ಕುಂದಾಪುರ: ಕುಗ್ರಾಮ ಕೊರ್ಗಿಯ ಹೊಸ್ಮಠ ಸಮೀಪದ ಆ ಮನೆಯಲ್ಲಿ ಎಲ್ಲಿ ನೋಡಿದರೂ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ವಸ್ತುಗಳು, ಒಳಗೆ ಹೊರಗೆ ರಕ್ತದ ಛಾಯೆ. ಮನೆಮುಂದೆ ನೆರೆದ ಸ್ಥಳೀಯರಲ್ಲಿ ಆತಂಕ. ಅಷ್ಟಕ್ಕೂ ಆ ಮನೆಯಲ್ಲಿ ರಾತ್ರಿ ನಡೆದ ಘಟನೆ ರಕ್ತವನ್ನು ಹರಿಸಿತ್ತು. ಸಂಬಂಧಿಯೇ ತಡರಾತ್ರಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಹೋಗಿದ್ದ ಕೃತ್ಯಕ್ಕೆ ಊರಿಗೆ ಊರೇ ಬೆಚ್ಚಿಬಿದ್ದಿತ್ತು.
(ಆರೋಪಿಗೆ ರಂಜಿತ)
ರಕ್ತಸಂಬಂಧಿಗಳ ಮನೆಗೆ ನುಗ್ಗಿ ರಕ್ತ ಹರಿಸಿದಾತನೇ ಹೊಸ್ಮಠ ಮೆಕ್ಕೆಮನೆ ನಿವಾಸಿ ರಂಜಿತ್ ಶೆಟ್ಟಿ(26). ಮಾಡಲು ಕೆಲಸವಿಲ್ಲದೇ ಪೋಲಿ ಅಲೆಯುತ್ತಿದ್ದ ರಂಜಿತ್ ಹಲ್ಲೆ ನಡೆಸಿದ್ದು ತನ್ನ ಅಜ್ಜಿ ಕೊರಗಮ್ಮ ಶೆಟ್ಟಿ (86), ದೊಡ್ಡಮ್ಮನ ಮಗಳು (ಅಕ್ಕ) ಚಂದ್ರಮತಿ ಶೆಟ್ಟಿ (38), ದೊಡ್ಡಪ್ಪ ಕುಷ್ಟಪ್ಪ ಅಲಿಯಾಸ್ ಕೃಷ್ಣಯ್ಯ ಶೆಟ್ಟಿ(65) ಎನ್ನುವವರಿಗೆ. ಸದ್ಯ ಮೂವರು ಗಂಭೀರವಾಗಿ ಗಾಯಗೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿನ್ನ ಕೇಳಿ ಬಂದ ಕಿರಾತಕ:
ಸೋಮವಾರ ರಾತ್ರಿ 1 ಗಂಟೆ ವೇಳೆ ಚಂದ್ರಮತಿ ಅವರ ಮನೆಗೆ ಬಂದ ಆತ ತನಗೆ ಅನಾರೋಗ್ಯವಿದ್ದು ಈ ಬಗ್ಗೆ ಅಜ್ಜಿ ಕೊರಗಮ್ಮ ಶೆಟ್ಟಿಯವರಲ್ಲಿ ಮಾತನಾಡಿ ಪರಿಹಾರ ಕೇಳಬೇಕಿದೆ, ಬಾಗಿಲು ತೆರೆಯಿರಿ ಎಂದಿದ್ದಾನೆ. ಮೊದಲೇ ಈತನ ದುಷ್ಟತನದ ಬಗ್ಗೆ ಅರಿವಿದ್ದರೂ ಬೆದರಿಕೊಂಡೇ ಬಾಗಿಲು ತೆರದಿದ್ದಾರೆ. ಈ ವೇಳೆ ಒಳ ಪ್ರವೇಶಿಸಿದ ಆತ ಒಳಬಂದು ತನ್ನ ತಾಯಿ ಲಕ್ಷ್ಮೀ ಅವರ ಚಿನ್ನಾಭರಣವನ್ನು ನೀಡುವಂತೆ ಕೂಗಡಿದ್ದಾನೆ, ಇದಕ್ಕೆ ಮನೆಯಲ್ಲಿದ್ದವರು ನಿರಾಕರಿಸಿದಾಗ ಅಲ್ಲಿಂದ ತೆರಳಿದ ಆತನ ಸ್ವಲ್ಪ ಹೊತ್ತಿನ ಬಳಿಕ ಕತ್ತಿಯೊಂದಿಗೆ ವಾಪಾಸಾಗಿದ್ದಾನೆ. ಅಲ್ಲದೇ ಮೂವರ ಮೇಲೆಯೂ ಹಿಗ್ಗಾಮುಗ್ಗಾ ಕತ್ತಿಯಿಂದ ದಾಳಿ ನಡೆಸಿದ್ದಾನೆ. ಈ ವೇಳೆ ಚಂದ್ರಮತಿ ಶೆಟ್ಟಿಯವರ ಚಿಕ್ಕ ಪ್ರಾಯದ ಮಕ್ಕಳು ತಡೆಯಲು ಬಂದು ಕೂಗಾಡಿದಾಗ ಮೂರು ವರ್ಷದ ಮಗಳನ್ನು ಕಾಲಿನಡಿಯಲ್ಲಿ ಮೆಟ್ಟಿನಿಂತ ರಂಜಿತ್ ಇಬ್ಬರು ಮಕ್ಕಳನ್ನು ಕೊಲ್ಲುವ ಬೆದರಿಕೆಯನ್ನು ಒಡ್ಡಿದ್ದಾನೆ, ಅಷ್ಟೆಲ್ಲಾ ದಾಳಿ ನಡೆದರೂ ಕೂಗಾಡಲೂ ಆಗ ಸ್ಥಿತಿಯಲ್ಲಿ ಮೂವರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವಾಗಲೇ ಚಂದ್ರಮತಿಯವರ ಚಿನ್ನಾಭರಣ, ಕೊರಗಮ್ಮ ಅವರ ಚಿನ್ನಾಭರಣ ಸೇರಿದಂತೆ ಮನೆಯ ಕೋಣೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾನೆ.
ಕೃತ್ಯ ದರೋಡೆಕೋರರು ಮಾಡಿದ್ದು ರಂಜಿತ್ ಅಲ್ಲ..!!
ಇಷ್ಟೆಲ್ಲಾ ಕೃತ್ಯಗಳನ್ನು ನಡೆಸಿದ ಬಳಿಕ ಸುಮ್ಮನಾಗದ ಈತ ತನ್ನ ದು(ದೂ)ರಾಲೋಚನ್ಯೊಂದನ್ನು ಮಾಡುತ್ತಾನೆ. ಚಂದ್ರಮತಿ ಅವರ 6 ನೇ ತರಗತಿ ಓದುವ ಮಗನ ಬಳಿ ಕಾಲಿ ಹಾಳೆಯೊಂದನ್ನು ತರಿಸಿಕೊಂಡು ಅದರಲ್ಲಿ ‘ಇಲ್ಲಿ ನಡೆದ ದರೋಡೆ, ಕಳ್ಳತನ, ವಂಚನೆ ಹಾಗೂ ಮೂವರ ಮೇಲೆ ಹಲ್ಲೆ ನಡೆಸಿದ್ದು ನನ್ನ ಚಿಕ್ಕಮ್ಮನ ಮಗ ರಂಜಿತ್ ಅಲ್ಲ, ಬೇರ್ಯಾರೋ ದರೋಡೆಕೋರರು ಬಂದು ಮಾಡಿದ್ದು’ ಎಂದು ಬರೆಸಿ ಅದಕ್ಕೆ ಚಂದ್ರಮತಿಯವರ ಸಹಿ ಹಾಕಿಸಿಕೊಂಡು, ಮೊಬೈಲನ್ನು ಕಸಿದು ಒಡೆದುಹಾಕಿ ಬಳಿಕ ಮುಂಭಾಗಿಲಿನ ಚಿಲಕಕ್ಕೆ ಬೀಗ ಹಾಕಿ ತೆರಳಿದ್ದಾನೆ.
5 ಗಂಟೆಗಳ ರಕ್ತದ ಮಡುವಿನಲ್ಲಿ ಮೂವರು..!
ಅಂದಾಜು ತಡರಾತ್ರಿ 2.30-3.00ರ ವೇಳೆಗೆ ಈ ಘಟನೆ ನಡೆದಿದ್ದು ಮೂವರು ಗಾಯಗದಿಂದ ನೋವಿನಲ್ಲಿಯೇ ಬಿದ್ದಿದ್ದರು. ಕೂಗಿದರೂ ಯಾರಿಗೂ ಕೇಳಿಸದ ಪರಿಸ್ಥಿತಿಯಲ್ಲಿ ಇವರ ರೋಧನ ಮನೆಯಾಚೆಗೆ ಬರಲೇ ಇಲ್ಲ. ಅದೇ ರಕ್ತದ ಮಡುವಿನಲ್ಲಿ ನೋವಿನಲ್ಲಿ ಸರಿಸುಮಾರು 5 ಗಂಟೆಗಳ ಕಾಲ ಗೃಹಬಂಧನದಲ್ಲಿಯೇ ಇದ್ದರು. ಬೆಳಿಗ್ಗೆ ಸಂಬಂಧಿಕರ ಮದುವೆಗೆಂದು ಮುಂಬೈಯಿಂದ ಬಂದ ವ್ಯಕ್ತಿಯೋರ್ವರು ಈ ಮನೆ ಸಮೀಪ ಬಂದಾಗ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಸ್ಥಳೀಯರ ಸಹಕಾರದಲ್ಲಿ ತೆಕ್ಕಟ್ಟೆ ಫ್ರೆಂಡ್ಸ್ ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಮೂವರು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಬಂಧನ:
ಇಷ್ಟೆಲ್ಲಾ ಕೃತ್ಯಗಳನ್ನು ಮಾಡಿದ ಬಳಿಕ ಕದ್ದ ಚಿನ್ನಾಭರಣವನ್ನು ಬ್ಯಾಗಿನಲ್ಲಿ ತುಂಬಿಸಿಕೊಂಡು ಸ್ನಾನ ಮುಗಿಸಿ ಮನೆಯನ್ನು ಬಿಡುತ್ತಾನೆ, ತನಗೇನು ತಿಳಿದಿಲ್ಲ ಎನ್ನುವಂತೆ ಅಲ್ಲಿಲ್ಲಿ ಅಲೆದಾಡಿಕೊಂಡು ಚಿನ್ನವನ್ನು ಮಾರಾಟ ಮಾಡುವ ಸಲುವಾಗಿ ಕೋಟೇಶ್ವರಕ್ಕೆ ಬಂದಿದ್ದ ವೇಳೆ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು ರಂಜಿತನನ್ನು ಬಂಧಿಸಿ ಕರೆದೊಯ್ಯುತ್ತಾರೆ. ಆರೋಪಿಯಿಂದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಅಯ್ಯಪ್ಪ ಮಾಲೆ ಹಾಕಿ ಕಳಚಿದ್ದ:
ಇತ್ತೀಚೆಗಷ್ಟೇ ಅಯ್ಯಪ್ಪ ಮಾಲಧಾರಿಯಾಗಿದ್ದ ಈತ ಪರಿಸರದಲ್ಲಿ ಹೊಡೆದಾಡಿಕೊಂಡಿದ್ದಲ್ಲದೇ ಸ್ಥಳಿಯ ಮನೆಯೊಂದಕ್ಕೆ ಕಲ್ಲೆಸೆದಿದ್ದ ಈ ಬಗ್ಗೆ ಕೋಟ ಪೊಲೀಸರು ಈತನನ್ನು ವಿಚಾರಣೆಯನ್ನು ನಡೆಸಿದ್ದರು. ಬಳಿಕ ಶಬರಿಮಲೆ ಯಾತ್ರೆ ಮಾಡದೇ ಮಾಲೆಯನ್ನು ತೆಗೆದಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.
ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ್ ಪಿ.ಎಂ ನೇತ್ರತ್ವದಲ್ಲಿ ಎಸ್ಐ ದೇವರಾಜ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣ ದಾಖಲಾಗಿದೆ.
ವರದಿ,ಚಿತ್ರ- ಯೋಗೀಶ್ ಕುಂಭಾಸಿ