ಕರ್ನಾಟಕ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂಟು ವರ್ಷದ ಮಗಳನ್ನೇ ಕೊಂದ ಮಹಾತಾಯಿ !

Pinterest LinkedIn Tumblr

mur5der

ಬೆಂಗಳೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ತನ್ನ ಎಂಟು ವರ್ಷದ ಮಗಳನ್ನೇ ಕೊಲೆಗೈದ ಮಹಿಳೆ ಈಗ ಪ್ರಿಯಕರನ ಜತೆ ಜೈಲು ಸೇರಿದ್ದಾಳೆ. ಪೀಣ್ಯ ಸಮೀಪದ ಶಿವಪುರದಲ್ಲಿ ಭಾನುವಾರ ಬಬ್ಲಿ ಮಂಡಲ್ ಎಂಬ ಬಾಲಕಿಯ ಕೊಲೆಯಾಗಿತ್ತು. ಈ ಸಂಬಂಧ ಆಕೆಯ ತಾಯಿ ರೇಖಾ ಮಂಡಲ್ (32) ಹಾಗೂ ಆಕೆಯ ಪ್ರಿಯಕರ ಬಿದ್ಯುತ್ (34) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ರೇಖಾ, ಪತಿ ಮತ್ತು ಮಗಳ ಜತೆ ಎಂಟು ವರ್ಷಗಳಿಂದ ಚಿಕ್ಕಬಿದರುಕಲ್ಲು ಬಳಿ ನೆಲೆಸಿದ್ದಳು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ, ನಾಲ್ಕು ವರ್ಷಗಳ ಹಿಂದೆ ಬಿದ್ಯುತ್‌ನ ಪರಿಚಯವಾಗಿತ್ತು. ಬಳಿಕ ಅವರ ನಡುವೆ ಪ್ರೇಮಾಂಕುರವಾಗಿ ಮದುವೆ ಆಗಲೂ ನಿರ್ಧರಿಸಿದ್ದರು.

ಈ ವಿಷಯ ತಿಳಿದು ಕೆರಳಿದ ಪತಿ, ರೇಖಾಳಿಂದ ಪ್ರತ್ಯೇಕವಾಗಿದ್ದ. ನಂತರ ಆಕೆ, ಮಗಳನ್ನು ಕರೆದುಕೊಂಡು ಶಿವಪುರದ ಬಿದ್ಯುತ್ ಮನೆಗೆ ವಾಸ್ತವ್ಯ ಬದಲಾಯಿಸಿದ್ದಳು. ಬಬ್ಲಿಯು ಆಗಾಗ್ಗೆ ತಂದೆಯ ಬಗ್ಗೆ ವಿಚಾರಿಸುತ್ತಿದ್ದ ಕಾರಣ ಇವರಿಬ್ಬರೂ ಕುಪಿತಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ರಾತ್ರಿ ಕೂಡ ಬಬ್ಲಿ ತಂದೆಯ ಬಗ್ಗೆ ಕೇಳಿದ್ದಾಳೆ. ಇದರಿಂದ ಕುಪಿತಗೊಂಡ ರೇಖಾ, ಮರದ ತುಂಡಿನಿಂದ ತಲೆಗೆ ಹೊಡೆದಿದ್ದಾಳೆ. ಪೆಟ್ಟಿನಿಂದ ಮಗು ಪ್ರಜ್ಞೆ ಕಳೆದುಕೊಂಡಿದೆ. ಆಗ ಬಿದ್ಯುತ್ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ್ದಾನೆ.

ಸ್ವಲ್ಪ ಸಮಯದ ಬಳಿಕ ಠಾಣೆಗೆ ಕರೆ ಮಾಡಿದ್ದ ರೇಖಾ, ‘ಮಗಳು ಗಲಾಟೆ ಮಾಡುತ್ತಿದ್ದಳು. ಹೀಗಾಗಿ ಕೋಲಿನಿಂದ ಹೊಡೆದೆ. ಕುಸಿದು ಆಕೆ ಪ್ರಾಣ ಬಿಟ್ಟಳು’ ಎಂದು ಕಣ್ಣೀರಿಟ್ಟಳು. ಈ ವೇಳೆಗಾಗಲೇ ಪ್ರಿಯಕರ ಮನೆಯಿಂದ ಪರಾರಿಯಾಗಿದ್ದ. ಕೊಲೆ ಉದ್ದೇಶವಿಲ್ಲದೇ ಮಾಡಿದ ಹತ್ಯೆ (ಐಪಿಸಿ 304) ಆರೋಪದಡಿ ಆಕೆಯನ್ನು ಬಂಧಿಸಿದ್ದೆವು ಎಂದು ಪೊಲೀಸರು ಮಾಹಿತಿ ನೀಡಿದರು.

‘ರೇಖಾ ಇತ್ತೀಚೆಗೆ ಮಾಡಿಸಿದ್ದ ಪಡಿತರ ಚೀಟಿಯಲ್ಲಿ ಮಗಳ ಹೆಸರೇ ಇರಲಿಲ್ಲ. ಶಾಲೆಗೆ ಸೇರಿಸುವಾಗಲೂ ತಂದೆ ಯಾರೆಂಬ ಬಗ್ಗೆ ಮಾಹಿತಿ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ‘ಬಬ್ಲಿಯ ನಿಜವಾದ ತಂದೆ ಯಾರು ಎಂಬುದು ತಿಳಿಯಬಾರದೆಂದು ಹೀಗೆ ಮಾಡಿದ್ದೆ’ ಎಂದು ಹೇಳಿದ್ದಳು’.

‘ಹೀಗೆ ವಿಚಾರಣೆ ತೀವ್ರಗೊಳಿಸಿದಾಗ ಪ್ರಿಯಕರನಿರುವ ವಿಷಯ ಬಾಯ್ಬಿಟ್ಟಳು. ಅಲ್ಲದೆ, ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದರಿಂದ ಹತ್ಯೆಗೈದಿದ್ದಾಗಿ ಹೇಳಿಕೆ ಕೊಟ್ಟಳು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

Comments are closed.