__ಸತೀಶ್ ಕಾಪಿಕಾಡ್
ಮಂಗಳೂರು, ಆಗಸ್ಟ್.26: ಕದ್ರಿ ಕ್ರಿಕೆಟರ್ಸ್ ಅಸೋಸಿಯೇಶನ್ ವತಿಯಿಂದ ಗುರುವಾರ ಸಂಜೆ ಕದ್ರಿ ಮೈದಾನದಲ್ಲಿ “ರಿದಮಿಕ್ ನೈಟ್” ಸಂಗೀತಾ ರಸಮಂಜರಿ ಕಾರ್ಯಕ್ರಮ ಜರಗಿತು.
ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉಳಿದಂತೆ ಖ್ಯಾತ ಗಾಯಕರು ಹಾಗೂ ಹಿನ್ನೆಲೆ ಸಂಗೀತಾಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧ್ಬುತ ಪ್ರದರ್ಶನ ನೀಡಿದರು.
ಅತಿಥಿಗಳಾಗಿ ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ಪಾಲಿಕೆ ಸಚೇತಕ ಎಂ. ಶಶಿಧರ್ ಹೆಗ್ಡೆ, ನಗರದ ಖ್ಯಾತ ಉದ್ಯಮಿಗಳಾದ ಎ.ಜೆ. ಶೆಟ್ಟಿ, ರತ್ನಾಕರ್ ಜೈನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಬಿಗಿ ಬಂದೋಬಸ್ತ್:
ನಟಿ ರಮ್ಯಾ ಅವರು ಗುರುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದು ಕಾರಿನಲ್ಲಿ ಹೊರಟಾಗ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಲಾಗಿತ್ತು.ಹೀಗಾಗಿ ರಮ್ಯಾ ಅವರು ಭಾಗವಹಿಸಿದ್ದ ಈ ರಿದಮಿಕ್ ನೈಟ್ ಕಾರ್ಯಕ್ರಮದ ವೇದಿಕೆಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಾಕಿಸ್ತಾನ ನರಕ ಅಲ್ಲ ಎಂದು ಹೇಳಿ ವಿವಾದಕ್ಕೆ ಸಿಲುಕಿರುವ ನಟಿ ರಮ್ಯಾ ಅವರು ಇದೀಗ ಮಾಧ್ಯಮವೊಂದಕ್ಕೆ ಮಂಗಳೂರು ನರಕ ಎಂಬರ್ಥದಲ್ಲಿ ಹೇಳಿಕೆ ನೀಡಿ ಪ್ರತಿಭಟನೆ ಎದುರಿಸಿದ್ದಾರೆ. ರಮ್ಯಾ ಹೇಳಿಕೆ ವಿರೋಧಿಸಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಮ್ಯಾ ಅವರು ಕಾರ್ಯಕ್ರಮಕ್ಕೆ ಆಗಮಿಸುವಾಗ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು.
ವೇದಿಕೆಯಲ್ಲಿ ಮಹಿಳಾ ಇನ್ಸ್ಪೆಕ್ಟರ್, 4 ಮಹಿಳಾ ಕಾನ್ಸ್ಟೇಬಲ್ ಗಳನ್ನು ರಮ್ಯಾ ಅವರ ಭದ್ರತೆಗೆ ನಿಯೋ ಜಿಸಲಾಗಿತ್ತು. ರಮ್ಯಾ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು.
ಸ್ವಲ್ಪ ಅಲ್ಲ… ತುಂಬಾ ತಡವಾಗಿ ವೇದಿಕೆಗೆ ಬಂದ ರಮ್ಯಾ:
ಕಾರ್ಯಕ್ರಮವನ್ನು ಸಂಜೆ 7.30ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ರಮ್ಯಾ ವೇದಿಕೆಗೆ ಬಂದಿದ್ದು ಬರೋಬ್ಬರಿ 9.30ಕ್ಕೆ.
8 ಗಂಟೆಗೆ ವೇದಿಕೆಯತ್ತ ಬಂದಿದ್ದ ಸಚಿವ ರಮಾನಾಥ ರೈ ಅವರು, ರಮ್ಯಾ ಬರುವ ಮೊದಲೇ ನಿರ್ಗಮಿಸಿದ್ದರು. ಸಚಿವ ಯು.ಟಿ.ಖಾದರ್ ರಮ್ಯಾ ಬರುವ ಸಂದರ್ಭ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತ್ತಿದ್ದರೂ ವೇದಿಕೆಗೆ ಬರಲಿಲ್ಲ. ರಮ್ಯಾ ನಿರ್ಗಮನದ ಬಳಿಕ ವೇದಿಕೆ ಮೇಲೆ ಬಂದರು……… ಇದು ದ.ಕ.ಜಿಲ್ಲೆಯ ಕಾಂಗ್ರೆಸ್ನಲ್ಲೂ ಎರಡು ಬಣಗಳಿವೆ ಎಂಬುವುದನ್ನು ಸೂಚಿಸುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ.?
__ಸತೀಶ್ ಕಾಪಿಕಾಡ್
Comments are closed.