ಕರಾವಳಿ

ಎಸ್.ಐ ಹಲ್ಲೆ ಪ್ರಕರಣ : ಕಮಿಷನರ್ ಸೂಕ್ತ ಭರವಸೆ : ಪ್ರತಿಭಟನೆ ನಿಲ್ಲಿಸಿದ ವಿ.ಎಚ್.ಪಿ / ಬಜರಂಗದಳ

Pinterest LinkedIn Tumblr

baj_kavoor_protest_2

ಮಂಗಳೂರು: ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಕಳೆದ ಮೂರು ದಿನಗಳಿಂದ ಕಾವೂರು ಪೊಲೀಸ್ ಠಾಣೆ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆಯನ್ನು ಭಾನುವಾರ ಹಿಂದಕ್ಕೆ ಪಡೆಯಲಾಗಿದೆ.

ಪ್ರತಿಭಟನೆ ಸ್ಕಳಕ್ಕೆ ಆಗಮಿಸಿದ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ ಅವರು ಸೂಕ್ತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಸಂಘಟನೆಯ ಮುಖಂಡರಾದ ಜಗದೀಶ್ ಶೇಣವ ತಿಳಿಸಿದ್ದಾರೆ.

ಅಪರಾಧ ವಿಭಾಗದ ಡಿಸಿಪಿಯವರು ಚರಣ್, ಆತನ ಪತ್ನಿ ಹಾಗೂ ತಾಯಿಯನ್ನು ವಿಚಾರಣೆಗೆ ಕರೆದಿದ್ದು, ವರದಿಯನ್ನು ಕಮಿಷನರ್ ಅವರಿಗೆ ಒಪ್ಪಿಸಲಿದ್ದಾರೆ. ಸೋಮವಾರ ಸಂಜೆಯ ಒಳಗಾಗಿ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ತಿಳಿಸಿದ್ದಾರೆ ಎಂದು ಜಗದೀಶ್ ಶೇಣವ ಹೇಳಿದ್ದಾರೆ.

ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದು, ಸೋಮವಾರ ಸಂಜೆಯ ಒಳಗೆ ಎಸ್‌ಐ ಉಮೇಶ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮತ್ತೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

baj_kavoor_protest_1

ಕಾವೂರು ಠಾಣೆಯ ಎಸ್‌ಐ ಉಮೇಶ್ ಕುಮಾರ್ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿ ಬಜರಂಗದಳ ಕಾರ್ಯಕರ್ತ ಚರಣ್ ಎಂಬವರಿಗೆ ಹಲ್ಲೆ ನಡೆಸಿದ್ದು, ಪೊಲೀಸರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸುತ್ತಿತ್ತು.

ಹಲ್ಲೆಯನ್ನು ಖಂಡಿಸಿ ಸಂಘಟನೆಯ ಕಾರ್ಯಕರ್ತರು ಭಾನುವಾರ ಕಾವೂರು ಜಂಕ್ಷನ್‌ನಿಂದ ಪೊಲೀಸ್ ಠಾಣೆ ವರೆಗೆ ಮೆರವಣಿಗೆ ನಡೆಸಿದರು. ಆದರೆ ಪೊಲೀಸರು ಅವರನ್ನು ದಾರಿಮಧ್ಯೆಯೇ ಮುಂದೆ ಸಾಗದಂತೆ ತಡೆದರು. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಳಿಕ ಕಾವೂರು ಮೈದಾನಕ್ಕೆ ತೆರಳಿದ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು.

ಸ್ಥಳಕ್ಕಾಗಮಿಸಿದ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಅವರು ಸಂಘಟನೆಯ ಮುಖಂಡರಾದ ಜಗದೀಶ್ ಶೇಣವ, ಶರಣ್ ಪಂಪ್‌ವೆಲ್, ಭುಜಂಗ ಕುಲಾಲ್ ರಮೇಶ್ ಎಸ್., ಹರೀಶ್ ಮೂಡುಶೆಡ್ಡೆ ಅವರನ್ನು ಕಾವೂರು ಠಾಣೆಗೆ ಕರೆಸಿ ಮಾತುಕತೆ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬಿ.ನಾಗರಾಜ ಶೆಟ್ಟಿ, ಬಿಜೆಪಿ ನಗರ ದಕ್ಷಿಣ ಅಧ್ಯಕ್ಷ ರವಿಶಂಕರ ಮಿಜಾರು ಭೇಟಿ ನೀಡಿದ್ದರು. ಬಿಜೆಪಿಯ ಪ್ರಮುಖರಾದ ಸುಧೀರ್ ಶೆಟ್ಟಿ ಕಣ್ಣೂರು, ಸಂದೀಪ್ ಪದವಿನಂಗಡಿ, ವೇದವ್ಯಾಸ ಕಾಮತ್ ಮೊದಲಾದವರು ಪಾಲ್ಗೊಂಡಿದ್ದರು.

Write A Comment