ಮಂಗಳೂರು,ಅ.31: ಮತಾಂತರಕ್ಕೆ ಒತ್ತಾಯಿಸಿ ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಇಲ್ಲಿನ ದೇರೆಬೈಲ್ ಬಳಿ ಸಂಭವಿಸಿದೆ. ಬಿಲೀವರ್ಸ್ ಎಂಬ ಹೆಸರಿನ ತಂಡ ರೂಪರ್ಟ್ (23) ಎಂಬ ಯುವಕನ ಮೇಲೆ ಹಲ್ಲೆ ನಡೆಸಿದೆ. ಈ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ರೂಪರ್ಟ್ನನ್ನು ಮತಾಂತರಕ್ಕೆ ಒತ್ತಾಯಿಸಲಾಗಿತ್ತು ಎನ್ನಲಾಗಿದೆ. ಕೇವಲ ಏಸುಕ್ರಿಸ್ತನನ್ನು ಮಾತ್ರ ನಂಬುವ ಮತ್ತು ಚರ್ಚ್, ಫಾದರ್ಗಳ ಮೇಲೆ ನಂಬಿಕೆ ಇರಿಸದ ಬಿಲೀವರ್ಸ್ ತಂಡ ರೂಪರ್ಟ್ನ ಮನೆಯವರನ್ನು ಮತಾಂತರಕ್ಕೆ ಒತ್ತಾಯಿಸಿ ಅವರ ಮನಃಪರಿವರ್ತನೆ ಮಾಡಿತ್ತು. ಆದರೆ ರೂಪರ್ಟ್ ಮಾತ್ರ ಇದಕ್ಕೆ ಒಪ್ಪದ ಕಾರಣ ಆತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮನೆಯವರು ಕೂಡ ರೂಪರ್ಟ್ನನ್ನು ಮನೆಯಿಂದ ದೂರ ಇರಿಸಿದ್ದು ಆತ ಮನೆಯ ಶೆಡ್ನಲ್ಲೇ ಕಳೆದ ನಾಲ್ಕೈದು ವರ್ಷಗಳಿಂದ ವಾಸಿಸುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ನೀರು ಪೂರೈಕೆ ಮತ್ತಿತರ ವಿಷಯದಲ್ಲಿ ತಗಾದೆ ತೆಗೆದು ಮನೆಯವರು ಹಿಂಸೆ ನೀಡಿದ್ದರು ಎನ್ನಲಾಗಿದೆ. ಬುಧವಾರ ರಾತ್ರಿ ಆಗಮಿಸಿದ ಬಿಲೀವರ್ಸ್ ತಂಡದ ಸುಮಾರು ಆರು ಮಂದಿ ಸದಸ್ಯರು ರೂಪರ್ಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಕಾವೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.