*ಯೋಗೀಶ್ ಕುಂಭಾಸಿ
ಕುಂದಾಪುರ: ಮಂಗಳವಾರವನ್ನು ಶುಭ ಮಂಗಳವಾರ ಎಂದು ಎಲ್ಲರೂ ಕರಿತಾರೆ. ಆದರೇ ಆ ಪುಟ್ಟ ಕಂದಮ್ಮಗಳ ಪಾಲಿಗೆ ಹಾಗೂ ಅವರ ಪೋಷಕರ ಪಾಲಿಗೆ ಇಂದಿನ ಮಂಗಳವಾರ ಕರಾಳವಾಗಿ ಪರಿಣಮಿಸಿದೆ. ಮುಂದಿನ ಜೀವನದ ಬಗ್ಗೆ ಹತ್ತುಹಲವು ಕನಸುಗಳನ್ನಿಟ್ಟುಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿದ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿತ್ತು. ಶಾಲೆಗೆ ಹೊರಟ ಏನು ಅರಿಯದ ಪುಟ್ಟ ಕಂದಮ್ಮಗಳು ಬಾರದ ಲೋಕಕ್ಕೆ ತೆರಳಿದ್ದರು. ಅಲ್ಲಿ ನಡೆದ ಹ್ರದಯವಿದ್ರಾವಕ ಘಟನೆ ಇಡೀ ಪರಿಸರವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.
(ಡೆಲ್ವಿನ್, ಕ್ಲಾರಿಸ್ಸಾ, ಅನನ್ಯಾ, ಅಲ್ವಿತಾ, ರೋಸ್ಟೆನ್, ನಿಖಿತಾ, ಕೆಲಿಸ್ಟಾ,ಅನ್ಸಿಟಾ )
ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಮೋವಾಡಿ ಕ್ರಾಸ್ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ.21 ಮಂಗಳವಾರ ಬೆಳಿಗ್ಗೆ ನಡೆದ ಖಾಸಗಿ ಬಸ್ಸು ಮತ್ತು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮ್ನಿ ಕಾರು ಅಪಘಾತ ಊರಿಗೆ ಊರನ್ನೇ ತಲ್ಲಣಗೊಳಿಸಿದೆ. ಈ ಅಪಘಾತದಲ್ಲಿ ಓಮ್ನಿಯಲ್ಲಿದ್ದ ತ್ರಾಸಿ ಡಾನ್ ಬೋಸ್ಕೋ ಶಾಲೆಯ 8 ಮಕ್ಕಳು ಮೃತಪಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಉಳಿದ ವಿದ್ಯಾರ್ಥಿಗಳು ಹಾಗೂ ಶಾಲಾ ಶಿಕ್ಷಕಿ ಮತ್ತು ಕಾರು ಚಾಲಕ, ಬಸ್ಸಿನಲ್ಲಿದ್ದ ಇಬ್ಬರು ಪ್ರಯಾಣಿಕರು ಕುಂದಾಪುರ ಹಾಗೂ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವಿದ್ಯಾರ್ಥಿಗಳು:
ಅಪಘಾತದಲ್ಲಿ ಮೃತರಾದ ದುರ್ದೈವಿ ವಿದ್ಯಾರ್ಥಿಗಳನ್ನು ಯು.ಕೆ.ಜಿ. ಓದುತ್ತಿರುವ ಡೆಲ್ವಿನ್, ಒಂದನೇ ತರಗತಿ ವಿದ್ಯಾರ್ಥಿನಿಯರಾದ ಕ್ಲಾರಿಸ್ಸಾ, ಅನನ್ಯಾ, ಎರಡನೇ ತರಗತಿ ವಿದ್ಯಾರ್ಥಿನಿ ಅಲ್ವಿತಾ, ಮೂರನೇ ತರಗತಿ ವಿದ್ಯಾರ್ಥಿ ರೋಸ್ಟೆನ್, ಏಳನೇ ತರಗತಿಯ ನಿಖಿತಾ, ಕೆಲಿಸ್ಟಾ ಹಾಗೂ ಅನ್ಸಿಟಾ ಎನ್ನಲಾಗಿದೆ.
ಈ ಪೈಕಿ ನಿಖಿತಾ ಮತ್ತು ಅನನ್ಯಾ ಸಹೋದರಿಯರಾಗಿದ್ದು ಹೆಮ್ಮಾಡಿ ಕಟ್ ಬೆಲ್ತೂರು ನಿವಾಸಿಯಾದ ಲಾಯ್ಡ್ ಹಾಗೂ ಮರೀನಾ ಅವರ ಪುತ್ರಿಯರು.
