ಮಂಗಳೂರು,ಸೆ.30 : ಕಾರ್ಮಿಕ ಪಿಂಚಣಿ ಯೋಜನೆಯಂತೆ ಭವಿಷ್ಯನಿಧಿ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ಪಿಂಚಣಿ 1,000 ರೂ. ಏರಿಕೆಯಾಗಿದ್ದು, ಆ ಪ್ರಯುಕ್ತ ಕಾರ್ಮಿಕರ ಭವಿಷ್ಯನಿಧಿ ಸಂಘಟನೆಯ ಮಂಗಳೂರು ಪ್ರಾದೇಶಿಕ ಕಚೇರಿ ವತಿಯಿಂದ ಪಿಂಚಣಿದಾರರ ಸಮ್ಮಾನ ಕಾರ್ಯಕ್ರಮ ಮಂಗಳವಾರ ನಗರದ ಮಿಲಾಗ್ರಿಸ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ದೇಶದಾದ್ಯಂತ 37 ಸ್ಥಳಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಸಿಕ ಪಿಂಚಣಿ 1,000 ರೂ.ಗಳಿಗೆ ಹೆಚ್ಚಳವಾಗುವ ಮೂಲಕ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಹೆಚ್ಚಿನ ಪಿಂಚಣಿದಾರರು ಪಿಂಚಣಿ ಯೋಜನೆಯ ಮೂಲಕ ಅತ್ಯಲ್ಪ ಪಿಂಚಣಿ ಪಡೆಯುತ್ತಿದ್ದರು. ಇದೀಗ ದೇಶದಲ್ಲಿ ಸುಮಾರು 49 ಲಕ್ಷ ಪಿಂಚಣಿದಾರರಲ್ಲಿ ಕಡಿಮೆ ಪಿಂಚಣಿ ಪಡೆಯುತ್ತಿರುವ 32 ಲಕ್ಷ ಪಿಂಚಣಿದಾರರು ಇದರ ಲಾಭ ಪಡೆಯುವಂತಾಗಿದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ ಅತಿಥಿಗಳಾಗಿ ಭಾಗವಹಿಸಿದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮಹಾಬಲ ಮಾರ್ಲ ಅವರು ಭವಿಷ್ಯನಿಧಿ ಪಿಂಚಣಿದಾರರನ್ನು ಶಾಲು ಹೊದಿಸಿ ಸನ್ಮಾನಿಸಿದರು.