* ಯೋಗೀಶ್ ಕುಂಭಾಸಿ
ಕುಂದಾಪುರ: ಛಲವೊಂದಿದ್ದರೇ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ತನ್ನ ಎಡಗೈ ಕಳೆದುಕೊಂಡ ವ್ಯಕ್ತಿಯೊಬ್ಬರ ಸಾಹಸಗಾಥೆಯೇ ಉದಾಹರಣೆ. ಎಡಗೈ ತುಂಡಾಗಿದ್ದರೂ ಕೂಡ ಅದನ್ನು ಪರಿಗಣಿಸದೇ ಸ್ವಾವಲಂಭಿ ಬದುಕು ನಡೆಸುತ್ತಿರುವ ತೆಕ್ಕಟ್ಟೆ ಕೊಮೆಯ ನಾಗರಾಜ್ ಮೊಗವೀರ ಅವರ ಲೈಪ್ ಸ್ಟೋರಿಯಿದು.
(ನಾಗರಾಜ್ ಅವರ ಕೆಲಸಗಳು)
(ನಾಗರಾಜ್ ಅವರು ಪುತ್ರಿಯೊಂದಿಗೆ)
(ನಾಗರಾಜ್ ಅವರ ನಿವಾಸ)
(ನಾಗರಾಜ್ ಅವರ ಸ್ನೇಹಿತರ ಬಳಗ)
ಹೀಗೆ ಹೊಲದಲ್ಲಿ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಿರುವವರು ನಾಗರಾಜ್ ಮೊಗವೀರ. ತೆಕ್ಕಟ್ಟೆ ಸಮೀಪದ ಕೊಮೆಯ ನಿವಾಸಿ. ನಾಲ್ಕನೇ ತರಗತಿ ಓದಿದ ನಾಗರಾಜ್ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ತೆರಳಿ ಅಲ್ಲಿ ಒಂದಷ್ಟು ವರ್ಷ ಹೋಟೇಲ್ ಕೆಲಸ ಮಾಡಿ ಊರಿಗೆ ಬರುತ್ತಾರೆ. ಬಳಿಕ ಕಾರ್ಖಾನೆಯೊಂದರಲ್ಲಿ ಹತ್ತು ವರ್ಷ ಕೆಲಸ ಮಾಡುತ್ತಾರೆ. ಸುಮಾರು ಏಳು ವರ್ಷದ ಹಿಂದೆ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಾಗ ಅಲ್ಲಿನ ಯಂತ್ರಕ್ಕೆ ಸಿಕ್ಕು ಎಡಗೈನ ಮೊಣಕೈ ತನಕವು ತುಂಡರಿಸಿ ಹೋಗಿತ್ತು. ಫ್ಯಾಕ್ಟರಿಯವರು ಕ್ರತಕ ಕೈ ಹಾಕಿಕೊಡುವ ಭರವಸೆಯನ್ನು ಮೊದಲಿಗೆ ನೀಡಿದರಾದರೂ ಅದಕ್ಕೆ ಲಕ್ಷಾಂತರ ಹಣ ಬೇಕಾಗುವುದೆಂದು ತಿಳಿದು ಕೈಕೊಟ್ಟುಬಿಟ್ಟ್ರು. ಇತ್ತ ತನ್ನ ಕೈ ಮೊದಲಿನಂತಾಗುವುದಿಲ್ಲ ಎಂಬ ನೋವು ಒಂದೆಡೆಯಾದರೇ ಗಾಯದ ನೋವು ಇನ್ನೊಂದೆಡೆ. ನಾಗರಾಜ್ ಅಕ್ಷರಷ: ಕುಗ್ಗಿಹೋಗಿದ್ದರು, ಬದುಕುವ ಆಸೆಯನ್ನು ತ್ಯಜಿಸಿದ್ದರು.
ಆದರೇ ಆಗಲೇ ಅವರಲ್ಲೊಂದು ಉತ್ಸಾಹ ಬಂದಿತ್ತು. ಕೈ ಇಲ್ಲದೆಯೂ ನಾನ್ಯಾಕೆ ಸ್ವಾವಂಭಿಯಾಗಿ ಬದುಕಬಾರದೆಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿತ್ತು. ಹಿಂದೆ ಮುಂದೆ ನೋಡದ ನಾಗರಾಜ್ ಗಾಯದ ನೋವು ಆರುವ ಮುನ್ನವೇ ಸಣ್ಣ ಪುಟ್ಟ ಕೆಲಸ ಮಾಡಲು ಮುಂದಾದರು. ಅಷ್ಟೇ ಅಲ್ಲ ಫೇಂಟಿಂಗ್, ಗಾರೆ, ಯಂತ್ರದ ಮೂಲಕ ಮರಕಡಿಯುವುದು, ತೆಂಗಿನ ಮರ ಏರಿ ಕಾಯಿ ಕೀಳುವುದು ಸೇರಿದಂತೆ ಟಿಲ್ಲರ್ ಓಡಿಸುವ ಕೆಲಸವನ್ನು ಸ್ವಪರಿಶ್ರಮದ ಮೂಲಕ ಕಲಿತೇಬಿಟ್ಟರು. ನಾಗರಾಜ್ ಅವರು ನಾಲ್ಕೈದು ವರ್ಷದ ಹಿಂದೆ ಸೆಕೆಂಡ್ ಹ್ಯಾಂಡ್ ಟಿಲ್ಲರ್ ಯಂತ್ರ ಖರೀದಿಸಿದ್ದಾರೆ. ಕೃಷಿಚಟುವಟಿಕೆ ಆರಂಭವಾಗುವ ಸಮಯದಲ್ಲಿ ಟಿಲ್ಲರ್ ಉಳುಮೆ ಆರಂಭಿಸುವ ಇವರು ಒಂದು ತಿಂಗಳು ಈ ಕಾಯಕದಲ್ಲಿ ತೊಡಗುತ್ತಾರೆ. ಉಳುಮೆ ಕಾರ್ಯಗಳು ನಿಲ್ಲುತ್ತಿದ್ದಂತೆಯೇ ಇತರೇ ಕಸುಬುಗಳಾದ ಸೌದೆ ಒಡೆಯುವುದು, ಮರ ಹತ್ತುವುದು, ಮೀನುಗಾರಿಕೆ, ಪೈಂಟಿಂಗ್, ಮರ ಕಡಿಯುವುದು ಹಾಗೂ ಗಾರೆ ಕೆಲಸವನ್ನು ಸ್ವತಃ ತಾನೇ ವಹಿಸಿಕೊಂಡು ಮಾಡುತ್ತಾರೆ.
