ಕುಂದಾಪುರ: ಗೋಪಾಡಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಬರ್ಭರವಾಘಿ ಹತ್ಯೆಗೀಡಾಗಿದ್ದ ಇಂದಿರಾ ಮೊಗವೀರ ಅವರ ಮನೆಗೆ ಗುರುವಾರ ಸಂಜೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭ ಇಂದಿರಾ ಅವರ ಪತಿ ಆನಂದ ಅವರ ಜೊತೆ ಮಾತನಾಡಿದ ಅವರು ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಘಟನೆಯ ವಿವರ ಪಡೆದುಕೊಂಡರು.
ನಂತರ ಮಾತನಾಡಿದ ಅಣ್ಣಾಮಲೈ, ಕಾನೂನಿನಲ್ಲಿ ವಿಕ್ಟಿಂ ಕಾಂಪೊನ್ಸೇಷನ್ ಸ್ಕೀಮ್ ಯೋಜನೆಯಡಿಯಲ್ಲಿ ಇಂತಹಾ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದಿಂದ ಗರಿಷ್ಟ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಅಲ್ಲದೇ ಈ ಯೋಜನೆಗೆ ಸಂಬಂಧಿಸಿ ಇರುವ ಸಮಿತಿಯಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ನ್ಯಾಯಾಧೀಶರಿದ್ದು, ಆರು ತಿಂಗಳೊಳಗೆ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದರು. ಅಲ್ಲದೇ ಮೂರು ತಲೆಮಾರುಗಳಿಂದ ಇರುವ ಈ ಕುಟುಂಬದ ಮನೆಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಸ್ಪಿ ಈ ಬಗ್ಗೆಯೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಸಿ ಮೂಲ ಸೌಕರ್ಯ ಒದಗಿಸಲು ವಾರದೊಳಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಅವರು, ಕರಾವಳಿ ತೀರದಲ್ಲಿ ಮೂಲ ಸೌಕರ್ಯ ವಂಚಿತ ಬಡ ಕುಟುಂಬಗಳು ವಾಸಮಾಡುವ ಮನೆಗಳ ಸಮೀಕ್ಷೆ ನಡೆಸಿ ಮೇಲಧಿಕಾರಿಗಳು ಮೂಲ ಸೌಕರ್ಯ ಸಮಸ್ಯೆಗಳ ಕುರಿತು ಒಂದು ತಿಂಗಳೋಳಗೆ ವರದಿ ನೀಡಲಾಗುತ್ತದೆ. ಮತ್ತು ದಾರಿ ದೀಪಗಳ ಸಮಸ್ಯೆಗಳ ಬಗ್ಗೆಯೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದವರು ಹೇಳಿದರು.
ಗುರುವಾರ ಮಹಿಳೆಯರು ನಡೆಸಿದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ಆರೋಪಿಗಳು ಇರುವ ಬಗ್ಗೆ ಇಲಾಖೆಗೂ ಅನುಮಾನಗಳಿದ್ದು, ಸಾಕ್ಷಿದಾರರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ತನಿಖೆಗೊಳಪಡಿಸಲಾಗುತ್ತದೆ. ಮತ್ತು ಆರೋಪಿಗಳೆಂದು ಕಂಡು ಬಂದಲ್ಲಿ ಅವರ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದರು. ಈ ಸಂದರ್ಭ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ ಹಾಗೂ ಉಪನಿರೀಕ್ಷಕ ನಾಸೀರ್ ಹುಸೇನ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್, ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ. ಶ್ರೀಯಾನ್, ಮೊಗವೀರ ಯುವ ಸಂಘಟನೆಯ ಕೋಟೇಶ್ವರ ಘಟಕದ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಸಾಮಾಜಿಕ ಕಾರ್ಯಕರ್ತ ಗಣೇಶ್ ಪುತ್ರನ್ ಮೊದಲಾದವರು ಹಾಜರಿದ್ದರು.