ಬೆಂಗಳೂರು, ನ.30: ಅಸಂಘಟಿತ ಕಾರ್ಮಿಕರಾದ ಮನೆ ಕೆಲಸಗಾರರಿಗೆ ಭವಿಷ್ಯ ನಿಧಿ ಯೋಜನೆಯನ್ನು ಈ ಕೂಡಲೇ ಜಾರಿ ಮಾಡಬೇಕೆಂದು ಸಿಐಟಿಯು ಕಾರ್ಮಿಕ ಮುಖಂಡ ಉಮೇಶ್ ಸರಕಾರವನ್ನು ಒತ್ತಾಯಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನೆ ಕೆಲಸಗಾರರ ಸಂಘ ನಗರದ ಪುರಭವನದ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯೊಂದರಲ್ಲಿಯೇ ಲಕ್ಷಾಂತರ ಮಂದಿ ಮನೆಕೆಲಸಗಾರರಿದ್ದು, ಇವರಿಗೆ ಕಾರ್ಮಿಕ ಕಾನೂನು ಅನ್ವಯವಾಗದೆ ಶೋಷಣೆಗೆ ಒಳಗಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮಾಂತರ ಪ್ರದೇಶದಿಂದ ಪ್ರತಿನಿತ್ಯ ಸಾವಿರಾರು ಮಂದಿ ನಗರಕ್ಕೆ ವಲಸೆ ಬರುತ್ತಾರೆ. ಕುಟುಂಬದೊಂದಿಗೆ ವಲಸೆ ಬರುವ ಮಹಿಳೆಯರಿಗೆ ಮನೆ ಕೆಲಸ ಬಿಟ್ಟರೆ ಬೇರೆ ಉದ್ಯೋಗ ಗೊತ್ತಿರುವುದಿಲ್ಲ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಮನೆ ಮಾಲಕರು ಕನಿಷ್ಠ ಸಂಬಳ ಕೊಟ್ಟು ದಿನಪೂರ್ತಿ ದುಡಿಸಿಕೊಳ್ಳುತ್ತಾರೆ. ಹಾಗಾಗಿ ಸರಕಾರ ಇವರ ನೆರವಿಗೆ ಬರಬೇಕೆಂದು ಅವರು ಮನವಿ ಮಾಡಿದರು.
ರಾಜ್ಯ ಸರಕಾರ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ದೆ 2006ರನ್ನು ರೂಪಿಸಿದೆ. ಆದರೆ, ಈ ಕಾಯ್ದೆಯಡಿ ಮನೆ ಕೆಲಸಗಾರರು ಹೊರಗಿಡಲಾಗಿದೆ. ಇದರಿಂದ ಕಾರ್ಮಿಕ ಕಾನೂನಿನ ಪ್ರಕಾರ ಸಿಗಬೇಕಾದ ಎಲ್ಲ ಸೌಲಭ್ಯಗಳಿಂದ ಮನೆ ಕೆಲಸಗಾರರು ವಂಚಿತರಾಗಿದ್ದಾರೆ. ಹಾಗಾಗಿ ಮನೆ ಕೆಲಸಗಾರರನ್ನು 2006ರ ಕಾರ್ಮಿಕರ ಸಾಮಾಜಿಕ ಭದ್ರತೆ ಕಾಯ್ಡೆಯಡಿ ತರಬೇಕೆಂದು ಕಾರ್ಮಿಕ ಮುಖಂಡ ಉಮೇಶ್ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಜಿಲ್ಲಾ ಮನೆ ಕೆಲಸ ಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯ ದರ್ಶಿ ವಿಜಯಲಕ್ಷ್ಮೀ ಹಾಗೂ ಖಜಾಂಚಿ ಶಾರದಾಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.