ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರಿನ ದೂಪದಕಟ್ಟೆ ಎಂಬಲ್ಲಿನ ಸಂತ ಅಂತೋನಿ ಪ್ರಾರ್ಥನಾ ಮಂದಿರದ ಎದುರಿಗಿರುವ ಸಂತ ಆಂತೋನಿಯವರ ಮೂರ್ತಿಯನ್ನು ಭಾನುವಾರ ತಡರಾತ್ರಿ ಕಿಡಿಗೇಡಿಗಳು ಒಡೆದು ಕೆಡವಿದ ಘಟನೆ ನಡೆದಿದ್ದು ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಅಧೀನದ ಕಂಡ್ಲೂರು ಸಂತ ಆಂತೋನಿ ಪ್ರಾರ್ಥನಾ ಮಂದಿರ ಇದಾಗಿದ್ದು ಇದರ ಎದುರಿನ ಗೇಟ್ ಸಮೀಪದಲ್ಲಿ ನಿರ್ಮಿಸಿದ ಕೋಣೆಯಲ್ಲಿ ಅಂತೋನಿ ದೇವರ ಮೂರ್ತಿ ಇತ್ತು. ಕೋಣೆಯ ನಾಲ್ಕು ಕಡೆ ಗಾಜಿನ ಭದ್ರತೆಯಿದ್ದು ಒಂದು ಭಾಗದ ಗಾಜಿನ ಬಾಗಿಅಲನ್ನು ಕಿತ್ತ ದುಷ್ಕರ್ಮಿಗಳು ಒಳಗಿನ ಮೂರ್ತಿಯನ್ನು ಕೆಡವಿ ಅದನ್ನು ಎರಡು ಭಾಗವಾಗಿ ಒಡೆದು ಹಾಕಿದ್ದಾರೆ. ಇನ್ನು ಘಟನೆ ನಡೆದ ಸ್ಥಳವು ರಾಜ್ಯ ಹೆದ್ದಾರಿಯ ಸಮೀಪವೇ ಇದ್ದರೂ ಕೂಡ ಭಾನುವಾರ ರಾತ್ರಿಯಿಂದಲೂ ಮಳೆಯಿದ್ದ ಸುರಿಯುತ್ತಿದ್ದ ಕಾರಣ ಯಾರು ರಸ್ತೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಪ್ರಾರ್ಥನೆಗೆ ಬಂದ ವ್ಯಕ್ತಿಯೋರ್ವರು ಮೂರ್ತಿ ಇಗ್ಭಾಗವಾದ ಸ್ಥಿತಿಯನ್ನು ಕಂದು ಎಲ್ಲರಿಗೂ ತಿಳಿಸಿದ್ದಾರೆ. ಘಟನೆ ಬೆಳಕಿಗೆ ಬಂದ ಕೂಡಲೇ ಧರ್ಮಗುರುಗಳಾದ ವಿಶಾಲ್ ಲೋಬೋ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರದ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ., ಕುಂದಾಪುರ ಎಸ್.ಐ. ನಾಸೀರ್ ಹುಸೇನ್ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.
ಇನ್ನು ಅತೀ ಸೂಕ್ಷ್ಮ ಪ್ರದೇಶವೆಂದೇ ಬಿಂಬಿತವಾದ ಕಂಡ್ಲೂರು ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿರುವುದು ಸ್ಥಳಿಯರನ್ನು ಆತಂಕಕ್ಕೀಡುಮಾಡಿದೆ. ಕಳೆದ ಹಲವು ಸಮಯಗಳಿಂದ ಶಾಂತಿ ನೆಲೆಸಿದ್ದ ಕಂಡ್ಲೂರು ಪ್ರದೇಶದಲ್ಲಿ ಗಲಭೆ ಸ್ರಷ್ಟಿಸುವ ಹುನ್ನಾರ ಎಂದು ವಿವಿಧ ಧರ್ಮಗಳ ಮುಖಂಡರು ಅಭಿಪ್ರಾಯಪಟ್ಟಿದ್ದು ಘಟನೆಯನ್ನು ಖಂಡಿಸಿದ್ದಾರೆ.
Comments are closed.