ನಾಗರಾಜ್ ಕೈ ಇಲ್ಲದ್ದನ್ನು ಕ್ಯಾರೇ ಮಾಡದ ಗೋಪಾಡಿಯ ಸುಜಾತಾ ದಾಂಪತ್ಯ ಜೀವನದಲ್ಲಿ ನಾಗರಾಜ್ ಕೈಹಿಡಿದಿದ್ದಾರೆ. ದಂಪತಿಗಳಿಗೆ ಮೂರು ವರ್ಷ ಪ್ರಾಯದ ಕೀರ್ತನ ಎಂಬ ಮಗಳಿದ್ದು ಅಂಗನವಾಡಿ ಕಲಿಯುತ್ತಿದ್ದಾಳೆ. ನಾಗರಾಜ್ ಸಾಧನೆಗೆ ಬೆನ್ನೆಲುಬಾಗಿ ಪತ್ನಿ ಜೊತೆಗಿದ್ದು ಒಂದಷ್ಟು ಸ್ನೇಹಿತರು ನಾಗರಾಜರಿಗೆ ಸಪೋರ್ಟ್ ಮಾಡುತ್ತಾರೆ. ಕೊಮೆಯ ನಿವಾಸದಲ್ಲಿ ತಾಯಿ ಪುಟ್ಟು ಹಾಗೂ ಸಹೋದರ ಸಹೋದರಿಯೊಂದಿಗೆ ಈ ನಾಗರಾಜ್ ಪತ್ನಿ ಮಗಳೊಂದಿಗೆ ಕೂಡುಕುಟುಂಬದಲ್ಲಿ ವಾಸಿಸ್ತಾಯಿದ್ದಾರೆ. ತನ್ನ ಮಗಳಿಗೆ ಉತ್ತಮ ಶಿಕ್ಷಣ ನೀಡಿ ಆಕೆಯನ್ನು ಉನ್ನತ ಸ್ಥಾನದಲ್ಲಿ ಕಾಣಬೇಕೆಂಬ ಮಹದಾಸೆ ನಾಗರಾಜ್ ಅವರದ್ದು. ಅದಕ್ಕಾಗಿಯೇ ಸ್ವಂತದ್ದೊಂದು ಟ್ರಾಕ್ಟರ್ ಖರೀದಿಸಿ ದುಡಿಮೆ ಮಾಡುವ ಇಂಗಿತ ಹೊಂದಿರುವ ನಾಗರಾಜರಿಗೆ ಟ್ರ್ಯಾಕ್ಟರ್ ಖರೀದಿಗೆ ಸಾಲಸೌಲಭ್ಯ ಸಿಗುತ್ತಿಲ್ಲ ಎನ್ನುವ ದೊಡ್ಡ ಕೊರಗು ಕಾಡುತ್ತಿದೆ. ಸಾಲಸೌಲಭ್ಯ ಸಿಕ್ಕಲ್ಲಿ ಉತ್ತಮ ದುಡಿಮೆ ಮಾಡಿ ಸಾಲ ಕಟ್ಟುವೆ ಅಂತಾರೆ ನಾಗರಾಜ್.
ಸರಕಾರದ ಹತ್ತುಹಲವು ಸ್ಕೀಂಗಳ, ಸಬ್ಸಿಡಿಗಳು ಉಳ್ಳವರ ಪಾಲಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೇ ಒಂದು ಕೈಯಿಲ್ಲದೆಯೂ ಸ್ವಾವಲಂಭಿ ಬದುಕು ಸಾಗಿಸುವ ನಾಗರಾಜ್ ಅಂತವರಿಗೆ ಸರಕಾರ ದುಡಿಮೆಗೆ ಬೇಕಾದ ಸೌಲಭ್ಯಗಳನ್ನು ನೀಡುವ ಮೂಲಕ ಬೆಂಬಲ ನೀಡಬೇಕಾದ ಅಗತ್ಯವಿದೆ.
Comments are closed.