ಕುಂದಾಪುರ: ತ್ರಾಸಿ ಮೊವಾಡಿ ಕ್ರಾಸ್ನಲ್ಲಿ ನಡೆದ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವಿದ್ಯಾರ್ಥಿಗಳ ಮನೆಗಳಿಗೆ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಕುಂದಾಪುರದ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದರು. ನಂತರ ಅವರು ಅಪಘಾತದಲ್ಲಿ ದುರ್ಮರಣಕ್ಕಿಡಾದ ಹೆಮ್ಮಾಡಿ ಪರಿಸರದ ಮೃತ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದರು. ಅಪಘಾತ ನಡೆದ ಮೊವಾಡಿ ಕ್ರಾಸ್ಗೆ ತೆರಳಿ ಸ್ಥಳವನ್ನು ಪರಿಶೀಲಿಸಿದ ಅವರು ಪೊಲೀಸ್ ಅಧಿಕಾರಿಗಳಲ್ಲಿ ಮಾಹಿತಿ ಪಡೆದರು. ನಂತರ ಡಾನ್ ಬಾಸ್ಕೋ ಶಾಲೆಗೆ ಭೇಟಿ ನೀಡಿ ಶಾಲಾ ಪ್ರಮುಖರ ಜೊತೆ ಚರ್ಚಿಸಿದರು. ಅಲ್ಲಿ ಪೋಷಕರಿಗೆ ಸಾಂತ್ವಾನದ ಮಾತುಗಳನ್ನು ಹೇಳಿದರು.
ನಂತರ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಮಾರ್ಗದರ್ಶನದಂತೆ ನಾನಿಲ್ಲಿ ಸಾಂತ್ವಾನ ಹೇಳಲಷ್ಟೇ ಬಂದಿದ್ದೇನೆ. ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಶಿಫಾರಸ್ಸು ಮಾಡುವಂತೆ ಮಾಹಿತಿ ನೀಡಲಾಗಿದೆ. ರಾಜ್ಯದ ಮಹಿಳಾ ಮತ್ತು ಮಕ್ಕಳ ಸಚಿವೆ ಉಮಾಶ್ರೀ ಅವರು ಈ ಬಗ್ಗೆ ದೂರವಾಣಿಯಲ್ಲಿ ಮಾಹಿತಿ ಪಡೆದಿದ್ದು, ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾ ಮಟ್ಟದ ರಕ್ಷಾ ಸಮಿತಿ ಸಭೆಯಲ್ಲಿ ಈ ವಿಚಾರ ಪ್ರಸ್ತಾವಿಸಿ, ಮಕ್ಕಳ ಸುರಕ್ಷತೆ ಬಗ್ಗೆ ಒತ್ತು ನೀಡುವಂತೆ ಸೂಚಿಸುತ್ತೇನೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪೋಷಕರು ಸಮನ್ವಯದಿಂದ ಮಕ್ಕಳ ಸುರಕ್ಷತೆಗೆ ಆಧ್ಯತೆಯಿಂದ ವ್ಯವಹರಿಸಬೇಕು ಎಂದು ಹೇಳಿದರು.
ಕಾನೂನು ಜ್ಯಾರಿಗೆ ತರುವುದು ಸುಲಭ. ಅದರ ಅನುಷ್ಠಾನಕ್ಕೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಯುವಜನ ಸಬಲೀಕರಣದ ಜವಾಬ್ದಾರಿಯೂ ನನ್ನ ಮೇಲಿದ್ದು, ಸಮಾಜದ ಸುವ್ಯವಸ್ಥೆಯಲ್ಲಿ ಯುವಜನರು ಕೂಡಾ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನೂತನ ಸಚಿವರಾಗುತ್ತಿರುವ ಸಂದರ್ಭ ಈ ದುರ್ಘಟನೆ ಅಪಶಕುನ ಎಂದೆನಿಸುವುದಿಲ್ಲವೇ ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಅಪಶಕುನ ಶುಭಶಕುನದ ಬಗ್ಗೆ ನಂಬಿಕೆ ಇಲ್ಲ. ಹುಟ್ಟು ಸಾವು ದೈವಿಚ್ಛೆ. ಆಕಸ್ಮಿಕ ದುರ್ಘಟನೆಗಳನ್ನು ಅಪಶಕುನ ಎಂದು ಭಾವಿಸುವುದು ಸರಿಯಲ್ಲ ಎಂದ ಅವರು, ನಾನಿಲ್ಲ ಬಂದಿರುವುದು ಸಾಂತ್ವಾನ ಹೇಳುವ ಸಲುವಾಗಿ ರಾಜಕೀಯ ವಿಚಾರವಾಗಿ ಮಾತನಾಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹಿರಿಯಣ್ಣ, ತಾ.ಪಂ.ಸದಸ್ಯ ರಾಜು ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ಹೆಗ್ಡೆ, ಇಚ್ಛಿತಾರ್ಥ ಶೆಟ್ಟಿ, ವರೋನಿಕಾ ಕರ್ನೆಲಿಯೋ, ಕಿಶನ್ ಹೆಗ್ಡೆ, ಕಿರಣ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.
Comments are closed.