ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕುಂದಾಪುರದ ಸಂಗಮ್ ಬಳಿ ಲಾರಿ ಮತ್ತು ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ತೀವೃತೆಗೆ ಬೈಕ್ ಸವಾರನ ತಲೆಯ ಭಾಗ ಸಂಪೂರ್ಣ ಚಿದ್ರಗೊಂಡಿದ್ದು ಗುರುತಿಸಲು ಕಷ್ಟವಾಗಿದೆ.
ಘಟನೆಯ ವಿವರ : ಬೈಕ್ಗೆ ಹಿಂದಿನಿಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮುಳ್ಳಿಕಟ್ಟೆ ಬಡಿಯ ಪೂಜಾರಿಯವರ ಮಗ ಗಣೇಶ ಪೂಜಾರಿ (42) ಎಂದು ಗುರುತಿಸಲಾಗಿದೆ. ಗಣೇಶ ಪೂಜಾರಿ ಇಂದು ಮಧ್ಯಾಹ್ನ 4.15ರ ಆಸುಪಾಸು ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಕುಂದಾಪುರದ ಸಂಗಮ್ ಪ್ರದೇಶದ ಬಳಿ ಹಿಂದಿನಿಂದ ಬಂದು ಲಾರಿ ಢಿಕ್ಕಿಯಾಗಿದೆ. ಬೈಕ್ ರಸ್ತೆಯ ಎಡಬದಿಗೆ ಬಿದ್ದರೆ ಬೈಕ್ ಸವಾರ ಗಣೇಶ್ ಅವರು ರಸ್ತೆಯ ಬಲಭಾಗಕ್ಕೆ ಎಸೆಯಲ್ಪಟ್ಟ ಕಾರಣ ಅವರ ತಲೆಯ ಮೇಲೆ ಲಾರಿ ಹಾದು ಹೋಗಿದೆ. ಪರಿಣಾಮ ಅವರ ಶಿರದ ಭಾಗ ಗುರುತು ಹಚ್ಚಲಾಗದಷ್ಟು ಜಜ್ಜಿ ಹೋಗಿದೆ.
ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.