ಮಂಗಳೂರು,ನ.23: ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮನಪಾ ಮತ್ತು ಬೆಂಗಳೂರಿನ ಚಿಲ್ಡ್ರನ್ಸ್ ಇಂಡಿಯಾ ಸಹಭಾಗಿತ್ವದಲ್ಲಿ ಮಂಗಳೂರಿನ ಪುರಭವನದಲ್ಲಿ ಅಯೋಜಿಸಲಾದ 10ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನ್ನು ಬಾನುವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ಬಾರಿ ಬೆಂಗಳೂರಿನಲ್ಲಿ ಆಯೋಜಿಸುತ್ತಿದ್ದ ಮಕ್ಕಳ ಚಿತ್ರೋತ್ಸವವನ್ನು ಈ ಬಾರಿ ಮಂಗಳೂರಿನಲ್ಲಿ ಆಚರಿಸಲ್ಪಡುತ್ತಿರುವುದು ಸಂತೋಷವನ್ನುಂಟು ಮಾಡಿದೆ.ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷವಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಮಕ್ಕಳು ದೇವರು ಇದ್ದಂತೆ. ಅವರ ಮನಸ್ಸು ನಿಷ್ಕಲ್ಮಶ ಅವರನ್ನು ಜಾತಿ ಬೇಧ ಕೋಮಭಾವನೆ ರಹಿತವಾಗಿ ಬೆಳೆಸ ಬೇಕು. ಮಕ್ಕಳಿಗೆ ಚಿತ್ರೋತ್ಸವದಿಂದ ಮನರಂಜನೆಯ ಜೊತೆಗೆ, ಬೇರೆ ಬೇರೆ ಚಿತ್ರಗಳನ್ನು ನೋಡುವ ಅವಕಾಶವನ್ನು ಇಲ್ಲಿ ಕಲ್ಪ್ಸಲಾಗಿದೆ ಎಂದು ರೈ ಹೇಳಿದರು.
ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟಿ ಖುಷ್ಬು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದಲ್ಲಿ ಮಕ್ಕಳನ್ನುದ್ದೇಶಿಸಿ ಆರಂಭದಲ್ಲಿ ತುಳುವಿನಲ್ಲಿ “ಎಂಚ ಉಲ್ಲರ್” (ಹೇಗಿದ್ದೀರಿ) ಎಂದು ಮಾತನಾಡಿ ಮಕ್ಕಳಲ್ಲಿ ಹರ್ಷ ತುಂಬಿದರು. ಇಂದಿನ ಮಕ್ಕಳೇ ಭವಿಷ್ಯದ ನಾಗರಿಕರು. ದೇಶದ ಸಂಸ್ಕೃತಿ, ರಾಷ್ಟ್ರ ಪ್ರೇಮ, ಜಾತ್ಯತೀತವನ್ನು ಉಳಿಸಿ, ಭೂಪಟದಲ್ಲಿ ಭಾರತವನ್ನು ಮಿಂಚಿಸಬೇಕು. ಆ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಪಣತೊಡಬೇಕು ಎಂದು ಅವರು ಹೇಳಿದರು.
ಉತ್ಸವದಲ್ಲಿ ಚಿಲ್ಡ್ರನ್ಸ್ ಇಂಡಿಯಾ ಅಧ್ಯಕ್ಷ ಎನ್.ಆರ್.ನಂಜುಂಡೇಗೌಡ, ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕ ಜೆ.ಆರ್. ಲೋಬೊ, ಎಮ್.ಎಲ್.ಸಿ.ಐವನ್ ಡಿಸೋಜ, ಕರ್ನಾಟಕ ಫಿಲ್ಮ್ ಅಕಾಡೆಮಿ ಅಧ್ಯಕ್ಷ ಬಿ.ರಾಜೇಂದ್ರ ಸಿಂಗ್ ಬಾಬು, ಸಿನಿಮಾ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದ್, ಮಕ್ಕಳ ಕಲ್ಯಾಣ ಮತ್ತು ಅಭಿವೃದ್ದಿ ಮಂಡಳಿ ಅಧ್ಯಕ್ಷೆ ಕೃಪಾ ಆಳ್ವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಎಸ್ಪಿ ಡಾ.ಶರಣಪ್ಪ, ಜಿ.ಪಂ ಸಿಇಒ ಶ್ರೀವಿದ್ಯಾ ದಿವ್ಯಪ್ರಭಾ ಚಿಲ್ತಡ್ಕ ಮತ್ತಿತರರು ಪಾಲ್ಗೊಂಡಿದ್ದರು.
ನ.23ರಿಂದ 26ರವರೆಗೆ ದ.ಕ. ಮತ್ತು ಉಡುಪಿಯಲ್ಲಿ ಮಕ್ಕಳ ಚಲನಚಿತ್ರಗಳು ಪ್ರದರ್ಶನ :
ನ.23ರಿಂದ 26ರವರೆಗೆ ದ.ಕ. ಮತ್ತು ಉಡುಪಿಯ ಥಿಯೇಟರ್ಗಳಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರಗಳು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಪ್ರಥಮ ಪ್ರದರ್ಶನ ಹಾಗೂ ಅಪರಾಹ್ನ 2ರಿಂದ ಸಂಜೆ 4ರವರೆಗೆ ದ್ವಿತೀಯ ಪ್ರದರ್ಶನ ನಡೆಯಲಿದೆ. ಮಕ್ಕಳಿಗೆ ಚಲನಚಿತ್ರಗಳ ವೀಕ್ಷಣೆಗೆ ಅನುಕೂಲವಾಗುವಂತೆ ನ.23ರಿಂದ 26ರವರೆಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಥಿಯೇಟರ್ಗಳಲ್ಲಿ 43 ದೇಶಗಳ, ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ 200ಕ್ಕೂ ಅಧಿಕ ಚಲನಚಿತ್ರಗಳು ಪ್ರದ ರ್ಶನಗೊಳ್ಳಲಿವೆ.
ಇದೇ ವೇಳೆ ಪಿಲಿಕುಳದಲ್ಲಿ ಅತ್ಯುತ್ತಮ ಪರಿಸರ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ನ.25ರಂದು ಪರಿಸರ ಚಿತ್ರಗಳ ಬಗ್ಗೆ ವಿಷಯಕ್ಕೆ ಸಂಬಂಧಿಸಿದ ತಜ್ಞರು ಮಕ್ಕಳ ಜೊತೆ ಸಂವಾದ ನಡೆಸಲಿದ್ದಾರೆ. ಎರಡು ದಿನಗಳ ‘ಸಂಕಲನ’ ತರಬೇತಿ ಶಿಬಿರ
ಚಲನಚಿತ್ರೋತ್ಸವದ ಅಂಗವಾಗಿ ಆಯ್ದ ಮಕ್ಕಳಿಗೆ (ಸರಕಾರಿ ಶಾಲೆಗಳು ಸೇರಿ ಬರವಣಿಗೆ, ಚಿತ್ರಕಲೆಯಲ್ಲಿ ಕ್ರಿಯಾಶೀಲರಾಗಿ ರುವ ಮಕ್ಕಳ ಆಯ್ಕೆ) ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಚಲನಚಿತ್ರ ಸಂಕಲನದ ಬಗ್ಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ.