ಕುಂದಾಪುರ: ತಾಲೂಕು ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ನಿವಾಸಿ ಮಾಲತಿ ಶೆಟ್ಟಿ (65) ನಾಪತ್ತೆಯಾಗಿ ಮೂರು ವಾರಗಳು ಕಳೆದರೂ ನಾಪತ್ತೆ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಜೂ. 24 ರಂದು ನಿಗೂಢವಾಗಿ ಕಾಣೆಯಾದ ಮಾಲತಿ ಶೆಟ್ಟಿಯವರ ಕೊರ್ಗಿ ನಿವಾಸಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಗುರುವಾರ ಸಂಜೆ ಭೇಟಿ ನೀಡಿದ್ದಾರೆ.
ನಾಪತ್ತೆಯಾದ ಮಾಲತಿ ಶೆಟ್ಟಿ ನಿವಾಸಕ್ಕೆ ಭೇಟಿ ನೀಡಿದ ಅವರು, ಮಾಲತಿ ಶೆಟ್ಟಿ ಅವರ ಪತಿ ಭಾಸ್ಕರ ಶೆಟ್ಟಿ, ಪುತ್ರ ಸತೀಶ್ ಶೆಟ್ಟಿ, ಪುತ್ರಿ ಸರಳಾ ಶೆಟ್ಟಿ ಹಾಗೂ ಕುಟುಂಬಿಕರನ್ನು ವಿಚಾರಣೆ ನಡೆಸಿದರು. ಮನೆಯಲ್ಲಿ ಯಾವುದೇ ರೀತಿಯಾದ ಕಲಹವಿದ್ದಿತ್ತೇ, ಹಾಗೂ ಕುಟುಂಬಿಕರು, ಮನೆಯವರು ಹಾಗೂ ಊರವರ ಬಳಿ ಕಾಣೆಯಾದ ಮಾಲತಿ ಶೆಟ್ಟಿ ಅವರ ಒಡನಾಟ ಹೇಗಿತ್ತೆಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಪುತ್ರ ಸತೀಶ ಶೆಟ್ಟಿ ಅವರೊಡನೆ ಮಾತನಾಡಿದ ಎಸ್ಪಿ ಅಣ್ಣಾಮಲೈ, ಯಾವುದೇ ರೀತಿಯಾಗಿಯೂ ನಾಪತ್ತೆ ಪ್ರಕರಣವೆಂದು ಈ ಪ್ರಕರಣವನ್ನು ಪರಿಗಣಿಸಿಲ್ಲ, ಈಗಾಗಲೇ ಮೂರು ವಾರಗಳಾಗುತ್ತಾ ಬಂದಿದ್ದು ಇನ್ನು ಈ ಪ್ರಕರಣದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತನಿಖೆ ನಡೆಸುತ್ತೇವೆ, ಮನೆಯವರಾದ ನಿಮ ಬಳಿಯಿರುವ ನಿಮ್ಮ ಬಳಿಯಿರುವ ಎಲ್ಲಾ ಮಾಹಿತಿ ಹಾಗೂ ವಿಚಾರಗಳು ಈ ತನಿಖೆಗೆ ಸಹಾಯವಾಗಲಿದ್ದು, ವಸ್ತುಸ್ಥಿತಿಗಳ ಬಗ್ಗೆ ತಿಳಿಸಿದಲ್ಲಿ ಮುಂದಿನ ತನಿಖೆಗೆ ಈ ಅಂಶವು ಸಹಕಾರಿಯಾಗಲಿದೆ ಎಂದರು.
ಮನೆಯವರ ಬಳಿ ಮಾಲತಿ ಶೆಟ್ಟಿಯವರ ಚಲನವಲನ ಹಾಗೂ ಅವರು ಇತರರೊಂದಿಗೆ ಇರುತ್ತಿದ್ದ ವರ್ತನೆ ಬಗ್ಗೆ ಮಾಹಿತಿ ಪಡೆದ ಅವರು ಕಳೆದೊಂದೆರಡು ವರ್ಷದಲ್ಲಿ ಮಾಲತಿ ಶೆಟ್ಟಿ ಅವರು ತಿರುಗಾಟ ನಡೆಸಿದ ಸ್ಥಳೀಯ ಹಾಗೂ ಪರ ಊರುಗಳ ಮಾಹಿತಿ ಸಂಗ್ರಹಿಸಿದರು. ಅಲ್ಲದೇ ಇದೇ ವೇಳೆ ಕುಟುಂಬಿಕರು ಸ್ಥಳೀಯರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಈ ಬಗ್ಗೆ ತನಿಖೆ ನಡೆಸುವ ಭರವಸೆಯನ್ನು ಎಸ್ಪಿ ಅಣ್ಣಾಮಲೈ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲತಿ ಶೆಟ್ಟಿ ಅವರು ನಿಗೂಢವಾಗಿ ನಾಪತ್ತೆಯಾಗಿ ಮೂರು ವಾರಗಳ ಕಳೆಯುತ್ತಿದ್ದು, ಪೊಲೀಸರು ಸತತ ಹುಡುಕಾಟವನ್ದನು ನಡೆಸಿದ್ದಾರೆ, ಮಾಲತಿ ಶೆಟ್ಟಿಯವರು ಚಿನ್ನಾಭರಣ ಧರಿಸಿ ಮನೆಯಿಂದ ನಾಪತ್ತೆಯಾದ ಕಾರಣ ವಿವಿಧ ಆಯಾಮಗಳಲ್ಲಿ ಈಗಾಗಲೇ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಇದೊಂದು ಕಿಡ್ನಾಪ್ ಪ್ರಕರಣವಲ್ಲವೆಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಮಾಲತಿ ಶೆಟ್ಟಿ ಅವರು ತಮ್ಮ ಮನೆ ಕಾಂಪೊಂಡ್ ದಾಟಿದ ಬಳಿಕ ನಡೆದ ಅವರು ನಿಗೂಢವಾಗಿ ಕಣ್ಮರೆಯಾಗಿರುವ ಬಗ್ಗೆ ಸಾಂದರ್ಭಿಕ ಸಾಕ್ಷಿಗಳು ದೃಢೀಕರಿಸಿದೆ. ಈಗಾಗಲೇ ದೇವಸ್ಥಾನಗಳು, ವೃದ್ಧಾಶ್ರಮ, ಪ್ರಮುಖ ಪ್ರದೇಶಗಳು ಸೇರಿದಂತೆ ರಾಜ್ಯಾದ್ಯಂತ ಮಾಹಿತಿ ನೀಡಿದ್ದಲ್ಲದೇ ಹಲವೆಡೆ ಹುಡುಕಾಟ ನಡೆಸಿದ್ದೇವೆ. ಕುಂದಾಪುರ ಡಿವೈಎಸ್ಪಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಬ್ಇನ್ಸ್ಪೆಕ್ಟರ್ ಅವರು ತನಿಖೆಯನ್ನು ನಡೆಸುತ್ತಿದ್ದು ಕೂಡಲೇ ಈ ಪ್ರಕರಣವನ್ನು ಬೇದಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ. ಮೊದಲಾದವರಿದ್ದರು.