ಮಂಗಳೂರು, ಜು.28: ಮುಖ್ಯಮಂತ್ರಿಯವರ 2ನೆ ಮತ್ತು 3ನೆ ಹಂತದ 100 ಕೋ.ರೂ. ವಿಶೇಷ ಅನುದಾನದಡಿ ಮನಪಾ ವ್ಯಾಪ್ತಿಯ 7 ಪ್ರಮುಖ ರಸ್ತೆಗಳ ಕಾಂಕ್ರಿಟ್ ಕಾಮಗಾರಿ ಯೋಜನೆಗೆ ಸೋಮವಾರ ಚಾಲನೆ ದೊರೆಯಿತು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಹಾಗೂ ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ಉಪಸ್ಥಿತಿಯಲ್ಲಿ ಏಳು ಕಡೆಗಳಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
110 ಕೋ.ರೂ. ವೆಚ್ಚದಲ್ಲಿ ಪಂಪ್ವೆಲ್ ಬಸ್ ನಿಲ್ದಾಣ ನಿರ್ಮಾಣ
ಮಹಾನಗರ ವ್ಯಾಪ್ತಿಯಲ್ಲಿ ಗುರುತಿಸಲಾದ 14.20 ಕೋ.ರೂ. ವೆಚ್ಚದ 7 ರಸ್ತೆ ಕಾಂಕ್ರಿಟ್ ಯೋಜನೆಗಳಿಗೆ ಇಂದು ಚಾಲನೆ ನೀಡಲಾಗಿದೆ. ನಗರದ ಪಂಪ್ವೆಲ್ನಲ್ಲಿ ಬಸ್ ನಿಲ್ದಾಣವನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದೊಂದಿಗೆ ನಿರ್ಮಿಸಲಾಗುವುದು. ಇದಕ್ಕಾಗಿ 110 ಕೋ. ರೂ.ನ ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಮಂಗಳೂರು ಪುರಭವನದ ಕಾಮಗಾರಿ ಅಕ್ಟೋಬರ್ನಲ್ಲಿ ಪೂರ್ಣಗೊಳ್ಳಲಿದೆ. ಮನಪಾ ವ್ಯಾಪ್ತಿಯಲ್ಲಿ ಸುಸಜ್ಜಿತ ಸೆಂಟ್ರಲ್ ಮಾರುಕಟ್ಟೆ, ಕಂಕನಾಡಿ ಮಾರುಕಟ್ಟೆ, ಕದ್ರಿ ಮಾರುಕಟ್ಟೆ, ಸುರತ್ಕಲ್ ಮಾರುಕಟ್ಟೆ ನಿರ್ಮಿಸಲು ಸೂಕ್ತ ವಾದ ಯೋಜನೆಯನ್ನು ಅನು ಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ( ಡಿಪಿಆರ್) ತಯಾರಿಸಲಾಗುತ್ತಿದೆ ಎಂದು ಸಚಿವ ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಡಿಬಿ ನೆರವಿನಲ್ಲಿ ಮನಪಾ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಒಳಚರಂಡಿ ಯೋಜನೆಯ ಕಾಮಗಾರಿಗಾಗಿ 160 ಕೋ.ರೂ ಹಾಗೂ ನೀರು ಸರಬರಾಜು ವ್ಯವಸ್ಥೆ ಉನ್ನತೀಕರಣಕ್ಕಾಗಿ 120 ಕೋ.ರೂ.ನ 2ನೆ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕೋಲ್ಕತ್ತಾದ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ ಎಂದು ರಮಾನಾಥ ರೈ ಹೇಳಿದರು.
‘ಅಮೃತ್’ ಯೋಜನೆಯಲ್ಲಿ ರಾಜ್ಯದ 25 ಪಟ್ಟಣಗಳು
ಕೇಂದ್ರದ ಅಮೃತ್ ನಗರೋತ್ಥಾನ ಯೋಜನೆಗೆ ರಾಜ್ಯದಿಂದ ಒಂದು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ 25 ಪಟ್ಟಣಗಳನ್ನು ಗುರುತಿಸಲಾಗಿದೆ. ಈ ಯೋಜನೆಯನ್ವಯ ಕೇಂದ್ರ ಹಾಗೂ ರಾಜ್ಯ ಸರಕಾರ 50:50ರ ಅನುಪಾತದಲ್ಲಿ ಅನುದಾನವನ್ನು ನಗರಾಭಿವೃದ್ಧಿಗೆ ವ್ಯಯಿಸಬೇಕಾಗುತ್ತದೆ. ಆ ಪ್ರಕಾರ ಕೇಂದ್ರ ಹಾಗೂ ರಾಜ್ಯ ದಿಂದ ತಲಾ 100 ಕೋ.ರೂ. ಅನುದಾನ ಗುರುತಿಸಲಾದ ಪಟ್ಟಣ ಗಳ ಅಭಿವೃದ್ಧಿ ಗೆ ದೊರೆಯಲಿದೆ. ಈ ಯೋಜನೆಯ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ತಿಳಿಸಿದರು.
