ಮಂಗಳೂರು, ಅ.20: ಹೊಸ ತಂತ್ರಜ್ಞಾನದಲ್ಲಿ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ನಿರಂತರ ಶಿಕ್ಷಣ ಹಾಗೂ ಸಂಶೋಧನೆ ಅಗತ್ಯವಿದೆ. 19ನೆ ಶತಮಾನದ ಸಲಕರಣೆಗಳಿಂದ 21ನೆ ಶತಮಾನದ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಿಲ್ಲ ಎಂದು ನ್ಯಾಶನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿ ಉಪಕುಲಪತಿ ಡಾ. ವೆಂಕಟರಾವ್ ಹೇಳಿದ್ದಾರೆ.
ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿ ಮತ್ತು ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಹಾಗೂ ಸ್ನಾತಕೋತ್ತರ, ಸಂಶೋಧನಾ ಕೇಂದ್ರದ ವತಿಯಿಂದ ನಗರದ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ರವಿವಾರ ನಡೆದ ‘ಸೈಬರ್ ಕಾನೂನು ಮತ್ತು ಸೈಬರ್ ಭದ್ರತೆ’ ಕುರಿತ ಏಕದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೈಬರ್ ಅಪರಾಧದ ಬಗ್ಗೆ ಪೊಲೀಸ್, ನ್ಯಾಯಾಂಗ, ಶಿಕ್ಷಣ ಸಂಸ್ಥೆಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕು. ದೇಶದ 16 ಕಾನೂನು ಶಾಲೆಗಳ ಪೈಕಿ ಬೆಂಗಳೂರಿನ ಕಾನೂನು ಶಾಲೆಯನ್ನು ಕೇಂದ್ರ ಆಯ್ಕೆ ಮಾಡಿ ಹೊಸ ತಂತ್ರ ಜ್ಞಾನ ಅಪರಾಧ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದೆ. ಈಗಾಗಲೇ 15ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಮಾಡಲಾಗಿದೆ ಎಂದು ಡಾ.ವೆಂಕಟರಾವ್ ತಿಳಿಸಿದರು.
ಆಧುನಿಕ ಜಗತ್ತಿನಲ್ಲಿ ಅಪರಾಧದ ಪರಿಕಲ್ಪನೆಗಳು ಬದಲಾಗಿವೆ. ಹಿಂದೆ ವ್ಯಕ್ತಿ ಹಿಂಸೆಗೆ ಅಥವಾ ಸೊತ್ತು ನಷ್ಟಕ್ಕೀಡಾದಾಗ ಆ ಕೃತ್ಯವನ್ನು ಯಾರು ಮಾಡಿದ್ದಾರೆ ಎಂಬ ಮಾಹಿತಿ ಲಭಿಸುತ್ತಿತ್ತು. ಇದೀಗ ಕಂಪ್ಯೂಟರ್, ಅಂತರ್ಜಾಲದ ಮೂಲಕ ಅಪರಾಧ ಕೃತ್ಯಗಳು ನಡೆಯುತ್ತವೆ. ಹಾಗಾಗಿ ಯಾರು ಈ ಕೃತ್ಯ ನಡೆಸುತ್ತಾರೆ ಮತ್ತು ಇದರಿಂದ ಯಾರಿಗೆ ನಷ್ಟವಾಗುತ್ತದೆ ಎಂಬುವುದನ್ನು ಪತ್ತೆ ಮಾಡುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಆವಿಷ್ಕಾರ ಅಗತ್ಯವಿದೆ ಎಂದು ಡಾ.ವೆಂಕಟರಾವ್ ಅಭಿ ಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಡಿಎಂ ಕಾನೂನು ಕಾಲೇಜಿನ ಡಾ.ಪಿ.ಡಿ. ಸೆಬಾಸ್ಟಿಯನ್, ‘ಸೈಬರ್ ಕ್ರೈಂ ಎಂಬುದು ವಿಪರೀತ ಆಪತ್ತನ್ನು ತರುವ ಸ್ಥಿತಿಗೆ ತಲುಪಿದೆ. ಬ್ಯಾಂಕಿಂಗ್, ಕೈಗಾರಿಕಾ, ವಾಣಿಜ್ಯ ಕ್ಷೇತ್ರವನ್ನು ತಲ್ಲಣಗೊಳಿಸುವ ಶಕ್ತಿ ಅದಕ್ಕಿದೆ. ಅಲ್ಲದೆ ಅದು ಸೈಬರ್ ಭಯೋತ್ಪಾದನೆ ಮಟ್ಟಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಜಗತ್ತಿನಲ್ಲಿ ತಾಂತ್ರಿಕ ಕ್ರಾಂತಿ ನಡೆಯುತ್ತಿದೆ. 2030ರ ವೇಳೆಗೆ ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಯಿಂದ ಪಡೆಯುವ ವ್ಯವಸ್ಥೆ ಆಗಲಿದೆ. ಹಾಗಾಗಿ ಧನಾತ್ಮಕ ತಾಂತ್ರಿಕತೆಗೆ ಒತ್ತು ನೀಡುವ ಮೂಲಕ ಕ್ಷೇತ್ರದಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಸೂಕ್ತ ತಂತ್ರಜ್ಞಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ನ್ಯಾಶನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿ ಪ್ರೊ.ಟಿ.ವಿ.ಸುಬ್ಬ ರಾವ್ ಸೈಬರ್ ಕಾನೂನು ಬಗ್ಗೆ ಉಪನ್ಯಾಸ ನೀಡಿದರು. ಮಂಜುನಾಥ್ ಭಟ್, ಡಾ.ನಾಗರತ್ನಾ ಎ.ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಸ್ಡಿಎಂ ಕಾನೂನು ಕಾಲೇಜು ಹಾಗೂ ನ್ಯಾಶನಲ್ ಲಾ ಸ್ಕೂಲ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ನಡುವೆ ನಾನಾ ಕಾರ್ಯಕ್ರಮಗಳ ಸಂಯೋ ಜನೆಗೆ ಪರಸ್ಪರ ತಿಳುವಳಿಕೆಯ ಒಪ್ಪಂದಕ್ಕೆ ಡಾ. ಸೆಬಾಸ್ಟಿಯನ್ ಹಾಗೂ ಡಾ ಆರ್. ವೆಂಕಟೇಶ್ ರಾವ್ ಸಹಿ ಹಾಕಿದರು.