ಬೆಂಗಳೂರು, ನ. 30: ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ತ್ವರಿತ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ ಕಾರ್ಯಕರ್ತರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಸೋಮವಾರ ಇಲ್ಲಿನ ಕೆಜಿ ರಸ್ತೆಯಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ದಂಡೋರ ಅಧ್ಯಕ್ಷ ಎಂ.ಶಂಕರಪ್ಪ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಂಕರಪ್ಪ, ಪರಿಶಿಷ್ಟ ಜಾತಿಯಲ್ಲೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯಕ್ಕೆ ಮೀಸಲಾತಿ ಸೌಲಭ್ಯದ ಹಂಚಿಕೆಯಲ್ಲಿ ಅನ್ಯಾ ಯವಾಗುತ್ತಿದ್ದು, ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ದರು. 2012ರಲ್ಲಿ ನ್ಯಾ.ಸದಾಶಿವ ಆಯೋಗದ ವರದಿಯ ನ್ನು ಸರಕಾರಕ್ಕೆ ಸಲ್ಲಿಸಿದ್ದರೂ, ಮಾದಿಗರಿಗೆ ಶೇ.6, ಹೊಲೆಯರಿಗೆ-ಶೇ.5 ಮತ್ತು ಸ್ಪಶ್ಯ ಜಾತಿಗಳಿಗೆ ಶೇ.3 ಹಾಗೂ ಇತರೆ ಜಾತಿಗಳಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿರುವುದು ನ್ಯಾಯಯುತವಾಗಿದೆ. ಹೀಗಾಗಿ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕವನ್ನು ಹೊರತುಪಡಿಸಿ ದೇಶದ ಇತರ ಯಾವುದೇ ರಾಜ್ಯದಲ್ಲಿಯೂ ಸ್ಪಶ್ಯ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿಲ್ಲ. ಆದರೆ, ರಾಜ್ಯದಲ್ಲಿ ಅಸ್ಪಶ್ಯ ಸಮುದಾಯಕ್ಕೆ ದಕ್ಕ ಬೇಕಾದ ಮೀಸಲಾತಿ ಸ್ಪಶ್ಯ ಜಾತಿಗಳ ಪಾಲಾಗುತ್ತಿದ್ದು, ಅಸ್ಪಶ್ಯರಿಗೆ ಅನ್ಯಾಯ ಆಗುತ್ತಿದೆ. ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಆಯೋಗದ ವರದಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಆನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸ ಲಾಯಿತು. ಧರಣಿಯಲ್ಲಿ ಮುಖಂಡರಾದ ಆರ್.ಪ್ರಕಾಶ್, ಮುನಿರಾಜು, ನಾರಾಯಣ ಸ್ವಾಮಿ, ಗೌರಿಶಂಕರ್, ನರಸಿಂಹಮೂರ್ತಿ, ನಟರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.