ಗಾಯಗೊಂಡವರು:
ದೀಕ್ಷಿತ್, ಐಲಿಶ್, ಮಿನೋರಾ, ಮೆಲಿಸಾ, ವೀರಾ, ಲೆಸೆಲ್, ಆನ್ಸನ್, ರೆನ್ವಿಲ್, ಮಾರಿಯೋ, ಪ್ರಿನ್ಸಿಟಾ, ಆರ್ಫಾ ಗಾಯಗೊಂಡ ವಿದ್ಯಾರ್ಥಿಗಳು. ಇವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಶಾಲ ಶಿಕ್ಷಕಿ ಫಿಲೋಮಿನಾ ಹಾಗೂ ಓಮ್ನಿ ಕಾರು ಚಾಲಕ ಮಾರ್ಟಿನ್ ಒಲಿವೇರಾ, ಬಸ್ಸಿನ ಪ್ರಯಾಣಿಕರಾದ ಅವಿತಾ ಹಾಗೂ ಸುಪ್ರಿತಾ ಎಂಬಿಬ್ಬರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕರಾಳ ಮಂಗಳವಾರ…
ನಿತ್ಯದಂತೆ ಶಾಲಗೆ ಹೋಗುವ ಹುಮ್ಮನಸಿನ್ನಲ್ಲಿಯೇ ಈ 18 ಮಕ್ಕಳು ತಮ್ಮನ್ನು ಕರೆದಿಯ್ಯಲು ಬಂದ ಓಮ್ನಿ ಕಾರು ಏರಿ ಹೊರಟಿದ್ದಾರೆ. ಇನ್ನೇನು ರಸ್ತೆ ದಾಟಿ ಶಾಲೆ ರಸ್ತೆಗೆ ವಾಹನ ಮುಂದಕ್ಕೆ ಹೋಗಿದ್ದರೆ ಅವರೆಲ್ಲರೂ ಎಂದಿನಂತೆ ತಮ್ಮ ಪಾಠ-ಪ್ರವಚನದಲ್ಲಿ ತೊಡಗಿಸಿಕೊಳುತ್ತಿದ್ದರು. ಆದರೇ ಎದುರಿನಿಂದ ಬಂದ ಆ ಬಸ್ಸು ಈ ಮಕ್ಕಳ ಜೀವಕ್ಕೆ ಕಂಠಕ ತಂದಿತ್ತು. ಮುಳ್ಳಿಕಟ್ಟೆ, ಮೂವತ್ತುಮುಡಿ, ಕಟ್ಟು, ಬಗ್ಗೋಡಿ, ಸುಳ್ಸೆ ಮೊದಲಾದೆಡೆಯಿಂದ ಡಾನ್ ಬೋಸ್ಕೋ ಶಾಲೆಗೆ ಬರುವ ಈ ಮಕ್ಕಳು ಮಂಗಳವಾರವೂ ಕಾರನ್ನೇರಿ ಹೊರಟಿದ್ದಾರೆ. ಶಾಲೆಗೆ ಹೋಗುವ ತಿರುವಿನಲ್ಲಿ ಕಾರು ಚಲಿಸುವಾಗ ಅತ್ತಲಿಂದ ಬಂದ ಬಸ್ಸು ಕಾರಿನ ಮಧ್ಯಭಾಗಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ಪರಿಣಾಮ ಕಾರಿನಲ್ಲಿದ್ದ ಅಷ್ಟು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಗಂಗೊಳ್ಳಿ ಸೇರಿದಂತೆ ಸಾಕಷ್ಟು ಅಂಬುಲೆನ್ಸುಗಳು ಸ್ಥಳಕ್ಕೆ ತೆರಳಿ ಮಕ್ಕಳನ್ನು ರಕ್ಷಿಸಲು ಪ್ರಯತ್ನಪಟ್ಟರು. ಸಮಾಜಮುಖಿ ಕಳಕಳಿಯುಳ್ಳ ಹಲವು ನಾಗರೀಕರು ರಕ್ಷಣಾ ಕಾರ್ಯಕ್ಕೆ ಸಹಕಾರವನ್ನು ನೀಡಿದರು. ಆದರೇ ಈತನ್ಮಧ್ಯೆಯೂ ಅದೆಷ್ಟೋ ಮಂದಿ ಮೊಬೈಲ್ ಫೋಟೋ ತೆಗೆಯುವುದರಲ್ಲಿಯೇ ಬಾರೀ ಬ್ಯುಸಿಯಾಗಿದ್ದಾರಂತೆ. ಕೊನೆಗೂ ರಕ್ಷಣಾ ಕಾರ್ಯಕ್ಕೆ ಬಂದ ಮಂದಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಅವರುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ಮಾಡಿದ್ದಾರೆ. ಆದರೂ ನಡೆದ ಅವಘಡ ವಿಕೋಪವೇ ಆಗಿತ್ತು.
ಶಾಲೆಯವರಿಗೂ ಮಾಹಿತಿ ಇತ್ತು..
