ಮಂಗಳೂರು : ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಮೂಡಿಬರಲಿರುವ ಪ್ರಥಮ ಕಾಣಿಕೆ ಬಹುನಿರೀಕ್ಷೆಯ ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಿತ್ರವು ಮಂಗಳೂರು ಮತ್ತು ಉಡುಪಿಯ ಐದು ಚಿತ್ರಮಂದಿರಗಳಲ್ಲಿ ಮೇ 15ರಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಬಿ.ಅಶೋಕ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸೆಂಟ್ರಲ್ ಟಾಕೀಸ್, ಬಿಗ್ ಸಿನೆಮಾ, ಸಿನಿ ಪಾಲಿಸ್, ಪಿ.ವಿ.ಆರ್. ಹಾಗೂ ಉಡುಪಿಯ ಆಶೀರ್ವಾದ್ ಚಿತ್ರಮಂದಿರಗಳಲ್ಲಿ ಮೊದಲ ಹಂತದಲ್ಲಿ ಬಿಡುಗಡೆಗೊಳ್ಳಲಿದೆ. ಎರಡನೇ ಹಂತದಲ್ಲಿ ಬಿ.ಸಿರೋಡು, ಪುತ್ತೂರು, ಬೆಳ್ತಂಗಡಿ, ಕಾಸರಗೋಡು, ಮೂಡಬಿದ್ರೆ, ಬೆಂಗಳೂರು, ಮುಂಬಯಿ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.
ಶ್ರೀ ಮಂಗಳಾ ಗಣೇಶ್ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಮೂಡಿಬರಲಿರುವ ‘ಒರಿಯನ್ ತೂಂಡ ಒರಿಯಗಾಪುಜಿ’ ತುಳುಚಿತ್ರವು ಈ ವರೆಗೆ ಬಂದ ಚಲನಚಿತ್ರಗಳಿಗಿಂತ ವಿಭಿನ್ನವಾಗಿದ್ದು ಕಾಮಿಡಿಯೊಂದಿಗೆ ಪ್ರಸ್ತುತ ಸಮಾಜದಲ್ಲಿ ನಡೆಯುವ ವ್ಯವಹಾರಿಕ ದ್ವೇಶ ಅಸೂಯೆಗಳು ಅದಕ್ಕಾಗಿ ನಡೆಯುವ ಸಮರವನ್ನು ಮೂಲಕಥೆಯನ್ನಾಗಿ ತೆಗೆಯಲಾಗಿದೆ ಎಂದು ಚಿತ್ರದ ನಿರ್ದೇಶಕ ಹ.ಸೂ ರಾಜಶೇಖರ್ ತಿಳಿಸಿದರು.
ಈ ಚಿತ್ರದ ವಿಶೇಷತೆಯೆಂದರೆ ಚಿತ್ರದಲ್ಲಿ ಪಂಚಭಾಷೆಗಳನ್ನು ಅಳವಡಿಸಲಾಗಿದೆ. ತಮಿಳು, ಕನ್ನಡ ಜೊತೆಗೆ ತುಳು ಭಾಷೆಯ ಹಾಸ್ಯ ಪಾತ್ರಗಳಿದ್ದು ಅದನ್ನು ತುಳು ಮತ್ತು ಕನ್ನಡ ಚಿತ್ರರಂಗದ ಪ್ರಭುದ್ದ ಕಲಾವಿದರು ನಿರ್ವಹಿಸಿದ್ದಾರೆ. ಅದರ ಮೂಲಕ ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯನ್ನೇ ಹರಿಸಲಾಗಿದೆ. ಕ್ಷಣ ಕ್ಷಣದಲ್ಲೂ ರೋಮಾಂಚಕ ಸನ್ನಿವೇಶಗಳು ಎದುರಾಗಲಿವೆ ಎಂದು ರಾಜಶೇಖರ್ ವಿವರಿಸಿದರು.
