ಉಳ್ಳಾಲ : ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್ ಉಚ್ಚಿಲ್ ಅವರ ಮನೆಗೆ ನುಗ್ಗಿದ ಆರು ಮಂದಿ ದುಷ್ಕರ್ಮಿಗಳು ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.
ಉಳ್ಳಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಅವರ ಮನೆಗೆ ಮಾರಕಾಸ್ತ್ರಗಳ ಸಹಿತ ಅಕ್ರಮವಾಗಿ ನುಗ್ಗಿದ ದುಷ್ಕರ್ಮಿಗಳು ಈ ಸಂದರ್ಭ ಚಂದ್ರಶೇಖರ್ ಉಚ್ಚಿಲ್ ಸಂಬಂಧಿ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರನ್ನು ಕಡಿಯಲು ಯತ್ನಿಸಿದ್ದಾರೆ.
ಈ ಸಮಯ ಕತ್ತಿ ಏಟನ್ನು ತಪ್ಪಿಸಿದ ರಾಜೇಶ್ ಅವರು ತಮ್ಮ ಸ್ನೇಹಿತರ ಸಹಕಾರದಿಂದ ಓರ್ವ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕಿ ಬಿದ್ದಿರುವ ಆರೋಪಿಯನ್ನು ರುಕ್ಸಾನ್ ಎಂದು ಗುರುತಿಸಲಾಗಿದ್ದು, ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮನೆಯೊಳಗೆ ನುಗ್ಗಿ ಹಲ್ಲೆಗೆ ಯತ್ನಿಸಿ ಪರಾರಿಯಾದ ಆರೋಪಿಗಳನ್ನು ಮಂಜನಾಡಿ ನಿವಾಸಿಗಳಾದ ನಝೀರ್, ರಫೀಕ್, ತೈಸರ್, ರಮೀಝ್, ಹಾಗೂ ಫಯಾಝ್ ಕಿನ್ಯ ಎಂದು ಹೆಸರಿಸಲಾಗಿದೆ.
ಸದ್ಯಕ್ಕೆ ದಾಳಿಯ ಹಿನ್ನೆಲೆ ತಿಳಿದು ಬಂದಿಲ್ಲ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.