ಮಂಗಳೂರು, ಅ.20: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಕಳೆದೆರಡು ದಿನಗಳಿಂದ ಅಪರಾಹ್ನದ ಬಳಿಕ ಸುರಿಯುತ್ತಿರುವ ಗುಡುಗು ಸಹಿತ ಮಳೆ ರವಿವಾರವೂ ಮುಂದುವರಿದಿದೆ. ಮಳೆಯೊಂದಿಗೆ ಗುಡುಗು ಮಿಂಚಿನ ಆರ್ಭಟ ಜೋರಾಗಿದೆ. ಶನಿವಾರ ಭಾರೀ ಸಿಡಿಲಿಗೆ ಬೆಳ್ತಂಗಡಿಯ ನಾರಾವಿಯಲ್ಲಿ ಬಾಲಕನೊಬ್ಬ ಮೃತಪಟ್ಟಿದ್ದರೆ, ಎರಡು ಕಡೆಗಳಲ್ಲಿ ಎರಡು ಹಸುಗಳು ಅಸುನೀಗಿವೆ. ಹಲವೆಡೆ ಮನೆ ಹಾಗೂ ವಿದ್ಯುತ್ ಪರಿಕರಗಳಿಗೆ ಹಾನಿಯುಂಟಾಗಿರುವುದು ವರದಿಯಾಗಿದೆ. ಮಂಗಳೂರು ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ. ಕರಾವಳಿಯ ತೀರದಲ್ಲಿ ಗಂಟೆಗೆ 60ರಿಂದ 65ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಇನ್ನೂ ಎರಡು ದಿನಗಳ ಕಾಲ ಕರಾವಳಿ ತೀರದಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಸಿಡಿಲಿನ ಆಘಾತಕ್ಕೆ ಬಾಲಕ ಬಲಿ :
ಸಿಡಿಲಿನ ಆಘಾತಕ್ಕೆ ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಾರಾವಿ ಸನಿಹ ಶನಿವಾರ ಸಂಜೆ ನಡೆದಿದೆ. ಈ ವೇಳೆ ಬಾಲಕನ ತಾಯಿಯೂ ಗಂಭೀರ ಗಾಯಗೊಂಡಿದ್ದರೆ, ಕೊಟ್ಟಿಗೆಯಲ್ಲಿದ್ದ ದನವೊಂದು ಅಸುನೀಗಿದೆ.
ನಾರಾವಿ ಗ್ರಾಮದ ಗೋಳಿದಡ್ಡದ ಕಾವಲಿಗುಡ್ಡೆ ಮನೆ ಸಿದ್ದು ಎಂಬವರ ಪುತ್ರ ಪ್ರಶಾಂತ್(14) ಮೃತ ಬಾಲಕ. ನಿನ್ನೆ ಸಂಜೆ ಈತ ಮನೆಯೊಳಗೆ ಇದ್ದ ವೇಳೆ ಸಿಡಿಲು ಬಡಿದ ಪರಿಣಾಮ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಅಲ್ಲೇ ಇದ್ದ ಆತನ ತಾಯಿ ರಾಧಾ ಕೂಡಾ ಗಂಭೀರ ಗಾಯಗೊಂಡಿದ್ದು, ಅವರನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿದ್ದು ಅವರು ಐದು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ರಾಧಾರಿಗೆ ಇಬ್ಬರು ಗಂಡು ಮಕ್ಕಳು. ತೀರಾ ಬಡತನದ ಕುಟುಂಬ ಇವರದ್ದಾಗಿದ್ದು, ಕಿರಿಯ ಮಗನಾಗಿದ್ದ ಪ್ರಶಾಂತ್ ನಾರಾವಿ ಪ್ರೌಢಶಾಲೆಯ 9ನೆ ತರಗತಿ ವಿದ್ಯಾರ್ಥಿಯಾಗಿದ್ದ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟ ಶೆಟ್ಟಿ, ವೇಣೂರು ಎಸ್ಸೈ ವಿನಾಯಕ ಬಿಲ್ಲವ ಭೇಟಿ ನೀಡಿದ್ದಾರೆ.
ಪುತ್ತೂರು : ಮನೆಗಳಿಗೆ ಹಾನಿ
ಮನೆಯೊಂದಕ್ಕೆ ಸಿಡಿಲು ಬಡಿದು ಅಪಾರ ಹಾನಿಯಾದ ಘಟನೆ ಶನಿವಾರ ರಾತ್ರಿ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಬಾಳಾಯ ಎಂಬಲ್ಲಿ ನಡೆದಿದ್ದು. ಮನೆ ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಬಾಲಾಯ ನಿವಾಸಿ ರಾಮಣ್ಣ ಗೌಡ ಎಂಬ ವರ ಮನೆಗೆ ಸಿಡಿಲು ಬಡಿದಿದೆ. ಇದ ರಿಂದ ಮನೆಯ ಗೋಡೆ ಬಿರುಕುಬಿಟ್ಟಿದೆ. ಹಂಚು, ವಿದ್ಯುತ್ ವಯರಿಂಗ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿವೆೆ.
ಮಜೀರ್ಪಳ್ಳ: ಮನೆಗೆ ಹಾನಿ
ಮಂಜೇಶ್ವರ ಸುತ್ತ ಮುತ್ತ ಶನಿವಾರ ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಮಜೀರ್ಪಳ್ಳದಲ್ಲಿ ಉಮೈರಾ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದ ಮನೆಯ ಎ.ಸಿ ಹಾಗೂ ಗೋಡೆಗೆ ಹಾನಿ ಸಂಭವಿಸಿದೆ.