‘ಸ್ಮಾರ್ಟ್ ಸಿಟಿ’
ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದೊಂದಿಗೆ ನಿರ್ಮಿಸಲಾಗುವ ‘ಸ್ಮಾರ್ಟ್ ಸಿಟಿ ’ ಯೋಜನೆಗೆ ರಾಜ್ಯದ 11 ಮಹಾನಗರ ಪಾಲಿಕೆಗಳ ಪೈಕಿ ಆರು ಪಾಲಿಕೆಯ ಪ್ರಸ್ತಾಪ ಕಳುಹಿ ಸಲಾಗಿದೆ. ಈ ಯೋಜನೆಯ ಪ್ರಕಾರ ತಲಾ 500 ಕೋ.ರೂ. ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಸಮಾನ ವಾಗಿ ಸ್ಮಾರ್ಟ್ ಸಿಟಿಗಾಗಿ ಗುರುತಿಸಲಾದ ನಗರ ಗಳ ಅಭಿವೃದ್ಧಿಗಾಗಿ 5 ವರ್ಷಗಳಲ್ಲಿ ವ್ಯಯಿ ಸಬೇಕಾಗುತ್ತದೆ.
ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿಸೋಜ, ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ಮುಖ್ಯ ಸಚೇತಕ ಶಶಿಧರ್ ಹಗ್ಡೆ, ವಿವಿಧ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹರಿನಾಥ್, ದೀಪಕ್ ಪೂಜಾರಿ, ಕೇಶವ, ಪ್ರಕಾಶ್ ಸಾಲ್ಯಾನ್, ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿಯವರ 2ನೆ ಮತ್ತು 3ನೆ ಹಂತದ 100 ಕೋ.ರೂ. ವಿಶೇಷ ಅನುದಾನ ಯೋಜನೆಯಡಿ ಅಭಿವೃದ್ಧಿಗೊಳ್ಳಲಿರುವ ಏಳು ರಸ್ತೆಗಳು….
ಕುಂಟಿಕಾನ- ಕಾವೂರು ಬಳಿ 690 ಮೀ. ಉದ್ದದ ರಸ್ತೆ (2 ಕೋ.ರೂ.), ಬೊಂದೆಲ್-ಪಚ್ಚನಾಡಿ 510 ಮೀ. ಉದ್ದದ ರಸ್ತೆ (1.50 ಕೋ.ರೂ.), ಊರ್ವ ಸ್ಟೋರ್ ಜಂಕ್ಷನ್ನಿಂದ-ಮಾಲಾಡಿ ಕೋರ್ಟ್ ವರೆಗೆ 800 ಮೀ. ಉದ್ದದ ರಸ್ತೆ (2 ಕೋ.ರೂ.), ಲೇಡಿಹಿಲ್-ಕೊರಗಜ್ಜನ ಗುಡಿಯ ಬಳಿ 365 ಮೀ. ಉದ್ದದ ರಸ್ತೆ (1.90 ಕೋ.ರೂ.), ದುರ್ಗಾಮಹಲ್-ಬೊಕ್ಕಪಟ್ಣ ಬಳಿ 600 ಮೀ. ಉದ್ದದ ರಸ್ತೆ (1.65 ಕೋ.ರೂ.), ಸುಭಾಶ್ ನಗರ -ಮಂಗಳಾದೇವಿಯ ಬಳಿ 1,500 ಮೀ. ಉದ್ದದ ರಸ್ತೆ (4.65 ಕೋ.ರೂ.) ಹಾಗೂ ಮಲ್ಲಿಕಟ್ಟೆ ದ್ವಾರದಿಂದ-ಕದ್ರಿ ದೇವಸ್ಥಾನ ಬಳಿಯ 105 ಮೀ. ಉದ್ದದ ರಸ್ತೆ (1 ಕೋ.ರೂ.)