ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಪಾಟಿನ ಕೀಲಿಕೈ ಸಹಿತ ಪರಾರಿ ಯಾಗಿದ್ದ ಆರೋಪಿ ನೌಕರ ಶಿವರಾಮ ಮಡಿವಾಳ ನನ್ನು ಬಂಧಿಧಿಸಿರುವ ಪೊಲೀಸರು ಆತನನ್ನು ದೇಗುಲಕ್ಕೆ ಕರೆತಂದು ಕಪಾಟಿನಲ್ಲಿರುವ ಚಿನ್ನ ಹಾಗೂ ಬೆಳ್ಳಿಯ ಸೊತ್ತುಗಳ ಮಹಜರು ನಡೆಸಿದರು.
30 ಲಕ್ಷ ರೂ.ಗಳಿಗೂ ಮಿಕ್ಕಿ ಆಭರಣಗಳನ್ನು ಕಳವುಗೈದು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟಿರುವುದು ಈ ಸಂದರ್ಭ ಬಳಕಿಗೆಬಂದಿದೆ. ವಿವಿಧ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಪ್ರಬಂಧಕರನ್ನು ಸಂಪರ್ಕಿಸಿರುವ ಪೊಲೀಸರು ಶಿವರಾಮ ಅಡವಿಟ್ಟಿರುವ ಚಿನ್ನಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದರು. ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ, ಉಪಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಅರ್ಚಕರಾದ ಡಾ| ಕೆ.ಎನ್. ನರಸಿಂಹ ಅಡಿಗ, ಮಂಜುನಾಥ ಅಡಿಗ, ಅಧೀಕ್ಷಕ ರಾಮಕೃಷ್ಣ ಅಡಿಗ, ಸಬ್ ಇನ್ಸ್ಪೆಕ್ಟರ್ ಶೇಖರ, ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಎಲ್.ಎಸ್. ಮಾರುತಿ ಹಾಗೂ ದೇವಸ್ಥಾನದ ಸಿಬಂದಿಯ ಸಮ್ಮುಖದಲ್ಲಿ ಮಹಜರು ನಡೆಯಿತು.
ಕಳವಾಗಿದ್ದು 37 ಆಭರಣ, ಆದರೇ ಸಿಕ್ಕಿದ್ದು….
2012ರ ಜುಲೈ 22ರಿಂದ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಸಮರ್ಪಿತವಾದ ಒಟ್ಟು 48 ವಿವಿಧ ಮಾದರಿಯ ಚಿನ್ನಾಭರಣಗಳನ್ನು ಆ ಕಪಾಟಿನಲ್ಲಿ ಇರಿಸಿದ್ದು, ಮಹಜರು ವೇಳೆ ಕೇವಲ 11 ಆಭರಣಗಳು ಮಾತ್ರ ಲಭಿಸಿವೆ. ಸುಮಾರು 25 ಲಕ್ಷ ರೂ.ಗೂ ಅಧಿಕ ಮೌಲ್ಯದ ಉಳಿದ ಚಿನ್ನಾಭರಣಗಳನ್ನು ಶಿವರಾಮ ಬ್ಯಾಂಕ್ಗಳಲ್ಲಿ ಅಡವಿಟ್ಟಿದ್ದಾನೆ. ಸಾಲದ ಹಣದ ಬಡ್ಡಿ ಪಾವತಿ ಮಾಡಲು ಮತ್ತೆ ಮತ್ತೆ ಆಭರಣ ಕಳವುಗೈಯುತ್ತಿದ್ದ ಎನ್ನಲಾಗಿದೆ. ದೇಗುಲದಲ್ಲಿ ಉಳಿದಿರುವ ಆಭರಣಗಳ ಲೆಕ್ಕಾಚಾರ ಮಾಡಿದಾಗ ಆತ ಬ್ಯಾಂಕ್ಗಳಲ್ಲಿ ಅಡವಿಟ್ಟಿರುವ ಆಭರಣಗಳ ಮೌಲ್ಯವು ಹೆಚ್ಚಿರುವುದಾಗಿ ಪೊಲೀಸ್ ವರದಿ ತಿಳಿಸಿದೆ.
ಶಿವರಾಮ ಬಾಯ್ಬಿಟ್ಟಿದ್ದೇನು ಗೊತ್ತಾ?
ಒತ್ತಡದ ಕಾರಣ ಕೃತ್ಯ ಎಸಗಿದ್ದು ನನ್ನೊಂದಿಗೆ ಹಲವು ಮಂದಿ ಕೈಜೋಡಿಸಿದ್ದಾರೆ. ಸಮಸ್ಯೆ ಎದುರಾದರೆ ಅವರು ನೆರವಿಗೆ ಬರ ಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಲ್ಲರೂ ಕೈಕೊಟ್ಟರು. ನನಗೆ ಪ್ರೇರಣೆ ನೀಡಿದವರ ಹೆಸರನ್ನು ಬಯಲು ಮಾಡುತ್ತೇನೆ ಎಂದು ತಿಳಿಸಿದ್ದಾನೆ.
ದೇವಸ್ಥಾನದ ಒಳಪೌಳಿಯಲ್ಲಿರುವ ಆಡಳಿತ ಮಂಡಳಿಯ ಕಚೇರಿಯ ಹಿಂಭಾಗದಲ್ಲಿನ ಕಪಾಟಿನಲ್ಲಿ ಇಷ್ಟೊಂದು ಬೆಲೆಬಾಳುವ ಚಿನ್ನಾಭರಣ ಇರಿಸಿರುವುದು ಶಂಕೆಗೆ ಎಡೆ ಮಾಡಿದೆ. ಆತ ಚಿನ್ನಾಭರಣವನ್ನು ಮಾತ್ರ ಎಗರಿಸಿದ್ದು ಬೆಳ್ಳಿಯ ಸೊತ್ತುಗಳನ್ನು ಹಾಗೆಯೇ ಬಿಟ್ಟಿರುವುದು ಮಹಜರು ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಚಿನ್ನಾಭರಣವನ್ನು ಭದ್ರತೆಯ ನೆಲೆಯಲ್ಲಿ ಸಂರಕ್ಷಿಸಲು ಆಡಳಿತ ವ್ಯವಸ್ಥೆಯು ವಿಫಲವಾಗಿರುವುದು ಟೀಕೆಗೆ ಕಾರಣವಾಗಿದೆ. ಕೇವಲ ನೌಕರನಿಗೆ ಚಿನ್ನಾಭರಣಗಳನ್ನು ಇಟ್ಟಿರುವ ಕಪಾಟಿನ ಉಸ್ತುವಾರಿ ವಹಿಸಿಕೊಟ್ಟಿರುವುದು ಸರಿಯಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದಾಯದಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿರುವ ಕೊಲ್ಲೂರು ದೇಗುಲದ ವ್ಯವಹಾರ ಹಾಗೂ ಭದ್ರತೆಯ ಜವಾಬ್ದಾರಿ ಹೊಂದಿರುವ ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ಎಡವಿರುವುದು ಸ್ಪಷ್ಟವಾಗುತ್ತದೆ.
ಅಡಗಿಸಿಟ್ಟಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಕಾಣಿಕೆಯ ಚಿನ್ನಾಭರಣಗಳ ವಿವರ
2012ನೇ ಜು. 22ರಿಂದ 2012ನೇ ಡಿ. 31ರ ವರೆಗೆ 450.400 ಗ್ರಾಮ್ಸ್ ಚಿನ್ನಾಭರಣ ಹೊಂದಿರುವ ದೇಗುಲದಲ್ಲಿ 2013ನೇ ಜನವರಿ 25ರಿಂದ 2013ನೇ ಡಿ. 15ರ ವರೆಗೆ 1334.800 ಗ್ರಾಂ. ಚಿನ್ನಾಭರಣವಿತ್ತು.
2014ರ ಜ. 5ರಿಂದ 2014ನೇ ಡಿ. 19ರ ವರೆಗೆ 670.440 ಗ್ರಾಂ. ಆಭರಣ ಹೊಂದಿದ್ದು 2015ರ ಜನವರಿಯಲ್ಲಿ 98 ಗ್ರಾಂ ಗಳಷ್ಟು ಕಾಣಿಕೆ ರೂಪದಲ್ಲಿ ದೇವಿಗೆ ಸಮರ್ಪಿತವಾದ ಚಿನ್ನಾಭರಣವಿತ್ತು. 2015ರ ಮೇ 14ರಿಂದ 2015ರ ಆ.15ರ ವರೆಗೆ 192.550 ಗ್ರಾಮ್ಸ್ ಚಿನ್ನಾಭರಣ ಸಂಗ್ರಹವಾಗಿತ್ತು. ಹೊಸತಾಗಿ ಅಧಿಕಾರ ಸ್ವೀಕರಿಸಿದ ಟಿ.ಆರ್. ಉಮಾ ಅವರ ಆಡಳಿತಾವಧಿಯ 2015ರ ನ. 10ರಿಂದ 2016ರ ಫೆ. 10ರ ವರೆಗೆ 323.200 ಗ್ರಾಂ, ಚಿನ್ನಾಭರಣ ಸಂಗ್ರಹವಾಗಿದ್ದು 2012ರಿಂದ 2016ರ ಈ ಅವಧಿಯಲ್ಲಿ ಒಟ್ಟು 3069.390 ಗ್ರಾಂ. 48 ವಿವಿಧ ಮಾದರಿಯ ಚಿನ್ನಾಭರಣಗಳು ಭಕ್ತರಿಂದ ಕಾಣಿಕೆ ರೂಪದಲ್ಲಿ ದೇವಿಗೆ ಸಮರ್ಪಿತವಾಗಿತ್ತು.