_ ಸತೀಶ್ ಕಾಪಿಕಾಡ್
ಮಂಗಳೂರು: ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಕರ್ನಾಟಕ ಪತ್ರಕರ್ತರ ಸಂಘ) ಅಶ್ರಯದಲ್ಲಿ ರಾಷ್ಟ್ರ ಮಟ್ಟದ ಮೂರು ದಿನಗಳ ಅಧಿವೇಷನ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ದ.ಕ.ಜಿಲ್ಲಾ ಘಟಕದ ವತಿಯಿಂದ ಅಯೋಜಿಸಲಾದ “ಪತ್ರಕರ್ತರ ಸಮ್ಮಿಲನ” ಕಾರ್ಯಕ್ರಮವನ್ನು ಶನಿವಾರ ನಗರದ ಕೊಡಿಯಾಲ್ಬೈಲ್ನಲ್ಲಿರುವ ಬೆಸೆಂಟ್ ಕಾಲೇಜು ಸಭಾಭವನದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಭ್ರಷ್ಟಾಚಾರ ನಿಗ್ರಹದಲ್ಲಿ ಪತ್ರಕರ್ತರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಗ್ರಾಮ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಲ್ಲಿ ಪತ್ರಕರ್ತರು ನೀಡಿದ ಕೊಡುಗೆ ಅಪಾರವಾಗಿದೆ ಎಂದರು. ಭಾವನೆಗಳಿಗೆ ಧಕ್ಕೆಯಾಗದೆ ವಸ್ತುನಿಷ್ಠವಾಗಿ ಸಾಮಾಜಿಕ ಪರಿವರ್ತನೆಗೆ ಪತ್ರಕರ್ತರು ಕೊಡುಗೆ ನೀಡಬೇಕು. ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಪತ್ರಕರ್ತರು ವಸ್ತುನಿಷ್ಠ ವರದಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾತನಾಡಿ, ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರವನ್ನು ಹತೋಟಿಗೆ ತರಲು ಪತ್ರಿಕಾ ಮಾಧ್ಯಮಗಳ ಪಾತ್ರ ಮಹತ್ತರವಾಗಿದೆ. ತನಿಖಾ ವರದಿಯತ್ತ ಯುವ ಪೀಳಿಗೆ ಹೆಚ್ಚು ಕೇಂದ್ರೀಕೃತವಾಗಿ ಕಾರ್ಯ ನಿರ್ವಹಿಸಬೇಕು.ಕಟ್ಟುಪಾಡು ಮೀರದೆ ಪತ್ರಿಕಾ ರಂಗ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ್ ಬಿ.ಶಿವಪೂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ರಾಷ್ಟ್ರಾಧ್ಯಕ್ಷ ಕಿಶನ್ ಬಾಲ್ ಪಂಡಿತ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ವಾರ್ತಾಧಿಕಾರಿ ಖಾದರ್ ಷಾ, ಹಿರಿಯ ಪತ್ರಕರ್ತರಾದ ಸುರೇಶ್, ಗೌರಿ ಶಂಕರ್, ಮಿಹಿರ್ ಗಂಗೂಲಿ, ಮಾಜಿ ಕಾರ್ಪೊರೇಟರ್ ದೇವಾನಂದ ಪೈ ಮುಂತಾದವರು ಅತಿಥಿಗಳಾಗಿದ್ದರು.
ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಸ್ವಾಗತಿಸಿದರು. ರಾಜೇಶ್ವರಿ ಹಿರೇಮಠ್ ಪ್ರಾರ್ಥಿಸಿದರು. ಬೆಸೆಂಟ್ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕಾಪಿಕಾಡ್ ವಂದಿಸಿದರು.
ಸಾಧಕರಿಗೆ ಸಮ್ಮಾನ :
ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಎಸ್.ಜಯರಾಮ್, ಅಹಮ್ಮದ್ ಅನ್ವರ್, ಗಂಗಾಧರ ಮಟ್ಟಿ, ಪತ್ರಿಕಾ ವಿತರಕರಾದ ಎಸ್.ತಾರನಾಥ್ ಕಾಮತ್, ಅನಂತರಾಯ ಭಟ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ :
“ಪತ್ರಕರ್ತರ ಸಮ್ಮಿಲನ” ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. “ದೃಷ್ಯ ಮಾಧ್ಯಮ ಅಂದು- ಇಂದು” ಎಂಬ ವಿಷಯದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಎಸ್ ಜಯರಾಮ್ರವರು ಮಾತನಾಡಿದರು.
ಸಂತ ಅಲೋಸಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಅವರ ನೇತ್ರತ್ವದಲ್ಲಿ ಅಲೋಸಿಯಸ್ ಕಾಲೇಜಿನ ವಿದ್ಯಾರ್ಥಿಗಳು ಹಿರಿಯ ಪತ್ರಕರ್ತರೊಡನೆ ಸಂವಾದ ನಡೆಸಿದರು. ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ್ ಬಿ. ಶಿವಪೂಜಿ, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ನ ರಾಷ್ಟ್ರಾಧ್ಯಕ್ಷ ಕಿಶನ್ ಬಾಲ್ ಪಂಡಿತ್, ಮತ್ತಿತ್ತರ ಹಿರಿಯ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಲೆಯಿಂದ ಬ್ಯಾಲೆ : ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದ ಶ್ರೇಯಾ ಜೈನ್ ನೃತ್ಯ..
ಬಾಲಿವುಡ್ನ ಖ್ಯಾತ ನೃತ್ಯ ಕೊರಿಯಾಗ್ರಾಫರ್ ಸರೋಜ್ ಖಾನ ಅವರ ಶಿಷ್ಯೆ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕುಮಾರಿ ಶ್ರೇಯಾ ಜೈನ್ರವರ ವಿಶೇಷ ಹಾಗೂ ವಿಶಿಷ್ಠ ಶೈಲಿಯ ನೃತ್ಯ ಪ್ರದರ್ಶನ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದ ಈ ಪುಟಾಣಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರ ಪುತ್ರಿ.
_Sathish Kapikad