__ ಸತೀಶ್ ಕಾಪಿಕಾಡ್
ಮಂಗಳೂರು, ಜುಲೈ, 27: ಕಾರಿನಲ್ಲಿ ಬಂದ ರೌಡಿಗಳ ತಂಡವೊಂದು ಇಬ್ಬರು ಯುವಕರನ್ನು ತಲವಾರಿನಿಂದ ಯದ್ವತದ್ವ ಕಡಿದು ಪರಾರಿಯಾದ ಘಟನೆ ಸೋಮವಾರ ಸಂಜೆ ನಗರದ ಕುದ್ರೋಳಿಯ ಅಳಕೆ ಮಾರ್ಕೆಟ್ ಸಮೀಪ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.. ಇದು ಎರಡು ತಂಡಗಳ ನಡುವೆ ಹಳೆ ವೈಷಮ್ಯದಿಂದ ನಡೆದ ಗ್ಯಾಂಗ್ವಾರ್ ಎಂದು ಶಂಕೀಸಲಾಗಿದೆ.
ರೌಡಿ ಲೀಸ್ಟ್ ನಲ್ಲಿ ಗುರುತಿಸಲ್ಪಟ್ಟಿದ್ದಾರೆ ಎನ್ನಲಾದ ನಗರದ ನಿವಾಸಿಗಳಾದ ನಿತಿನ್, ರವಿಚಂದ್ರ ಯಾನೆ ವಿಕ್ಕಿ ಯಾನೆ ಸೈಕೋ ವಿಕ್ಕಿ, ಮೋಕ್ಷಿತ್ ಅವರನ್ನೊಳಗೊಂಡ ತಂಡ ಇಂದು ಸಂಜೆ 7.15ರ ಸುಮಾರಿಗೆ ಮಾರುತಿ 800 ಕಾರಿನಲ್ಲಿ ತಲವಾರು ಸಹಿತ ಬಂದು ಕುದ್ರೋಳಿ ಮಾರ್ಕೆಟ್ ಸಮೀಪದಲ್ಲಿ ನಿಂತಿದ್ದ ಕುದ್ರೋಳಿ ನಿವಾಸಿ ಲತೀಶ್ ಹಾಗೂ ಬೊಕ್ಕಪಟ್ನ ನಿವಾಸಿ ಇಂದ್ರಜಿತ್ ಎಂಬವರಿಗೆ ತಲವಾರಿನಿಂದ ಯದ್ವಾತ್ದದ್ವ ಕಡಿದಿದ್ದಾರೆ. ಈ ಸಂದರ್ಭದಲ್ಲಿ ಇಂದ್ರಜಿತ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಬರ್ಕೆ ನಿವಾಸಿ ಎನ್ನಲಾದ ಲತೀಶ್ಗೆ ಕೈಗೆ ಬಲವಾದ ಏಟಾಗಿದ್ದು, ಈತನನ್ನು ಅಳಕೆ ನರ್ಸಿಂಗ್ ಹೋಂನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ದುಷ್ಕರ್ಮಿಗಳ ತಂಡ ತಲವಾರಿನಿಂದ ಕಡಿದು ತಕ್ಷಣ ಕಾರಿನಲ್ಲೇ ಪಲಾಯನಕ್ಕೆ ಯತ್ನಿಸಿದ ಸಂದರ್ಭ ತಮ್ಮ ಕಾರನ್ನು ಹಲವು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾರೆ. ಕುದ್ರೋಳಿಯಿಂದ ಮಣ್ಣಗುಡ್ಡ ಮಾರ್ಗದಲ್ಲಿ ಪಲಾಯನ ಮಾಡಲು ಯತ್ನಿಸಿದ್ದರು. ಈ ಸಂದರ್ಭ ಕಾರು ಮಣ್ಣಗುಡ್ಡೆ , ಬರ್ಕೆಯ ದುರ್ಗಾ ಮಹಲ್ ಹೋಟೆಲ್ ಸಮೀಪ ಬಂದ್ ಬಿದ್ದು ರಸ್ತೆಯಲ್ಲೇ ನಿಂತಿತು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂದಿನ ಗಾಜು ಸಂಪೂರ್ಣ ಹೊಡೆದು ಹೋಗಿದ್ದರಿಂದ ಕುತೂಹಲಗೊಂಡ ಸಾರ್ವಜನಿಕರು ಕಾರಿನ ಸುತ್ತ ಜನ ಜಮಾಯಿಸಲು ಆರಂಭಿಸಿದಾಗ ಕಾರನ್ನು ಅಲ್ಲೆ ಬಿಟ್ಟು ಪರಾರಿಯಾಗಲು ಪ್ರಯತ್ನಿಸಿದ ತಂಡ ಕಾರಿನಿಂದ ಇಳಿದು ಓಟಕಿತ್ತಿದೆ. ಈ ಸಂದರ್ಭ ಮಣ್ಣಗುಡ್ಡೆ ಸಮೀಪವೇ ಯುವಕನೊಬ್ಬ ಸಂಚರಿಸುತ್ತಿದ್ದ ಸ್ಕೂಟರ್ನ್ನು ಅಡ್ಡಗಟ್ಟಿ ಆತನಿಗೆ ಚೂರಿ ತೋರಿಸಿ ಬೆದರಿಸಿ, ಸ್ಕೂಟರ್ನ್ನು ಬಲಾತ್ಕಾರವಾಗಿ ಕಿತ್ತುಕೊಂಡು ಮೂವರು ಆರೋಪಿಗಳು ಅದರಲ್ಲಿ ಪರಾರಿಯಾಗಿದ್ದಾರೆ.
ಈ ಪ್ರಕರಣ ಮೊದಲಿಗೆ ಬರ್ಕೆ ಠಾಣೆಯಲ್ಲಿ ದಾಖಲಾಗಿದ್ದರೂ, ಬಳಿಕ ಘಟನೆ ನಡೆದ ಸ್ಥಳ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಕದ್ರಿ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಿದೆ.