*ಯೋಗೀಶ್ ಕುಂಭಾಸಿ
ಕುಂದಾಪುರ: ಇತ್ತೀಚೆಗೆ ಸರಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವುದು ಹರಸಾಹಸವಾಗಿದೆ. ಈತನ್ಮಧ್ಯೆಯೇ ಶಾಲೆಯ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿಚಾರಗಳು ಪೋಷಕರಲ್ಲಿಯೂ ಕನ್ನಡ ಶಾಲೆಗಳ ಬಗ್ಗೆ ಒಂದಷ್ಟು ಗೊಂದಲಗಳನ್ನು ಹುಟ್ಟುಹಾಕುತ್ತಿರುವ ಬೆನ್ನಲ್ಲೇ ತಾವು ಓದಿದ ಶಾಲೆಗಾಗಿ ಅದರ ಏಳಿಗೆಗಾಗಿ ಆ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಂದಷ್ಟು ಉಪಾಯ ಮಾಡಿದ್ದಾರೆ. ಅದೇನೂ ಅಂತೀರಾ ಈ ಸ್ಟೋರಿ ನೋಡಿ.
ಇದು ಮರವಂತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಒಂದನೇ ತರಗತಿಯಿಂದ 7 ನೇ ತರಗತಿವರೆಗಿನ ಈ ಶಾಲೆಯಲ್ಲಿ ಎರಡು ಇಂಗ್ಲೀಷ್ ತರಗತಿಗಳಿದ್ದು ಸುಮಾರು 180 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡ್ತಿದ್ದಾರೆ. ಅಂದಾಜು 80 ವರ್ಷಗಳ ಹಳೆಯದಾದ ಈ ಶಾಲೆ ಈ ಭಾಗದಲ್ಲಿಯೇ ತುಂಬಾ ಫೇಮಸ್ಸು. ಇಲ್ಲಿನ ಉತ್ತಮ ಶಿಕ್ಷಣ ವ್ಯವಸ್ಥೆ ಹಾಗೂ ಶಿಸ್ತುಬದ್ಧ ಕ್ರಮಗಳಿಂದಾಗಿಯೇ ಆಸುಪಾಸಿನ ವಿದ್ಯಾರ್ಥಿಗಳ ಫೋಷಕರನ್ನು ಈ ಶಾಲೆ ಆಕರ್ಷಿಸಿದ್ದಲ್ಲದೇ ಇಲ್ಲಿಗೆ ಅವರನ್ನು ಕಳುಹಿಸುವಂತೆ ಮಾಡಿದೆ. ಹೀಗೆ ಶೈಕ್ಷಣಿಕ ವಿಚಾರದಲ್ಲಿ ಮುಂಚೂಣಿಯಲ್ಲಿರುವ ಈ ಶಾಲೆಯ ಉಳಿವೆಗೆ ಮತ್ತು ಬೆಳವಿಗೆ ಸತತ ಕೊಡುಗೆಯನ್ನು ನೀಡುತ್ತಾ ಬಂದವರು ಈ ಶಾಲೆಯ ಹಳೆ ವಿದ್ಯಾರ್ಥಿಗಳೆಂದರೇ ತಪ್ಪಾಗಲಾರದು.
14 ಲಕ್ಷ ವೆಚ್ಚದಲ್ಲಿ ಶಾಲಾ ವಾಹನ: 80 ವರ್ಷಗಳನ್ನು ಪೂರೈಸಿದ ಈ ಶಾಲೆಗೆ ಅಮ್ರತಭವನ ನಿರ್ಮಾಣ ಮಾಡಲಾಯ್ತು. ಶಾಲೆಯ ಏಳಿಗೆಗಾಗಿ ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಬೇಕೆಂಬ ಮಹದಾಸೆ ಹೊತ್ತ ದಯಾನಂದ ಎಸ್. ಬಳೆಗಾರ ಹಾಗೂ ಸಮಾನ ಮನಸ್ಕ ಒಂದಷ್ಟು ಮಂದಿಯ ತಂಡ ಈ ಶೈಕ್ಷಣಿಕ ವರ್ಷದಿಂದ ಸಂಘವನ್ನು ಕಟ್ಟಿ ರಿಜಿಸ್ಟಾರ್ ಮಾಡಿಬಿಟ್ರು. ಸಂಘವನ್ನು ಕಟ್ಟಿ ಸುಮ್ಮನೇ ಕೂರದ ಇವರು ವಿಶಿಷ್ಟ ಕಾರ್ಯಚಟುವಟಿಕೆಗಳ ಮೂಲಕ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಈ ವರ್ಷದಿಂದ ಶಾಲೆಯಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳನ್ನು ಆರಂಭಿಸಿ ಸುಮಾರು 53 ಮಕ್ಕಳನ್ನು ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಇಬ್ಬರು ಶಿಕ್ಷಕರು ಹಾಗೂ ಓರ್ವ ಆಯಾ ಅವರಿಗೆ ತಗಲುವ ಮಾಸಿಕ ವೇತನವನ್ನು ಹಳೆ ವಿದ್ಯಾರ್ಥಿ ಸಂಘವೇ ಭರಿಸುತ್ತಿದೆ. ಅಲ್ಲದೇ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲೆಗೆ 14 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶಾಲಾ ವಾಹನವನ್ನು ನೀಡಲಾಗಿದೆ.
