ಮಂಗಳೂರು : ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ರಚನಾ ಇದರ 2014 ರ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 16 ರಂದು ಭಾನುವಾರ ಸಂಜೆ 6.00 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಜ್ಯುಬಿಲಿ ಸಭಾಭವನದಲ್ಲಿ ಮಂಗಳೂರಿನ ಬಿಷಪ್ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕೇಂದ್ರ ರೈಲ್ವೆ ಸಚಿವರಾದ ಡಿ ವಿ ಸದಾನಂದ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಮಂಗಳೂರು ದಕ್ಷಿಣ ವಿಭಾಗದ ಶಾಸಕರಾದ ಜೆ.ಆರ್.ಲೋಬೊ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಸಂಸದ ನಳೀನ್ ಕುಮಾರ್ ಕಟೀಲು ಸೇರಿದಂತೆ ಹಲವಾರು ಪ್ರಮುಖ ಗಣ್ಯರ ಸಮಾರಂಭದಲ್ಲಿ ಭಾಗವಹಿಸಲಿರುವರು ಎಂದು ರಚನಾ ಅಧ್ಯಕ್ಷ ಜೋನ್ ಬಿ. ಮೊಂತೇರೊ ತಿಳಿಸಿದ್ದಾರೆ.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಚನಾ ಮಹಿಳಾ ಪ್ರಶಸ್ತಿ, ರಚನಾ ಕೃಷಿಕ, ರಚನಾ ವೃತ್ತಿಪರ, ರಚನಾ ಉದ್ಯಮಿ, ರಚನಾ ಅನಿವಾಸಿ ಉದ್ಯಮಿ/ ವೃತ್ತಿಪರ ಎಂಬ ಐದು ವಿಭಾಗಗಳಲ್ಲಿ ರಚನಾ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಡಾ| ಜೀನೆಟ್ ಪಿಂಟೊ, ಮುಂಬಯಿ – `ರಚನಾ ಮಹಿಳಾ ಪ್ರಶಸ್ತಿ’ – ಶ್ರೀ ಸ್ಟ್ಯಾನಿ ವೇಗಸ್, ಫೆರಾರ್ – `ರಚನಾ ಕೃಷಿಕ’ – ಶ್ರೀ ರಫಾಯೆಲ್ ಸಿಕ್ವೇರಾ, ಮುಂಬಯಿ – `ರಚನಾ ಉದ್ಯಮಿ’ – ಶ್ರೀ ಅನಿಲ್ ಕೀತ್ ಡಿಕ್ರೂಜ್, ಮುಂಬಯಿ – `ರಚನಾ ವೃತ್ತಿಪರ’ – ಶ್ರೀ ಲಿಗೋರಿ ಡಿಮೆಲ್ಲೊ, ಒಮಾನ್ – `ರಚನಾ ಅನಿವಾಸಿ ಉದ್ಯಮಿ‘ ಈ ಐವರನ್ನು 2014ನೇ ಸಾಲಿನ ರಚನಾ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
1998ರಲ್ಲಿ ಕಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯು ತನ್ನ ಮೂಲ ಆಶಯವಾದ ಕಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು, ತರಬೇತಿ, ಬಂಡವಾಳ ಜೋಡಿಸುವಿಕೆ; ತಾಂತ್ರಿಕ ಸಹಕಾರ ನೀಡುವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂದವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಲಾಯಿತು ತನ್ಮೂಲಕ ಕಳೆದ ವರ್ಷಗಳಿಂದ ಸಾಧರಣ 50 ಯುವ ಜನರಿಗೆ ತರಭೇತಿಯನ್ನು ನೀಡಲಾಗಿರುತ್ತದೆ. ಇದರ ಪರಿಣಾವಾಗಿ ತರಬೇತಿ ಪಡೆದವರು ಈಗಾಗಲೇ ಪ್ರಿಂಟಿಗ್ಪ್ರೆಸ್, ನ್ಯಾನೊ ಟ್ಯಾಕ್ಸಿ, ಕೋಳಿ ಸಾಕಾಣಿಕೆ, ಮೇಣದ ಭತ್ತಿ ತಯಾರಿಕೆ ಹಾಗೂ ಇನ್ನಿತರ ಸ್ವಉದ್ಯೋಗಳನ್ನು ಆರಂಭಿಸಿರುತ್ತಾರೆ.
ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವ್ಥತ್ತಿಪರರು, ಕೃಷಿಕರು ಹಾಗೂ ಮಹಿಳೆಯರು ಹಾಗೂ ಅನಿವಾಸಿ ಭಾರತೀಯರನ್ನು ಗುರುತಿಸಿ ಹುರಿದುಂಬಿಸುವ ಸಲುವಾಗಿ ರಚನಾ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಧಕರನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮವು ನಿರಂತರವಾಗಿ ನಡೆದಿದೆ.
ರಚನಾವತಿಯಿಂದ ೨೦೧೪ ಎಪ್ರಿಲ್ನಲ್ಲಿ ದೇಶ ವಿದೇಶಗಳ ಕಥೊಲಿಕ್ ಉದ್ಯಮಿಗಳನ್ನು ಒಟ್ಟುಗೂಡಿಸಿ `ಮ್ಯಾಗ್ನೆಟ್ 2014′ ಎಂಬ ಮಹಾಸಮ್ಮೇಳನವನ್ನು ಆಯೋಜಿಸಿತು. ಇದರ ಫಲಶ್ರುತಿಯಾಗಿ ರಚನಾ ಕೊ-ಅಪರೇಟಿವ್ ಸೊಸೈಟಿ ಹಾಗೂ ರಚನಾ ವೆಂಚರ್ ಕ್ಯಾಪಿಟಲ್ ಫಂಡ್ ಆರಂಭಿಸಲು ಚಾಲನೆ ನೀಡಿ ಅದಕ್ಕೆ ಬೇಕಾದ ಮೂಲ ಕೆಲಸಗಳನ್ನು ಮಾಡಿ ಇವುಗಳ ನಿರ್ವಹಣೆಗೆ ಮುಖ್ಯಸ್ಥರನ್ನಾಗಿ ರೊಯ್ ಕ್ಯಾಸ್ತೆಲಿನೊ (ಕೊ-ಅಪರೇಟಿವ್ ಸೊಸೈಟಿ), ಡೊ| ನೋರ್ಮನ್ ಮೆಂಡೋನ್ಸಾ (ಕ್ಯಾಪಿಟಲ್ ವೆಂಚರ್ ಫಂಡ್) ಮತ್ತು ಲೂವಿಸ್ ಜೆ. ಪಿಂಟೊ (ಎಂಟ್ರಪ್ರೆನರ್ ಡೆವಲಪ್ಮೆಂಟ್ ಸೆಲ್ಲ್) ಮುಂತಾದವರನ್ನು ರಚನಾ ಆಡಳಿತ ಮಂಡಳಿಯಿಂದ ನೇಮಿಸಿ ಮ್ಯಾಗ್ನೆಟ್ -2014 ಇದರಲ್ಲಿ ಉಳಿದ ಹಣವನ್ನು ಈ ಮೇಲಿನ ವಿಭಾಗಗಳಿಗೆ ವಿನಿಯೋಗಿಸಲು ನಿರ್ಣಯಿಸಲಾಗಿದೆ ಎಂದು ಜೋನ್ ಬಿ. ಮೊಂತೇರೊ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕಾರ್ಯದರ್ಶಿ ಅನಿಲ್ ಲೋಬೊ, ಆಡಳಿತ ಸಮಿತಿ ಸದಸ್ಯ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ತೆಲಿನೊ, ಆಡಳಿತ ಸಮಿತಿ ಸದಸ್ಯ ಹಾಗೂ ಮಾಂಡ್ ಸೊಭಾಣ್ ಅಧ್ಯಕ್ಷ ಲೂವಿಸ್, ಜೆ. ಪಿಂಟೊ ಮುಂತಾದವರು ಉಪಸ್ಥಿತರಿದ್ದರು.