ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಮೋಸಗಾರರ ಹಾಗೂ ಕಳ್ಳರ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಹಾಗೂ ಪತ್ರಿಕೆಗಳು ಸಾರ್ವಜನಿಕರಿಗೆ ಎಷ್ಟೇ ರೀತಿಯಲ್ಲಿ ಜಾಗೃತಿ ಮೂಡಿಸಿದರೂ ಇನ್ನೂ ಹೆಚ್ಚಿನವರು ಈ ಬಗ್ಗೆ ಹೆಚ್ಚು ಕಾಳಾಜಿ ವಹಿಸುವುದಿಲ್ಲ ಎಂಬುದುದಕ್ಕೆ ಸಾಕ್ಷಿಯೆಂಬಂತೆ ಇಂದು ಒಂದೇ ದಿನ ಹಾಡುಹಗಲೇ ನಗರದಲ್ಲಿ ನಡೆದ ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರೂ ವ್ಯಕ್ತಿಗಳು ಸುಮಾರು ಮೂರು ಲಕ್ಷ ರೂಪಾಯಿ ಕಳೆದು ಕೊಂಡಿದ್ದಾರೆ.
ಬಂದರ್ನಲ್ಲಿರುವ ಕಲ್ಬಾವಿ ಕ್ಯಾಶ್ಯೂ ಸಂಸ್ಥೆಯ ನೌಕರ ಇಂದು ಮಧ್ಯಾಹ್ನ ನಗರದ ಡೊಂಗರಕೇರಿಯ ಕರ್ನಾಟಕ ಬ್ಯಾಂಕ್ ಶಾಖೆಯಿಂದ 1.50 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಕಚೇರಿಗೆ ಬರುತ್ತಿದ್ದಾಗ ಬಂದರ್ನ ಜನನಿಬಿಡ ಪ್ರದೇಶವಾದ ಜೆ.ಎಂ.ರಸ್ತೆಯಲ್ಲಿರುವ ಒಂದು ಸಣ್ಣ ಹೋಟೆಲ್ನ ಎದುರು ತನ್ನ ಹೊಂಡಾ ಸಂಸ್ಥೆಯ ( ಕೆ.19 – x 8909) ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ಚಾ ಕುಡಿಯಲು ತೆರಳಿದ ಸಂದರ್ಭ ಬೈಕ್ನಲ್ಲಿ ಬಂದ ಹೆಲ್ಮೆಟ್ ದಾರಿ ಕಳ್ಳನೊಬ್ಬ ಮಿಂಚಿನ ವೇಗದಲ್ಲಿ ವಾಹನದಲ್ಲಿದ್ದ 1.50 ಲಕ್ಷ ರೂಪಾಯಿಯನ್ನು ಕಳವುಗೈದು ಪರಾರಿಯಾಗಿದ್ದಾನೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ರೀತಿಯ ಇನ್ನೊಂದು ಪ್ರಕರಣ ಉರ್ವಾ ಠಾಣಾ ವ್ಯಾಪ್ತಿಯ ಕುಂಟಿಕಾನ್ ಸಮೀಪದ ಕೊಟ್ಟಾರ ಕ್ರಾಸ್ ನಲ್ಲಿ ಸಂಭವಿಸಿದೆ.
ಕೊಟ್ಟಾರ ಕ್ರಾಸ್ ನಲ್ಲಿ ಕಾರ್ಯನಿರ್ವಾಹಿಸುತ್ತಿರುವ ಏರ್ಕಂಡಿಷನ್ (ಹವಾನಿಯಂತ್ರಿತ) ಸೊಲ್ಯೂಶನ್ (Carrier KNND ASSOCIATES Pvt Ltd) ಸಂಸ್ಥೆಯ ಮಹಿಳಾ ಉದ್ಯೋಗಿಯು ಇಂದು ಮಧ್ಯಾಹ್ನ ಕೆನಾರ ಬ್ಯಾಂಕ್, ಗಾಂಧೀನಗರ ಶಾಖೆಯಿಂದ 1.40 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಕಚೇರಿಗೆ ಬರುತ್ತಿದ್ದಾಗ ಕಚೇರಿ ಪಕ್ಕದಲ್ಲಿರುವ ಅಂಗಡಿಯೊಂದರ ಸಮೀಪ ತಮ್ಮ ದ್ವಿಚಕ್ರ ( ಪ್ಲೆಸರ್ ಕೆ.19 -y 5465) ವಾಹನವನ್ನು ನಿಲ್ಲಿಸಿ ಅಂಗಡಿಗೆ ಸಾಮಾನು ಖರೀದಿಗೆ ಹೋಗಿ ಬರವಷ್ಟರಲ್ಲಿ ವಾಹನದಲ್ಲಿಟ್ಟಿದ್ದ 1.40 ಲಕ್ಷ ರೂಪಾಯಿ ಕಳವಾಗಿರುವುದು ಗಮನಕ್ಕೆ ಬಂದಿದೆ.
ಇವರು ವಾಹನ ನಿಲ್ಲಿಸಿದ ಸ್ಥಳ ವಿಶಾಲವಾಗಿದ್ದು, ಪಕ್ಕದಲ್ಲೇ ಅಟೋ ರಿಕ್ಷಾ ಪಾರ್ಕ್ ಇದೆ. ಯಾವೂದೇ ಮೂಲೆಯಿಂದಲೂ ವಾಹನ ಕಾಣುವಂತಹ ಸ್ಥಿತಿಯಲ್ಲಿ ಪಾರ್ಕ್ ಮಾಡಲಾಗಿದ್ದರೂ ಹಣ ಮಾತ್ರ ಕ್ಷಣ ಮಾತ್ರದಲ್ಲಿ ಕಳವು ಮಾಡಲಾಗಿದೆ. ಇಲ್ಲಿ ಕಳ್ಳನ ಚಾಣಕ್ಷತನಕ್ಕೆ ಮೆಚ್ಚಬೇಕೋ.. ಹಣ ಕಳೆದುಕೊಂಡ ಮಹಿಳೆಯ ಬಗ್ಗೆ ಮರುಕ ಪಡಬೇಕೋ…..
ಹಲವೆಡೆಗಳಲ್ಲಿ ಹಲವಾರು ಮಂದಿ ತಮ್ಮ ಕಾರು, ದ್ವಿಚಕ್ರ ಮತ್ತು ಇನ್ನಿತರ ವಾಹನಗಳಲ್ಲಿ ಇಟ್ಟಿದ್ದ ಚಿನ್ನಭರಣ ಮತ್ತು ಹಣ ಕಳೆದುಕೊಂಡ ಬಗ್ಗೆ ದಿನನಿತ್ಯ ಪತ್ರಿಕೆಗಳಲ್ಲಿ ಬರುತ್ತಿದ್ದರೂ ನಗರದ ಜನತೆ ಮಾತ್ರ ಇನ್ನೂ ಕೂಡ ಎಚ್ಚೆತ್ತುಕೊಳ್ಳದೇ ಇರುವುದು ಅಶ್ಚರ್ಯವನ್ನುಂಟು ಮಾಡಿದೆ.
ಓಟ್ಟಿನಲ್ಲಿ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆಯಂತೆ… ವಾಹನಗಳಲ್ಲಿ ಹಣ ಇಟ್ಟು ಹೋಗುವವರು ಇರುವವರೆಗೆ ಅ ಹಣವನ್ನು ಕ್ಷಣ ಮಾತ್ರದಲ್ಲಿ ಕದಿಯುವ ಚಾಣಕ್ಷ್ಯ ಕಳ್ಳರೂ ಇರುತ್ತಾರೆ.