ಮಂಗಳೂರು: ಬೆಳ್ತಂಗಡಿಯಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಕುಟುಂಬವೊಂದು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ನಡೆದಿದೆ.
ಮದುವೆ ಮನೆಗೆ ನುಗ್ಗಿದ ಪೊಲೀಸರು ಮನೆಮಂದಿಗೆ ದೌರ್ಜನ್ಯ ಎಸಗಿದ್ದಾರೆಂದು ಪೊಲೀಸರಿಂದ ಹಲ್ಲೆಗೊಳಗಾದ ಮನೆಯವರು ಆರೋಪಿಸಿದ್ದಾರೆ. ಬೆಳ್ತಂಗಡಿ ಠಾಣಾ ಎಸ್ಸೈ ಸಂದೇಶ್ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ವಾಲ್ಟರ್ ಕಿರಣ್ ಎಂಬವರ ವಿರುದ್ಧ ಅನಿಲ್ ಎಂಬವರು ನೀಡಿದ ದೂರಿನಂತೆ ಬೆಳ್ತಂಗಡಿ ಠಾಣಾ ಪೊಲೀಸರು ಮದುವೆ ಮನೆಗೆ ಮಫ್ತಿಯಲ್ಲಿ ಆಗಮಿಸಿ ವಾಲ್ಟರ್ ಕಿರಣ್ ರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭ ಮನೆಯವರು ನೀವು ಯಾರು? ಏಕೆ ಅವರನ್ನು ಕರೆದೊಯ್ಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಅವೆಲ್ಲ ನಿಮಗೆ ಯಾಕೆ ಎಂದು ಎಸ್ಸೈ ಮರುಪ್ರಶ್ನೆ ಹಾಕಿದ್ದಾರೆ.
ಈ ಸಂದರ್ಭ ಒಬ್ಬ ಪೊಲೀಸ್ ಯುನಿಫಾರ್ಮ್ನಲ್ಲಿದ್ದನ್ನು ಕಂಡು ಪೊಲೀಸರು ಎಂದು ತಿಳಿದು ವಾಲ್ಟರ್ ಕಿರಣ್ ರ ಪತ್ನಿ ಜೆನ್ನಿಫರ್ ಯಾಕೆ ಅವರನ್ನು ಬಂಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಎಸ್ಸೈ ಸಂದೇಶ್ ಜೆನ್ನಿಫರ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಜೆನ್ನಿಫರ್ ದೂರಿದ್ದಾರೆ.
ಈ ಸಂದರ್ಭ ವಾಲ್ಟರ್ ಕಿರಣ್ ಸಹೋದರಿ ಭಗಿನಿ ಪೊಲೀಸರ ಕ್ರಮವನ್ನು ಖಂಡಿಸಿ, ಯಾಕೆ ದೌರ್ಜನ್ಯ ನಡೆಸುತ್ತೀರಿ ಎಂದು ಪ್ರಶ್ನಿಸಿದ್ದು, ಈ ಸಂದರ್ಭ ಅವರನ್ನೂ ಅವಾಚ್ಯವಾಗಿ ನಿಂದಿಸಿ, ಹಲ್ಲೆನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮನೆಯಲ್ಲಿದ್ದವರು ಪೊಲೀಸರ ಕ್ರಮವನ್ನು ಖಂಡಿಸಿದ್ದು, ಈ ವೇಳೆ ಎಸ್ಸೈ ಸಂದೇಶ್ ಠಾಣೆಯಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿ ಮನೆಯವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.
ಎಸ್ಸೈ ಯಿಂದ ಹಲ್ಲೆಗೊಳಗಾದ ಅವಿರಾ, ವಿನ್ನಿ, ಜೆನ್ನಿಫರ್, ಮೈನಾ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಇಂದು ನಗರ ಪೊಲೀಸ್ ಕಮಿಷನರ್ ಗೆ ಮನವಿ ಸಲ್ಲಿಸಿ ಎಸ್ಸೈ ಸಂದೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದಾಗಿ ಮನೆಯವರು ಹೇಳಿದ್ದಾರೆ.
ಆಸ್ಪತ್ರೆಗೆ ಶಾಸಕ ಲೋಬೋ ಭೇಟಿ : ಪರಿಶೀಲನೆ
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ ಲೋಬೋ ಅವರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಕುಟುಂಬದ ಸದಸ್ಯರೊಂದಿಗೆ ಈ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕ್ರೈಸ್ತ ಮುಖಂಡರ ಖಂಡನೆ :
ಬೆಳ್ತಂಗಡಿ ಠಾಣಾ ಎಸ್ಸೈ ಸಂದೇಶ್ ಮನೆಗೆ ನುಗ್ಗಿ ಸ್ತ್ರೀಯರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಕ್ರೈಸ್ತ ಭಗಿನಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರದ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವುದಾಗಿ ಕ್ರೈಸ್ತ ಮುಖಂಡ ಸ್ಟಾನಿಯಾ ಅಲ್ವಾರಿಸ್ ಹೇಳಿದ್ದಾರೆ. ಈ ರೀತಿಯ ಕೃತ್ಯ ಎಸಗಿದ ಎಸ್ಸೈ ಮೇಲೆ ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಕ್ರೈಸ್ತ ಸಂಘಟನೆಗಳು ತೀವ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.