ಮಂಗಳೂರು / ಉಳ್ಳಾಲ, ಮೇ 15: ವಿದ್ವಾಂಸ, ಲೇಖಕ, ತುಳು ಕನ್ನಡ ಸಾಹಿತಿ, ಡಾ.ಅಮೃತ ಸೋಮೇಶ್ವರ ಅವರಿಗೆ ಇಂದು ಸೋಮೇಶ್ವರದ ಅವರ ನಿವಾಸ ಒಲುಮೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಅಮೃತರವರ ಧರ್ಮಪತ್ನಿ ನರ್ಮದಾ ಸೋಮೇಶ್ವರರವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದರು. ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಪ್ರಶಸ್ತಿ ಪ್ರದಾನ ನೆರವೇರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಅಮೃತ ಸೋಮೇಶ್ವರ, ಇಂದು ನನಗೆ ಒಲುಮೆ ನಿವಾಸದಲ್ಲಿ ಸಂದಿದ್ದು ಸಾಹಿತ್ಯ ಲೋಕದ ಬಂಧು ದರ್ಶನ. ಆದಕ್ಕಿಂತ ಮಿಗಿಲಾದ ಪ್ರೀತಿ ಇನ್ನೊಂದಿಲ್ಲ ಸಾಹಿತ್ಯ ಕ್ಷೇತ್ರದಲ್ಲಿ ತಾನು ಮಾಡಿದ ಸಾಧನೆ ಏನೂ ದೊಡ್ಡದಲ್ಲ. ವಿಶಾಲವಾಗಿ ಹಬ್ಬಿದ ಸಾಹಿತ್ಯ ಸಾಗರದಲ್ಲಿ ನಾನು ಬರೀ ಶೂನ್ಯ ಅಂತಹ ಅಹಂ ನನಗಿಲ್ಲ ಇನ್ನೂ ಮಾಡಬಹುದು ಅನ್ನುವ ಹಂಬಲ ನನ್ನಲ್ಲಿತ್ತು ಎಂದು ಹೇಳಿದರು.
ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಮಾತನಾಡಿ, ಅಮೃತ ಸೋಮೇಶ್ವರರು ಸಾಹಿತ್ಯ ಲೋಕದ ಭಂಡಾರವಿದ್ದಂತೆ. ಕಲಾ ಸಾಹಿತ್ಯಕ್ಕೆ ಅವರು ನೀಡಿದ ಸಾಧನೆ ಬಹುದೊಡ್ಡದು. ಕರಾವಳಿ ಪ್ರದೇಶದಲ್ಲಿ ಕಲೆ, ಸಾಹಿತ್ಯಕ್ಕೆ ಇರುವ ಅಭಿರುಚಿ ಇನ್ನೂ ಹೆಚ್ಚುತ್ತಲೆ ಇದೆ ಎಂದರು.
ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ.ಕೆ.ಚೆನ್ನಪ್ಪ ಗೌಡ ಮಾತನಾಡಿ, ಅಮೃತರರು ಪರಿಸರ ದೊಂದಿಗೆೆ ಬೆಳೆದವರು ತುಳು ಪಾಡ್ದ್ದನ, ಯಕ್ಷಗಾನ ಪ್ರಸಂಗ ಸಂಪುಟ ನಿಘಂಟು ರಚಿಸಿ ಮಹಾನ್ ಸಾಧಕರಾಗಿದ್ದಾರೆ ಅವರನ್ನು ಇನ್ನೂ ಗುರುತಿಸುವ ಕಾರ್ಯ ನಡೆಯಲೇಬೇಕು ಎಂದರು.
ಸಂಶೋಧಕ ಪ್ರೊ.ಎ.ವಿ.ನಾವಡ ಶುಭಾಶಂಸನೆ ಮಾಡಿದರು. ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ರೊನಾಲ್ಡ್ ಎಸ್., ಕ್ಯಾಸ್ಟಲಿನೊ, ಬ್ಯಾರಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಬಿ.ಎ., ಮೊಹಮ್ಮದ್ ಹನೀಫ್, ಬ್ಯಾರಿ ಅಕಾಡಮಿ ರಿಜಿಸ್ಟಾರ್ ಉಮರಬ್ಬ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಪ್ರೊ.ಎಸ್.ಕೆ.ಕೊಪ್ಪ, ಡಾ.ಸೋಮಶೇಖರ್, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಜಯಾನಂದ ಪೆರಾಜೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ.ವರದರಾಜ್ ಚಂದ್ರಗಿರಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಐತಪ್ಪ ನಾಯ್ಕ ಸ್ವಾಗತಿಸಿ ವುಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜತೆ ಕಾರ್ಯದರ್ಶಿ ರಾಮಕೃಷ್ಣ ಭಟ್ ವಂದಿಸಿದರು.