ಕುಂದಾಪುರ: ಕೃಷಿಸಾಲ ತೀರಿಸಲಾಗದೇ ಅಮಾಸೆಬೈಲು ಮೂಲದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೂಲತಃ ಅಮಾಸೆಬೈಲಿನವರಾದ ಪ್ರಸ್ತುತ ಕಾವ್ರಾಡಿ ನಿವಾಸಿ ರಾಮ ಕುಲಾಲ್(45) ಅತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾರೆ.
ಕಾವ್ರಾಡಿಯ ಮನೆಯಲ್ಲಿ ಪತ್ನಿ ಸುಮತಿ ಹಾಗೂ ವಿಜಯ ಹಾಗೂ ದೀಪಾ ಎಂಬ ಮಕ್ಕಳೊಂದಿಗೆ ವಾಸವಿದ್ದ ರಾಮ ಕುಲಾಲ್ ಗಾರೆ ಕೆಲಸ ಮಾಡಿಕೊಂಡಿದ್ದಲ್ಲದೇ ಅಮಾಸೆಬೈಲಿನ ಮೂಲ ಮನೆಯ ಕೃಷಿಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದರು. ಕೃಷಿ ಕಾರ್ಯಗಳಿಗಾಗಿ ವಿವಿದೆಡೇ ಸುಮಾರು ಎರಡುವರೆ ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರೆನ್ನಲಾಗಿದೆ. ಅಲ್ಲದೇ ಸ್ವಸಹಾಯ ಸಂಘ ಹಾಗೂ ಇತರರ ಬಳಿ ಕೈ ಸಾಲ ಪಡೆದಿದ್ದು ಬಹಳ ಒತ್ತಡದಲ್ಲಿಯೇ ಜೀವನ ನಿರ್ವಹಣೆ ಮಾಡಿಕೊಂಡಿದ್ದರು. ಸಾಲ ಪಾವತಿ ಬಗ್ಗೆ ದಾರಿ ತೋಚದ ಇವರು ಕಳೆದ ಮೂರ್ನಾಲ್ಕು ದಿನದ ಹಿಂದೆ ಮನೆಯಲ್ಲಿಯೇ ಇಲಿ ಪಾಷಾಣ ಸೇವಿಸಿ ಅಸ್ವಸ್ಥರಾಗಿದ್ದ ಇವರನ್ನು ಕುಂದಾಪುರದಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ಚಾರುಲತಾ, ತಹಶೀಲ್ದಾರ್ ಗಾಯತ್ರಿ ನಾಯಕ್, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವ್ರತ್ತನಿರೀಕ್ಷಕ ದಿವಾಕರ್ ಪಿ.ಎಂ. ಹಾಗೂ ಸ್ಥಳೀಯ ಪಂಚಾಯತ್ ಸಂಬಂದಪಟ್ಟವರು ಭೇಟಿ ನೀಡಿ ರಾಮ ಕುಲಾಲ್ ಕುಟುಂಬಿಕರಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ.