(ವರದಿ,ಚಿತ್ರ- ಯೋಗೀಶ್ ಕುಂಭಾಸಿ)
ಕುಂದಾಪುರ: ತಮ್ಮ ಮನೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಒಂಟಿಯಾಗಿ ವಾಸವಿದ್ದ ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಮಾನುಷವಾಗಿ ಕೊಲೆಗೈದು ಪರಾರಿಯಾಗಿರುವ ಘಟನೆ ನಡೆದಿದ್ದು ಕೊಲೆ ಪ್ರಕರಣ ಶನಿವಾರ ಬೆಳಿಗ್ಗೆನ ಜಾವ ಬೆಳಕಿಗೆ ಬಂದಿದೆ. ಬೈಂದೂರು ಸಮೀಪದ ನಾವುಂದ ಎಂಬಲ್ಲಿ ಈ ಬರ್ಬರ ಕೊಲೆ ನಡೆದಿದೆ.
ನಾವುಂದ ಪಡುವಾಯಿನಮನೆ ನಿವಾಸಿ ಮಾಧವ ಪೂಜಾರಿ ( 62 ) ಎನ್ನುವವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಏನಿದು ಘಟನೆ?
ಬಿಜೂರು ಹೊಸ್ಕೋಟೆ ಮೂಲದ ಮಾಧವ ಪೂಜಾರಿ ಮುಂಬೈಯಲ್ಲಿನ ಮಫತ್ ಲಾಲ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು ನಾವುಂದದ ಗುಲಾಬಿ ಅವರನ್ನು ವಿವಾಹವಾಗಿದ್ದರು. ಮೂರು ವರ್ಷಗಳ ಹಿಂದೆ ಕಂಪೆನಿಯಲ್ಲಿ ನಿವೃತ್ತಿ ಹೊಂದಿದ್ದು ನಾವುಂದದ ತಮ್ಮ ಪತ್ನಿ ಮನೆಯಲ್ಲಿ ಏಕಾಂಗಿಯಾಗಿದ್ದರು. ನಿತ್ಯ ಪತ್ನಿ ಹಾಗೂ ಮೂರು ಮಕ್ಕಳೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿರುತ್ತಿದ್ದ ಇವರು ನೆರೆಕೆರೆಯವರ ಬಳಿಯೂ ಆತ್ಮೀಯತೆಯಲ್ಲಿದ್ದರು. ಶುಕ್ರವಾರ ನಾವುಂದ ಪೇಟೆಗೆ ತೆರಳಿದ್ದ ಅವರು ಅಂಗಡಿಯೊಂದರಲ್ಲಿ ಊಟಕ್ಕಾಗಿ ಹಸಿಮೆಣಸಿನಕಾಯಿ ಖರೀಧಿಸಿ ತಾನು ಒಂದೆರಡು ದಿನದಲ್ಲಿ ಮುಂಬೈಗೆ ತೆರಳುವ ಬಗ್ಗೆ ಹೇಳಿ ಆತ್ಮೀಯತೆಯಿಂದ ಮಾತನಾಡಿ ಮನೆಗೆ ವಾಪಾಸ್ಸಾಗಿದ್ದರು ಎನ್ನಲಾಗಿದೆ. ಮುಂಬೈಗೆ ತೆರಳಬೇಕೆಂದುಕೊಂಡಿದ್ದ ಮಾಧವ್ ಅವರು ಮಾತ್ರ ಕೊನೆಗೂ ಮನೆಯಲ್ಲಿ ಸಿಕ್ಕಿದ್ದು ಬೆಳಿಗ್ಗೆನ ಜಾವದಲ್ಲಿ….. ಅದು ಹೆಣವಾಗಿ.
ಮುಂಬೈಗೆ ಹೋಗಲು ಬಂದ ಮಗಳು…ಆದರೇ ವಿಧಿಯಾಟವೇ…..
ಮಾಧವ ಪೂಜಾರಿ ಹಾಗೂ ಫ್ಯಾಮಿಲಿ ಅಂದುಕೊಂಡಂತೆ ಆಗಿದ್ದರೇ ಅವರು ಭಾನುವಾರ ತನ್ನ ಮಗಳು ಅಳಿಯ ಹಾಗೂ ಮೊಮ್ಮಗು ಜೊತೆ ಮುಂಬೈಗೆ ತೆರಳಬೇಕಿತ್ತು. ಆದರೇ ವಿಧಿಯಾಟವೇ ಬೇರೆಯಾಗಿತ್ತು. ಎಲ್ಲರ ಬಳಿ ತಾನೂ ಮುಂಬೈಗೆ ತೆರಳುವೆ ನನ್ನ ಮಗಳು ಬರುವಳು…ಎಂದೆಲ್ಲಾ ಖುಷಿಯಂದಲೇ ಹೇಳಿಕೊಂಡಿದ್ದ ಮಾಧವ ಪೂಜಾರಿ ಮನೆಯ ಬಾತ್ ರೂಂ ಸಮೀಪದ ