*ಯೋಗೀಶ್ ಕುಂಭಾಸಿ
ಕುಂದಾಪುರ: ಕಾಲೇಜಿಗೆ ತೆರಳಲು ಕೆ.ಎಸ್. ಆರ್.ಟಿ.ಸಿ. ಬಸ್ ಹತ್ತುವ ವೇಳೆ ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿಯ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಉಪ್ಪುಂದ ಅಂಬಾಗಿಲಿನ ಶೀತಲ್ ಹೋಟೆಲ್ ಎದುರುಗಡೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಉಪ್ಪುಂದ ನಿವಾಸಿ ತಿರ್ಕ್ ಶೆಟ್ಟಿ ಮನೆ ಸದಾಶಿವ ಶೆಟ್ಟಿ ಹಾಗೂ ಸವಿತಾ ದಂಪತಿಗಳ ಪುತ್ರ ರಾಘವೇಂದ್ರ ಶೆಟ್ಟಿ(21) ಮೃತ ದುರ್ದೈವಿ. ಈತ ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ಅಂತಿಮ ವಿಭಾಗದ ಬಿಕಾಂ ವಿದ್ಯಾರ್ಥಿ.
ಘಟನೆಯ ವಿವರ : ಭಟ್ಕಳದಿಂದ ಕುಂದಾಪುರದ ಕಡೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಉಪ್ಪುಂದದ ವಿದ್ಯಾರ್ಥಿ ಆದ ರಾಘವೇಂದ್ರ ಶೆಟ್ಟಿ ಕುಂದಾಪುರ ಕಾಲೇಜಿಗೆ ತೆರಳಬೇಕೆಂದು ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಏರಲು ತೆರಳಿದಾಗ ಬಸ್ಸು ಚಲಾಯಿಸಿದ್ದು ಆಯತಪ್ಪಿ ಹೆದ್ದಾರಿಗೆ ಬಿದ್ದಿದ್ದಾನೆ. ರಸ್ತೆಗೆ ಬಿದ್ದ ರಾಘವೇಂದ್ರ ಶೆಟ್ಟಿ ಅವರ ಮೇಲೆ ಹಿಂಬದಿಯಿಂದ ಬಂದ ಖಾಸಗಿ ಬಸ್ಸು ಹರಿದಿದ್ದು ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಕೂಡಲೇ ವಿದ್ಯಾರ್ಥಿಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಮಾಡಲಾಯಿತಾದರೂ ಕೂಡ ರಾಘವೇಂದ್ರ ಅವರು ಮಾರ್ಗ ಮಧ್ಯ ಸಾವನ್ನಪ್ಪಿದ್ದಾನೆ.
ವಿದ್ಯಾರ್ಥಿಗಳ ಆಕ್ರೋಷ..
ಕುಂದಾಪುರದ ಪ್ರತಿಷ್ಠಿತ ಕಾಲೇಜಾದ ಬಿ.ಬಿ. ಹೆಗ್ಡೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಯಾಗಿದ್ದ ರಾಘವೇಂದ್ರ ಅವರು ಪ್ರತಿಭಾನ್ವಿತ ವಿದ್ಯಾರ್ಥಿ. ಕಾಲೇಜಿಗೆ ಆಗಮಿಸುವ ವೇಳೆ ಬಸ್ಸು ಚಾಲಕ ಅಜಾಗರುಕತೆಯ ಚಾಲನೆಯಿಂದ ಮೃತಪಟ್ಟ ರಾಘವೇಂದ್ರ ಶೆಟ್ಟಿ ಸಾವಿನ ಬಗ್ಗೆ ವಿದ್ಯಾರ್ಥಿಗಳು ಆಕ್ರೋಷಗೊಂಡಿದ್ದರು. ಉಪ್ಪುಂದದಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ವಿದ್ಯಾರ್ಥಿಗಳ ಆಕ್ರೋಷವನ್ನು ಸಮಾಧನಪಡಿಸಲು ಹರಸಾಹಸ ಪಡಬೇಕಾದ ಸ್ಥಿತಿ ಪೊಲೀಸರದ್ದಾಗಿತ್ತು. ಕುಂದಾಪುರದಲ್ಲಿಯೂ ಸರಕಾರಿ ಆಸ್ಪತ್ರೆಯ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪೊಲೀಸ್ ಬಿಗಿ ಭದ್ರತೆ..
ಕುಂದಾಪುರ ಹಾಗೂ ಉಪ್ಪುಂದದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ ಹಿನ್ನೆಲೆ ವಿದ್ಯಾರ್ಥಿಗಳ ಆಕ್ರೋಷಭರಿತರಾಗಿದ್ದ ಕಾರಣ ಉಪ್ಪುಂದ ಹಾಗೂ ಕುಂದಾಪುರದಲ್ಲಿ ಪೊಲೀಸ್ ಬಿಗುಬಂದೋಬಸ್ತ್ ಮಾಡಲಾಗಿತ್ತು. ಕುಂದಾಪುರ ಸರಕಾರಿ ಆಸ್ಪತ್ರೆಯ ಎದುರು ಕೆ.ಎಸ್.ಆರ್.ಪಿ. ತುಕಡಿ ನಿಯೋಜಿಸಲಾಗಿತ್ತು. ಸರಕಾರಿ ಬಸ್ಸು ನಿಲ್ದಾಣದ ಸಮೀಪವೂ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲಾಗಿತ್ತು. ಕುಂದಾಉರ ಡಿವೈಎಸ್ಪಿ ಪ್ರವೀಣ್ ನಾಯಕ್ ಮಾರ್ಗದರ್ಶನದಲ್ಲಿ ಕುಂದಾಪುರ ಸಿಪಿಐ ದಿವಾಕರ್ ಪಿ.ಎಂ. ಹಾಗೂ ಎಸ್.ಐ. ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯಿಂದ ಪರಿಹಾರ…
ಕುಂದಾಪುರ ಎಜ್ಯುಕೇಶನ್ ಸೊಸೈಟಿ ಇದರ ಅಧೀನ ಸಂಸ್ಥೆಯಾದ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ ಅಪಘಾತದಲ್ಲಿ ಸಾವನ್ನಪ್ಪಿದ ಬಗ್ಗೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿತ್ತು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಮೃತ ವಿದ್ಯಾರ್ಥಿ ಕುಟುಂಬಕ್ಕೆ ೨.೫ ಲಕ್ಷ ಪರಿಹಾರ ನೀಡುವುದಾಗಿ ಸಂಸ್ಥೆ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಉಪ್ಪುಂದದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ರಸ್ತೆ ತಡೆ ಮಾಡಿದ ಹಿನ್ನೆಲೆ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ ನೀಡಿ ವಿದ್ಯಾರ್ಥಿಗಳ ಸಮಾಧಾನಪಡಿಸಿದರು.
ಇದನ್ನೂ ಓದಿರಿ:
ಬೈಂದೂರು: ರಸ್ತೆ ಅಪಘಾತ; ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಸಾವು
Comments are closed.