ವರದಿ : ಈಶ್ವರ ಎಂ. ಐಲ್/ ಚಿತ್ರ : ದಿನೇಶ್ ಕುಲಾಲ್
ಮುಂಬಯಿ: ಬಾಂಬೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಸಮಾಜ ಬಾಂಧವರ ಮಾಹಿತಿ ಹೊಂದಿರುವ ಬಂಟ್ಸ್ ಫೋಟೋ ಡೈರೆಕ್ಟರಿಯನ್ನು ಹೊರತರುವ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಜೂ. 24ರಂದು ಸಯಾನ್ ನಿತ್ಯಾನಂದ ಸಭಾಗೃಹದಲ್ಲಿ ನಡೆಯಿತು.
ಈ ವಿಶೇಷ ಸಭೆ ಯಲ್ಲಿ ನಗರದ ಕಟ್ಟಡ ನಿರ್ಮಾಣ ಸಂಸ್ಥೆ ರಿಲಾಯೆಬಲ್ ಬಿಲ್ಡರ್ಸ್ನ ಮುಖ್ಯ ಆಡಳಿತ ನಿರ್ದೇಶಕ, ಅಸೋಸಿಯೇಶನಿನ ಟ್ರಸ್ಟಿ ಸದಾನಂದ ಶೆಟ್ಟಿ ಅವರು ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಡೈರೆಕ್ಟರಿಯೊಂದಿಗೆ ದೊಡ್ಡ ಮೊತ್ತದ ನಿಧಿ ಕ್ರೋಢಿಕರಣವಾಗಲಿ. ಆ ಮೂಲಕ ಶಿಕ್ಷಣ ಸಂಕೀರ್ಣದ ಸರ್ವಾಂಗೀಣ ಸೌಲಭ್ಯಗಳು ರೂಪುಗೊಳ್ಳುವಂತಾಗಲಿ. ಈ ಬೃಹತ್ ಯೋಜನೆಗೆ ಎಲ್ಲರ ಸಹಕಾರ, ಪ್ರೋತ್ಸಾಹದ ಅಗತ್ಯವಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನಿನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್ ಶೆಟ್ಟಿ ಮಾತನಾಡಿ, ಶಿಕ್ಷಣದಿಂದ ಮಾನವ ಮಾನವನಾಗಿ ಬದುಕಲು ಸಾಧ್ಯ. ಬಂಟ ಸಮಾಜದ ಎಲ್ಲರೂ ವಿದ್ಯಾವಂತರಾಗಬೇಕು ಎಂಬ ಆಶಯದಿಂದ ಜೂಯಿ ನಗರದ ಬಂಟ್ಸ್ ಸೆಂಟರ್ನಲ್ಲಿ ಕಾಲೇಜು ಮತ್ತು ರಾತ್ರಿ ಕಾಲೇಜು ತೆರೆಯಲಾಗಿದೆ. ಕಾಲೇಜ್ನಲ್ಲಿ ಸುಸಜ್ಜಿತವಾದ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಇನ್ನಿತರ ಬೃಹತ್ ಯೋಜನೆಗಳು ಅಗತ್ಯವಿದ್ದುದರಿಂದ ನಿಧಿ ಸಂಗ್ರಹದ ಅಗತ್ಯವಿದೆ. ಅದಕ್ಕಾಗಿ ಬಂಟ್ಸ್ ಫೋಟೊ ಡೈರೆಕ್ಟರಿ ಹೊರತರಲಿದ್ದು, ಆ ಮೂಲಕ ಬಹುದೊಡ್ಡ ಮೊತ್ತವನ್ನು ಅಸೋಸಿಯೇಶನ್ ಸಂಗ್ರಹ ಮಾಡುವ ಉದ್ದೇಶವನ್ನು ಹೊಂದಿದೆ. ನಮ್ಮ ಸಾಧನೆಯ ಕನಸು ತಮ್ಮೆಲ್ಲರ ಪ್ರೋತ್ಸಾಹ, ಸಕಾರದಿಂದ ನನಸಾಗಬೇಕಾಗಿದೆ ಎಂದರು.
ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮುರಳಿ ಕೆ. ಶೆಟ್ಟಿ ಮಾತನಾಡಿ, 14 ವರ್ಷಗಳ ಹಿಂದೆ ಅಸೋಸಿಯೇಶನ್ ಡೈರೆಕ್ಟರಿಯನ್ನು ಹೊರ ತಂದಿದ್ದು, ಇದೀಗ ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹದೊಂದಿಗೆ ಬಂಟ್ಸ್ ಫೋಟೊ ಡೈರೆಕ್ಟರಿಯನ್ನು ಪ್ರಕಟಿಸಲಿದೆ. ಸದಾನಂದ ಶೆಟ್ಟಿ ಅವರಿಂದ ಮನವಿ ಪತ್ರ ಬಿಡುಗಡೆಗೊಂಡಿದ್ದು ಶುಭ ಸಂಕೇತವಾಗಿದೆ ಎಂದರು.
ಅಸೋಸಿಯೇಶನಿನ ಸಾಹಿತ್ಯ ಮತ್ತು ಉದ್ಯೋಗ ಸಮಿತಿಯ ಕಾರ್ಯಾಧ್ಯಕ್ಷ, ಬಂಟ್ಸ್ ಫೋಟೊ ಡೈರೆಕ್ಟರಿಯ ಮುಖ್ಯ ಕಾರ್ಯನಿರ್ವಾಹಕ ಉಪಕಾರ್ ಪ್ರಭಾಕರ್ ಶೆಟ್ಟಿ, ಉನ್ನತ ಶಿಕ್ಷಣ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ್ ಶೆಟ್ಟಿ ಮಾತನಾಡಿ ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ಅಸೋಸಿಯೇಶನಿನ ಉಪಾಧ್ಯಕ್ಷ ನ್ಯಾಯವಾದಿ ಸುಭಾಷ್ ಬಿ. ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ ಮತ್ತು ಶಕುಂತಳಾ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಸದಾನಂದ ಶೆಟ್ಟಿ ಅವರನ್ನು ಪದಾಧಿಕಾರಿಗಳು ಗೌರವಿಸಿದರು.
ಶಕುಂತಳಾ ಶೆಟ್ಟಿ ಅವರನ್ನು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಎಸ್. ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಟೇಬಲ್ ಟೆನಿಸ್ ಆಟಗಾರ ಕೃಷ್ ಸುಜೀರ್ ಶೆಟ್ಟಿ ಅವರನ್ನು ಅಸೋಸಿಯೇಶನಿನ ಕ್ರೀಡಾ ಸಮಿತಿಯ ವತಿಯಿಂದ 25 ಸಾವಿರ ರೂ. ನಗದನ್ನಿತ್ತು ಗೌರವಿಸಲಾಯಿತು. ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಚಂದ್ರಶೇಖರ್ ಎಸ್. ಶೆಟ್ಟಿ ಅವರು ಕೃಷ್ ಸುಜೀರ್ ಶೆಟ್ಟಿ ಅವರನ್ನು ಪರಿಚಯಿಸಿದರು. ಸಿಎ ಸುರೇಂದ್ರ ಶೆಟ್ಟಿ ವಂದಿಸಿದರು. ಸಭೆಯಲ್ಲಿ ಅಸೋಸಿಯೇಶನಿನ ಮಾಜಿ ಅಧ್ಯಕ್ಷ ಜೆ. ಎನ್. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಸರಳಾ ಬಿ. ಶೆಟ್ಟಿ ಉಪಸ್ಥಿತರಿದ್ದರು.
Comments are closed.