ಹೌದು…ಜಿಲ್ಲೆಯಲ್ಲಿಯೇ ಹಳೆವಿದ್ಯಾರ್ಥಿ ಸಂಘವೊಂದು ತಾವು ಓದಿದ ಸರಕಾರಿ ಶಾಲೆಗೆ ಇಷ್ಟು ದೊಡ್ಡ ವೆಚ್ಚದಲ್ಲಿ ಶಾಲೆ ಬಸ್ಸನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ. ಖಾಸಗಿ ಶಾಲೆ ಮಕ್ಕಳು ಬಸ್ಸು ಏರಿ ಹೋಗುವ ಈ ದಿನದಲ್ಲಿ ತಾವು ಓದಿದ ಮರವಂತೆಯ ಸರಕಾರಿ ಶಾಲೆಯ ಮಕ್ಕಳು ನಡೆದು ಬರುವುದು ತಪ್ಪಿಸಿ ಅವರು ಕೂಡ ಬಸ್ಸಿನಲ್ಲಿ ಹೋಗಿ ಬರಬೇಕೆಂಬ ಮಹತ್ವಾಕಾಂಕ್ಷೇಯ ದೂರದ್ರಷ್ಟಿ ಇವರದ್ದು. ಮಾತ್ರವಲ್ಲದೇ ಈಗಿನ ಯು.ಕೆ.ಜಿ ಹಾಗೂ ಎಲ್.ಕೆ.ಜಿ. ಮಕ್ಕಳು ಮುಂದಿನ ವರ್ಷದಲ್ಲಿ ಇದೇ ಶಾಲೆಗೆ ದಾಖಲಿಸುವ ಬಗ್ಗೆ ಪೋಷಕರನ್ನು ಸೆಳೆಯುವ ಚಿಂತನೆ ಇವರದ್ದು. ನಿತ್ಯ ಬೆಳಿಗ್ಗೆ ಎರಡು ಟ್ರಿಪ್ ಮೂಲಕ ಕರಾವಳಿ ಮಾರ್ಗವಾಗಿ, ಐಸ್ ಫ್ಲಾಂಟ್, ಗಾಂಧಿನಗರ, ಮೂಡುಶಾಲೆ ಮೊದಲಾದೆಡೆ ಈ ಬಸ್ ಸಾಗಿ ವಿದ್ಯಾರ್ಥಿಗಳನ್ನು ಕರೆತಂದು ಸಂಜೆ ಮನೆಗೆ ಮರಳಿಸುವ ಕಾರ್ಯ ಮಾಡುತ್ತದೆ. ಬಸ್ಸಿನ ಇಂಧನ, ಡ್ರೈವರ್ ಸಂಬಳ ಮೊದಲಾದ ಎಲ್ಲಾ ವೆಚ್ಚವನ್ನು ಹಳೆ ವಿದ್ಯಾರ್ಥಿ ಸಂಘವೇ ಭರಿಸಲಿದೆ.
ಒಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ಎದುರಿಸುತ್ತಾ ಕನ್ನಡ ಮಾಧ್ಯಮ ಶಾಲೆಗಳು ನಶಿಸುತ್ತಿದೆ ಎಂಬ ಭೀತಿಯ ವಾತಾವರಣದ ಮಧ್ಯೆಯೇ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಇಂತಹ ಮಾದರಿ ಪ್ರಯತ್ನಕ್ಕೆ ಕೈಹಾಕಿದ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ನಿಜಕ್ಕೂ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
Comments are closed.