ಕರಾವಳಿ

ತ್ರಾಸಿ: ಅಪಘಾತದಲ್ಲಿ 8 ಮಕ್ಕಳ ಸಾವು; ಶೋಕಸಾಗರದಲ್ಲಿ ಜನತೆ; ಹೆಮ್ಮಾಡಿ ಬಂದ್; ಶಾಲಾ ಕಾಲೇಜು ರಜೆ

Pinterest LinkedIn Tumblr

ಕುಂದಾಪುರ: ಮಂಗಳವಾರ ಬೆಳಿಗ್ಗೆ ಕುಂದಾಪುರ ತಾಲೂಕು ತ್ರಾಸಿ ಸಮೀಪದ ಮೊವಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಬಸ್ಸು ಮತ್ತು ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಓಮ್ನಿ ಕಾರು ಅಪಘಾತದಲ್ಲಿ ಓಮ್ನಿಯಲ್ಲಿದ್ದ 8 ಮಂದಿ ಮಕ್ಕಳು ಸಾವನ್ನಪ್ಪಿ, ಸುಮಾರು 12 ಮಂದಿ ಗಾಯಗೊಂಡ ಘಟನೆಗೆ ಸಂಬಂಧಿಸಿ ಬುಧವಾರ ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಕರಾಳ ದಿನ ಆಚರಿಸಲಾಯಿತು.

ಇದೇ ಸಂದರ್ಭ ಸುಳ್ಸೆ ಪ್ರದೇಶದಲ್ಲಿ ಶಿವಾಜಿ ಫ್ರೆಂಡ್ಸ್ ಕದ್ರಿಗುಡ್ಡೆ ಹಾಗೂ ಮೂವತ್ತು ಮುಡಿ ಪ್ರದೇಶಗಳಲ್ಲಿ ಕಪ್ಪು ಬಾವುಟ ಹಾರಿಸಿ ಮೃತ ಮಟ್ಟ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಪದಾಧಿಕಾರಿಗಳು ಕಾನೂನು ಉಲ್ಲಂಘನೆ ಎಲ್ಲೆಂದರಲ್ಲಿ ನಡೆಯುತ್ತಿದ್ದು ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಗಮನಹರಿಸಬೇಕಿದೆ ಎಂದರು.

Hemmadi_Bundh_News (7) Hemmadi_Bundh_News (9) Hemmadi_Bundh_News (10) Hemmadi_Bundh_News (11) Hemmadi_Bundh_News (6) Hemmadi_Bundh_News (8) Hemmadi_Bundh_News (5) Hemmadi_Bundh_News (4) Hemmadi_Bundh_News (1) Hemmadi_Bundh_News (3) Hemmadi_Bundh_News (2)

ಮಕ್ಕಳನ್ನು ಕಳಕೊಂಡ ಮೂರು ಕುಟುಂಬಗಳು :
ಅಪಘಾತದಲ್ಲಿ ಮಡಿದ ಮಕ್ಕಳಲ್ಲಿ ಮೂರು ಕುಟುಂಬಗಳು ಎರಡೆರಡು ಮಕ್ಕಳು ಸಾವಿಗೀಡಾಗಿರುವುದು ಇಡೀ ಕರಾವಳಿಯನ್ನು ದುಃಖದ ಮಡಿಲಲ್ಲಿ ತುಂಬಿಸಿದೆ. ಮದುವೆಯಾಗಿ ಎಂಟು ವರ್ಷಗಳ ನಂತರ ಮಕ್ಕಳ ಭಾಗ್ಯ ಪಡೆದಿದ್ದ ಮೂವತ್ತು ಮುಡಿ ನಿವಾಸಿ ಪ್ರಸ್ತುತ ದುಬೈಯಲ್ಲಿ ಉದ್ಯೋಗಿಯಾಗಿರುವ ಸ್ಟೀವನ್ ಹಾಗೂ ಪತ್ನಿ ರೀಟಾ ಒಲಿವೆರಾ ಎಂಬುವರ ಮಕ್ಕಳಾದ ಕೆಲಿಸ್ಟಾ ಹಾಗೂ ಕ್ಲೆರಿಸ್ಸಾ ಮತ್ತು ಅವರ ಸಂಬಂಧಿಕರ ಮನೆಯಾದ ಅಲ್ವಿನ್ ಹಾಗೂ ರೇಷ್ಮಾ ಒಲಿವೆರಾ ಅವರ ಮಕ್ಕಳಾದ ಅನ್ಸಿಟಾ ಹಾಗೂ ಅಲ್ವಿಟಾ ಎಂಬ ಮಕ್ಕಳು ಅಪಘಾತದಲ್ಲಿ ಮೃತಪಟ್ಟಿದ್ದು, ಅಲ್ವಿನ್ ಅವರ ಇನ್ನೋರ್ವ ಪುತ್ರ ರೆನ್ವಿಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಎರಡು ಮಕ್ಕಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಅಲ್ವಿನ್ ಒಲಿವೆರಾ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ರೇಷ್ಮಾ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿಯೇ ಸಮೀಪದ ಸುಳ್ಸೆ ಕ್ರಾಸ್ ನಿವಾಸಿಯಾದ ಲಾಯಲ್ಡ್ ಡಿಸಿಲ್ವಾ ಹಾಗೂ ಮರಿನಾ ಡಿಸಿಲ್ವಾ ಅವರ ಮಕ್ಕಳಾದ ನಿಖಿತಾ ಹಾಗೂ ಅನನ್ಯ ಅವರೂ ಒಂದೇ ಕುಟುಂಬದಿಂದ ಅಪ್ಪ ಅಮ್ಮಂದಿರನ್ನು ತಬ್ಬಲಿ ಮಾಡಿ ಹೋಗಿದ್ದಾರೆ. ಮರಿನಾ ಡಿಸಿಲ್ವಾ ಕಳೆದ ವರ್ಷ ಡಾನ್ ಬಾಸ್ಕೋ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಪ್ರಸ್ತುತ ಇನ್ನೊಂದು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಳೆ ಅಂತ್ಯಸಂಸ್ಕಾರ:
ಅಪಘಾತದಲ್ಲಿ ಮೃತರಾದ ವಿದ್ಯಾರ್ಥಿಗಳಾದ ರಾಯಿಸ್ಟನ್, ಅನನ್ಯ ಹಾಗೂ ನಿಖಿತಾ ಅವರ ಅಂತ್ಯ ಕ್ರಿಯಾ ವಿಧಿಗಳನ್ನು ಜೂನ್ ೨೩ರ ಸಂಜೆ ನಾಲ್ಕು ಗಂಟೆಗೆ ತಲ್ಲೂರು ಚರ್ಚ್‌ನಲ್ಲಿ ನಡೆಯಲಿದ್ದು, ಮತ್ತುಳಿದ ಐವರು ವಿದ್ಯಾರ್ಥಿಗಳ ಅಂತ್ಯ ಕ್ರಿಯಾವಿಧಿಗಳು ಅದೇ ದಿನ ಗಂಗೊಳ್ಳಿ ಚರ್ಚಿನಲ್ಲಿ ಬೆಳಿಗ್ಗೆ ಹನ್ನೊಂದು ಗಂಟೆಗೆ ನಡೆಯಲಿದೆ.

Comments are closed.