಧನ: ತಮ್ಮ ಒಂದೂವರೆ ವರ್ಷದ ಮುದ್ದಾದ ಮಗುವನ್ನು ದುರಂತ ಅವಘಡದಲ್ಲಿ ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲುಮುಟ್ಟಿತ್ತು. ಮಾರುತಿ ಹಾಗೂ ಲಕ್ಷ್ಮೀ ದಂಪತಿಗಳಿಗೆ ಐವರು ಮಕ್ಕಳಿದ್ದು ಕೊನೆಯ ಮಗು ದ್ಯಾಮಣ್ಣ ಸೇರಿದಂತೆ ನಾಲ್ವರು ಕುಂದಾಪುರದಲ್ಲಿ ಹಾಗೂ ಇನ್ನೊಂದು ಮಗು ಕೊಪ್ಪಳದಲ್ಲಿದ್ದಾರೆ. ತಮ್ಮನ ಸಾವಿನ ಸುದ್ದಿ ತಿಳಿದ ಮಾರುತಿ ದಂಪತಿಗಳ ಉಳಿದ ಮಕ್ಕಳು ಮರುಗುವುದು ಹೃದಯ ಕಲಕುವಂತಿತ್ತು.
ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನಿ ಟಿಪ್ಪರ್ ಚಾಲಕ ಗಂಗೊಳ್ಳಿ ಸಮೀಪದ ನಾಯಕವಾಡಿ ನಿವಾಸಿ ಗೋವಿಂದ (42) ಎಂಬಾತನನ್ನು ಕುಂದಪುರ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಯಾರ ನಿರ್ಲ್ಯಕ್ಷವೋ..? ಯಾರ ಬೇಜವಬ್ದಾರಿಯೋ..? ಏನನ್ನು ಅರಿಯದ ಕಂದಮ್ಮ ಮಾತ್ರ ಬಲಿಯಾಗಿಬಿಟ್ಟಿದೆ.
ವರದಿ- ಯೋಗೀಶ್ ಕುಂಭಾಸಿ