ಚಿತ್ರವನ್ನು ಮಂಗಳೂರಿನ ಸುತ್ತು ಮುತ್ತಲು ಹಾಗೂ ಕಾಂಞಗಾಂಡ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಅವುಗಳನ್ನು ಪಿಲಿಕುಳ, ಕಾಂಞಗಾಂಡ್ ಹಾಗೂ ಮಂಗಳೂರಿನ ಕೆಲವು ವಿಶೇಷ ಪ್ರಕೃತಿ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಥ್ರಿಲ್ಲರ್ ಮಂಜು ಅವರ ಮೂರು ಫೈಟ್ಗಳು ಕಥೆಗೆ ಪೂರಕವಾಗಿದೆ ಎಂದು ಚಿತ್ರದ ಮತ್ತೋರ್ವ ನಿರ್ಮಾಪಕ ಎ.ಗಂಗಾಧರ ಶೆಟ್ಟಿ ಅಳಕೆ ಹೇಳಿದರು.
ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದು, ಹಾಸ್ಯ, ಮನೋರಂಜನೆ, ಸುಮಧುರ ಹಾಡುಗಳ ಜೊತೆಗೆ ಉತ್ತಮ ಕಥೆಯನ್ನು ಹೊಂದಿದ್ದು ಎಲ್ಲರೂ ಕುಟುಂಬ ಸಮೇತ ನೋಡುವಂತಹ ಚಿತ್ರವಾಗಿದೆ. ತುಳು ಭಾಷೆಯಲ್ಲಿ ವಿಭಿನ್ನ ಶೈಲಿಯಲ್ಲಿ ಮೂಡಿಬಂದ ಈ ಚಿತ್ರವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸ ಬೇಕು ಎಂದು ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್ ಹೇಳಿದರು.
ಬಿ.ಅಶೋಕ್ ಕುಮಾರ್ ಹಾಗೂ ಎ. ಗಂಗಾಧರಶೆಟ್ಟಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಕಥೆ-ಚಿತ್ರಕಥೆ-ಸಾಹಿತ್ಯ-ಗೀತಾರಚನೆ-ರಾಗ ಸಂಯೋಜನೆ ಎ.ಗಂಗಾಧರ ಶೆಟ್ಟಿ ಅಳಕೆ ಅವರದ್ದು. ಚಿತ್ರದಲ್ಲಿ ಕಥಾ ನಾಯಕನಾಗಿ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ಪ್ರಜ್ವಲ್ ಪೂವಯ್ಯ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ರೇಖಾದಾಸ್, ಭವ್ಯ ಹಾಗೂ ಮಿತ್ರ ಪ್ರಮಖ ಪಾತ್ರಗಳಲ್ಲಿದ್ದಾರೆ. ತುಳುರಂಗಭೂಮಿಯ ಚೇತನ್ ರೈ ಮಾಣಿ, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸುಂದರ್ ರೈ ಮಂದಾರ, ಸಾಯಿಕೃಷ್ಣ ಕುಡ್ಲ, ಎ.ಗಂಗಾಧರ ಶೆಟ್ಟಿ ಅಳಕೆ, ಬಿ.ಅಶೋಕ್ ಕುಮಾರ್, ನಾಗೇಶ್ ದಂಬೇಲ್, ಲೋಕೇಶ್ ಬರ್ಕೆ, ಮಂತಾದ ಕಲಾವಿದರು ಅದ್ಬುತ ಅಭಿನಯ ನೀಡಿದ್ದಾರೆ.
ಈ ಚಿತ್ರದಲ್ಲ್ಕಿ ವಿ.ಮನೋಹರ್ರವರ ಸಂಗೀತ ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತ ವಿಜಯ ಭಾರತಿ, ಸಾಹಸ: ಥ್ರಿಲ್ಲರ್ ಮಂಜು, ಹಿನ್ನೆಲೆ ಗಾಯನ ಶ್ರೀ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯಾರ್, ಅನುರಾಧ ಭಟ್, ನೃತ್ಯ ಸಂಯೋಜನೆ : ಮದನ್ ಹರಿಣಿ, ಸಂಕಲನ: ಬಿ.ಎಸ್.ಕೆಂಪರಾಜ್, ನಾಗೇಶ್ ಆಚಾರ್ಯ-ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ ವಿದೆ ಎಂದು ಅಶೋಕ್ ಕುಮಾರ್ ವಿವರ ನೀಡಿದರು.
ಚಿತ್ರದ ಬಿಡುಗಡೆ ಸಮಾರಂಭ ಮೇ 15, 2015 ರಂದು ನಗರದ ಸೆಂಟ್ರಲ್ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಚಿತ್ರದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಆಶೋಕ್ ಕುಮಾರ್ ಅವರು ವಿನಂತಿಸಿದ್ದಾರೆ.