ಕರಾವಳಿ

ವೈವಿಧ್ಯಮಯ ಸಮಾಜಮುಖಿ ಸೇವೆಗಳಿಗಾಗಿ ಅನಿವಾಸಿ ಭಾರತೀಯ ಲೀಲಾಧರ್ ಬೈಕಂಪಾಡಿಯವರಿಗೆ ‘ರಾಷ್ಟ್ರೀಯ ಭೂಷಣ’ ರಾಷ್ಟ್ರ ಪ್ರಶಸ್ತಿ

Pinterest LinkedIn Tumblr

Leeladhar_Baikampady_photo_

ಮನಾಮ, ಬಹ್ರೈನ್: ತೀರಾ ತಾರುಣ್ಯದಿಂದ ಆರಂಭಿಸಿ ನಿರಂತರವಾಗಿ ಗತ ಸುಮಾರು 27 ವರ್ಷಗಳಿಂದ ನಿಸ್ವಾರ್ಥವಾದ ನಾಡು-ನುಡಿ ಸೇವೆ, ಸಾಹಿತ್ಯ-ಸಂಸ್ಕೃತಿ ಸೇವೆ ಹಾಗೂ ಸಮುದಾಯ-ಸಂಘಟನೆ-ಸಮಾಜ ಸೇವೆಯನ್ನು ದೇಶ-ವಿದೇಶಗಳಲ್ಲಿ ಗೈಯುತ್ತಾ ಬಂದಿರುವ ಲೀಲಾಧರ್ ಬೈಕಂಪಾಡಿಯವರು ಬೆಂಗಳೂರಿನ ‘ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ’ದವರು ಕೊಡಮಾಡುವ 2014ರ ಸಾಲಿನ ಹೊರನಾಡ ಕನ್ನಡಿಗರು ವಿಭಾಗದ ರಾಷ್ಟ್ರ ಮಟ್ಟದ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿಗೆ ಆಯ್ಕೆಗೊಂಡಿರುತ್ತಾರೆ.

ಕಳೆದ 16 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿದ್ದು, ಖಾಸಗಿ ಕಂಪನಿ ಸಮೂಹವೊಂದರ ವಿತ್ತ ಪ್ರಬಂಧಕರಾಗಿರುವ ಲೀಲಾಧರ್ ಬೈಕಂಪಾಡಿಯವರು ಅವಿಭಜಿತ ದ.ಕ. ಜಿಲ್ಲೆ, ಮುಂಬೈ ಮತ್ತು ಬಹ್ರೈನ್ ದೇಶದಲ್ಲಿ ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ವಿವಿಧ ಸಾಮಾಜಿಕ, ಸಾಂಘಿಕ, ಸಾಹಿತ್ಯಿಕ ಹಾಗೂ ಜನಪರ ಸೇವಾ ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿರುವವರಾಗಿರುತ್ತಾರೆ. ಇವರೋರ್ವ ಸಮಾಜಸೇವಾ ಕಾರ್ಯಕರ್ತ, ಚತುರ ಸಂಘಟಕ, ಪ್ರಶಸ್ತಿ ವಿಜೇತ ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಬಹಳವಾಗಿ ಗುರುತಿಸಿಕೊಂಡವರಾಗಿರುತ್ತಾರೆ.

ಪ್ರತಿಷ್ಠಾನದ ಮೂಲಕ ಕಳೆದ 21 ವರ್ಷಗಳಿಂದ ಸಮಾಜದ ಅಗ್ರ ದರ್ಜೆಯ ಕನ್ನಡಿಗ ಸಾಧಕರಿಗೆ ಕೊಡಲ್ಪಡುತ್ತಾ ಬಂದ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ರಾಷ್ಟ್ರೀಯ ಭೂಷಣ’ ಪ್ರಶಸ್ತಿಯು ಒಂದು ಸುಂದರ ಸ್ಮರಣಿಕೆ, ಸನ್ಮಾನ ಪತ್ರ, ಪ್ರಶಸ್ತಿ ಪದಕ, ಪ್ರಶಸ್ತಿ ಲಾಂಛನ ಮತ್ತು ಪ್ರಶಸ್ತಿ ಶಾಲನ್ನು ಹೊಂದಿದ್ದು, ವಿಜೇತ ಸಾಧಕ ಲೀಲಾಧರ್ ಬೈಕಂಪಾಡಿಯವರು ಈ ಪ್ರಶಸ್ತಿಯನ್ನು ಇದೇ ತಿಂಗಳ ಅಂತ್ಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ಉನ್ನತ ಮಟ್ಟದ ಗಣ್ಯ ಅಥಿತಿಗಳ ಘನ ಉಪಸ್ಥಿತಿಯಲ್ಲಿ ಜರುಗಲಿರುವ ಮಹಾ ಸಮಾವೇಶದಲ್ಲಿ ಸ್ವೀಕರಿಸಿ ರಾಷ್ಟ್ರ ದರ್ಜೆಯ ಗೌರವವನ್ನು ಪಡೆಯಲಿದ್ದಾರೆ.

1 Comment

Write A Comment