ಡಾನ್ ಬೋಸ್ಕೋ ಶಾಲೆಗೆ ಓಮಿನಿ ವಾಹನದಲ್ಲಿ ಮಕ್ಕಳನ್ನು ನಿಯಮ ಮೀರಿ ಕರೆತರುತ್ತಿರುವ ಬಗ್ಗೆ ಈ ಶಾಲೆ ಸಂಚಾಲಕರಿಗೆ ಮಾಹಿತಿ ಇದೆಯಂತೆ. ಆದ್ರೇ ವಿಚಾರ ಗೊತ್ತಿದ್ದರೂ ಇವರ ಬೇಜವಬ್ದರಿತನ, ಅಜಾರುಗತೆ ಪರಿಣಾಮವೇ ಈ ಘಟನೆಗೆ ಕಾರಣ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಓವರ್ ಲೋಡ್- ಬೀಳಲಿ ಕಡಿವಾಣ:
ಕಳೆದ ಎರಡು ವರ್ಷಗಳ ಹಿಂದೆ ಬೈಂದೂರು ಭಾಗದಲ್ಲಿ ಇಂತಹ ಘಟನೆಯೊಂದು ನಡೆದಿತ್ತು. ಶಾಲಾ ಬಸ್ಸು ಅಪಘಾತದಲ್ಲಿ ಹಲವರು ಗಾಯಾಳುಗಳಾಗಿ ಕೈಕಾಲು ಕಳೆದುಕೊಂಡಿದ್ದರು. ಈ ಬೆನ್ನಲ್ಲೇ ಜಿಲ್ಲೆ ಸೇರಿದಂತೆ ರಾಜ್ಯವನ್ನೇ ಬೆಚ್ಚಿಬೀಳಿಸುವ ಇಂತಹದೊಂದು ಪ್ರಕರಣ ನಡೆದುಹೋಗಿದೆ. ಅದೆಷ್ಟೋ ಶಾಲೆಗಳಲ್ಲಿ ಆಟೋ ರಿಕ್ಷಾ, ಕ್ಯಾಬ್, ಓಮ್ನಿ, ಮಿನಿ ಬಸ್ಸು ಹಾಗೂ ಶಾಲಾ ಬಸ್ಸುಗಳಲ್ಲಿ ವಿದ್ಯಾರ್ಥಿಗಳನ್ನು ಓವರ್ ಲೋಡ್ ಮಾಡಲಾಗುತ್ತಿದೆ. ಈ ಬಗ್ಗೆ ಆರ್.ಟಿ.ಓ. ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕಿದೆ. ಮಾತ್ರವಲ್ಲದೇ ಶಿಕ್ಷಣ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಆದರೇ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿದೆ. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದ್ರೇ ‘ನಾವು ಎಲ್ಲಾ ಶಾಲೆಗೆ ನೋಟಿಸ್ ಕೊಟ್ಟಿದ್ದೇವೆ. ಆದ್ರೇ ಅವರು ಪಾಲಿಸುತ್ತಿಲ್ಲಾ’ ಅಂತಾರೆ.
ಶಾಲೆ ವಿರುದ್ಧ ಪ್ರಕರಣ..?
ನಿಯಮ ಮೀರಿ ಮಕ್ಕಳನ್ನು ಓಮ್ನಿ ಕಾರಿನಲ್ಲಿ ಕರೆತರುವ ವಿಚಾರದ ಬಗ್ಗೆ ಶಾಲಾ ಸಂಚಾಲಕರು, ಪ್ರಾಂಶುಪಾಲರು ತಿಳಿದ್ದರೂ ಅಲ್ಲದೇ ಅಜಾಗರುಕತೆ ಪ್ರದರ್ಶಿಸಿದ ಓಮ್ನಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕರಿಗಳು ಗಂಗೊಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಕೂಡ ಗಂಭೀರವಾಗಿ ಪರಿಗಣಿಸಿ ಶಾಲೆಯಲ್ಲಿ ಜಾಣಕುರುಡು ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕಿದೆ.
ಘಟನೆ ಬಗ್ಗೆ ಅತೀವ ನೋವಾಗಿದೆ. ಶಾಲಾ ಮಕ್ಕಳ ವಾಹನದಲ್ಲಿ ಪರಿಮಿತಿಗಿಂತ ಹೆಚ್ಚುವರಿ ಮಕ್ಕಳನ್ನು ಕುಳ್ಳೀರಿಸಿಕೊಂಡು ಹೋಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಈಗಾಗಲೇ ಸಂಬಂದಪಟ್ಟ ಶಾಲೆಗಳಿಗೆ ಈ ಬಗ್ಗೆ ಸೂಕ್ತ ಎಚ್ಚರಿಕೆ ನೀಡಿದ್ದರೂ ಅಲ್ಲಲ್ಲಿ ಇಂತಹ ತಹ ಕೆಲಸಗಳು ಆಗುತ್ತಿದೆ. ಆದರೇ ಈ ಬಾರೀ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ. ಇನ್ನೊಂದೆರಡು ದಿವಸಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಚಿಂತನೆ ಮಾಡಿದ್ದೇವೆ.
– ಕೆ. ಅಣ್ಣಾಮಲೈ (ಎಸ್ಪಿ, ಉಡುಪಿ)
ಇದನ್ನೂ ಓದಿರಿ:
Comments are closed.