ಉಳ್ಳಾಲ, ಫೆ.14: ಸೋಮೇಶ್ವರ- ಉಚ್ಚಿಲದ ಬೀಚ್ನಲ್ಲಿ ಸಮುದ್ರಕ್ಕೆ ಈಜಲು ಇಳಿದ ನಾಲ್ವರು ಯುವಕರು ನೀರುಪಾಲಾದ ಹೃದಯವಿದ್ರಾವಕ ಘಟನೆ ರವಿವಾರ ಸಂಜೆ ನಡೆದಿದ್ದು, ಸಮುದ್ರದ ಸುಳಿಗೆ ಸಿಲುಕಿದ್ದ ಇನ್ನಿಬ್ಬರನ್ನು ರಕ್ಷಿಸಲಾಗಿದೆ.
ಮೃತರನ್ನು ಹಾಸನದ ಹನೀಫ್(24), ತುಫೈಲ್(23), ಇಮ್ರಾನ್ ಪಾಶಾ(24) ಹಾಗೂ ಸಯೀದ್ ಕಲೀಮ್(25) ಎಂದು ಗುರುತಿಸಲಾಗಿದೆ. ಇವರ ಜೊತೆ ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಸುಳಿಗೆ ಸಿಲುಕಿದ ಸಾದಿಕ್ ಮತ್ತು ಸಹೀರ್ ಎಂಬ ಇಬ್ಬರನ್ನು ರಕ್ಷಿಸಲಾಗಿದೆ.
ಹಾಸನದ ಮೂಲದ ಆರು ಮಂದಿ ಯುವಕರ ತಂಡವು ಉಳ್ಳಾಲಕ್ಕೆ ಪ್ರವಾಸ ಬಂದಿತ್ತು. ಇವರು ಮಧ್ಯಾಹ್ನದ ಬಳಿಕ ಸೋಮೇಶ್ವರ ಉಚ್ಚಿಲದ ಕಡಲ ಕಿನಾರೆಗೆ ತೆರಳಿದ್ದರು. ಅಲ್ಲಿ ಆರು ಮಂದಿಯೂ ಸಮುದ್ರಕ್ಕೆ ಈಜಲು ಇಳಿದಿದ್ದರು. ಈ ವೇಳೆ ಅಲೆಗಳ ಸುಳಿಗೆ ಸಿಲುಕಿದ ಹನೀಫ್, ತುಫೈಲ್, ಇಮ್ರಾನ್ ಪಾಶಾ ಹಾಗೂ ಸಯೀದ್ ಕಲೀಮ್ ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಇನ್ನಿಬ್ಬರಾದ ಸಾದಿಕ್ ಮತ್ತು ಕಲೀಮ್ನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ನಾಲ್ವರ ಮೃತದೇಹಗಳನ್ನು ಮೇಲೆತ್ತಲಾಗಿದೆ.