ಮೂಡುಬಿದಿರೆ: ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಹೂವಿನ ವ್ಯಾಪಾರಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆಗೈದ ಘಟನೆ ಇಂದು ಮುಂಜಾನೆ ಮೂಡುಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ನಡೆದಿದೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ವ್ಯಕ್ತಿಯನ್ನು ಹೂವಿನ ವ್ಯಾಪಾರಿ ಹೊಸಬೆಟ್ಟು ನಿವಾಸಿ ಪ್ರಶಾಂತ್(29) ಎಂದು ಗುರುತಿಸಲಾಗಿದೆ. ಇವರು ಹಿಂದೂ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.
ಪ್ರಶಾಂತ್ ಎಂದಿನಂತೆ ಇಂದು ಕೂಡ ಬೆಳಿಗ್ಗೆ ಸುಮಾರು 7.15ರ ಸುಮಾರಿಗೆ ಮೂಡುಬಿದಿರೆಯ ಸಮಾಜಮಂದಿರ ಗೇಟ್ ಬಳಿಯಿರುವ ತಮ್ಮ ಅಂಗಡಿಗೆ ಹೂವುಗಳನ್ನು ತರುವಾಗ ಅಲ್ಲೆ ಪಕ್ಕದಲ್ಲಿರುವ ಆಟೋ ಪಾರ್ಕ್ ಹಿಂದುಗಡೆ ಅವಿತಿದ್ದ ದುಷ್ಕರ್ಮಿಗಳ ತಂಡ ಪ್ರಶಾಂತ್ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.
ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಶಾಂತ್ ಮೃತರಾಗಿದ್ದಾರೆ.