ಹಾವೇರಿ: ತಾಲ್ಲೂಕಿನ ದೇವಿಹೊಸೂರ ಗ್ರಾಮದಲ್ಲಿ ಭಾನುವಾರ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ (‘ಹಟ್ಟಿ ಹಬ್ಬ’) ಮೈನವಿರೇಳಿಸುವಂತಿತ್ತು. ಸ್ಪರ್ಧೆ ನೋಡಲೆಂದು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯಿದೆ ಅಡಿ 1960ರ ಸೆಕ್ಷನ್ 3ರ ಪ್ರಕಾರ ದಕ್ಷಿಣ ಕನ್ನಡದಲ್ಲಿ ಕೆಸರು ಗದ್ದೆಯ ಕಂಬಳ ನಿಷೇಧಿಸಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದು, ಇಲ್ಲಿ ಮಾತ್ರ ಹೋರಿ ಬೆದರಿಸುವ ಸ್ಪರ್ಧೆ ನಿರಾತಂಕವಾಗಿ ನಡೆಯುತ್ತಿದೆ.
ಈ ಸ್ಪರ್ಧೆ ದಿಪಾವಳಿ ಹಬ್ಬದ ಬಳಿಕ ಸುಮಾರು ಎರಡು ತಿಂಗಳ ಕಾಲ ಅಲ್ಲಲ್ಲಿ ನಡೆಯುತ್ತದೆ. ರೈತರ ಹಬ್ಬವಾಗಿ, ಸಾಂಪ್ರದಾಯಿಕ ಆಚರಣೆಯಾಗಿ ನಡೆದುಕೊಂಡು ಬಂದಿದೆ.
ರೈತರು ತಮ್ಮ ಹೋರಿಗೆ ಝೂಲಾ, ಕೊಬ್ಬರಿ, ಗೆಜ್ಜೆ, ರಿಬ್ಬನ್, ವಿವಿಧ ರೀತಿಯ ಬಣ್ಣ ಬಣ್ಣದ ಬಟ್ಟೆಗಳು, ಬಲೂನ್ಗಳಿಂದ ಅಲಂಕರಿಸಿ ಹಬ್ಬ ನಡೆಯುವ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತದೆ.
ರೈತರು ತಮ್ಮ ಹೋರಿಗಳಿಗೆ ಸಿಂಹದ ಮರಿ, ಅರ್ಜುನ, ಗಾನಯೋಗಿ, ಸಿಪಾಯಿ, ಸುಂಟರಗಾಳಿ, ಗಾಳಿಪಟ, ಅಭಿಮನ್ಯು, ಸಾಹಸ ಸಿಂಹ, ಅಂಜದ ಗಂಡು ಹಾಗೂ ಸಿನೆಮಾ ನಟರ ಹೆಸರುಗಳಿಂದ ಕರೆಯುತ್ತಾರೆ. ಹೋರಿ ಹಿಡಿಯಲು ಮತ್ತು ಕೊಬ್ಬರಿ ತೆಗೆಯಲು ತಾ ಮುಂದೆ ನಾ ಮುಂದೆ ಎಂದು ಮುಗಿಬೀಳುತ್ತಾರೆ. ಅಲ್ಲದೇ ಸ್ಪರ್ಧೆಯಲ್ಲಿ ವಿಜೇತವಾದ ಹೋರಿಗೆ ಬಹುಮಾನ ನೀಡಲಾಗುತ್ತದೆ.