ಕೋಲ್ಕಾತಾ: ಮುಂಬೈ ನಲ್ಲಿ ಆಯೋಜಿಸಲಾಗಿದ್ದ ಪಾಕಿಸ್ತಾನದ ಖ್ಯಾತ ಘಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಇದೀಗ ಪರೋಕ್ಷವಾಗಿ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಗುಲಾಂ ಅಲಿ ಸಂಗೀತ ಕಛೇರಿಯನ್ನು ಕೋಲ್ಕತಾದಲ್ಲಿ ಮಾಡಬಹುದು ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸಂಗೀತವೆಂಬುದು ಹೃದಯ ಬಡಿತವಿದ್ದಂತೆ ಅದಕ್ಕೆ ಇಂಥಹದ್ದೇ ಎಂಬ ಯಾವುದೇ ಮಿತಿಯೆಂಬುದಿರುವುದಿಲ್ಲ. ಬೇಕಿದ್ದರೆ ಗುಲಾಂ ಅಲಿಯವರ ಸಂಗೀತ ಕಛೇರಿಯನ್ನು ಕೋಲ್ಕತಾದಲ್ಲಿ ಆಯೋಜಿಸಿಬಹುದು. ಕಾರ್ಯಕ್ರಮಕ್ಕೆ ನಾವು ಸಿದ್ಧತೆ ನಡೆಸುತ್ತೇವೆಂದು ಹೇಳಿದ್ದಾರೆ.
ಶುಕ್ರವಾರ ಮುಂಬೈಯ ಷಣ್ಮುಖಾನಂದ್ ಹಾಲ್ ನಲ್ಲಿ ಗುಲಾಂ ಅಲಿ ಅವರ ಸಂಗೀತ ಕಛೇರಿ ಯನ್ನು ಏರ್ಪಡಿಸಲಾಗಿತ್ತು. ಆದರೆ, ಈ ಸಂಗೀತ ಕಛೇರಿಗೆ ಶಿವಸೇನೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಗಡಿಯಲ್ಲಿ ಪಾಕಿಸ್ತಾನ ಸೇನೆಯು ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನದೊಂದಿಗೆ ಸಾಂಸ್ಕೃತಿಕ ಸಂಬಂಧ ಬೆಳೆಸಲು ಸಾಧ್ಯವಿಲ್ಲವಾಗಿದ್ದು, ಮುಂಬೈ ನಲ್ಲಿ ನಡೆಯಲಿರುವ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಆಗ್ರಹಿಸಿತ್ತು. ಶಿವಸೇನೆಯ ತೀವ್ರ ವಿರೋಧದಿಂದಾಗಿ ಕಾರ್ಯಕ್ರಮದ ಆಯೋಜಕರು ಸಂಗೀತ ಕಛೇರಿಯನ್ನು ರದ್ದು ಮಾಡಿದ್ದರು. ಶಿವಸೇನೆಯ ಈ ನಡೆಯನ್ನು ಹಲವು ರಾಜಕೀಯ ಪಕ್ಷಗಳು ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದವು.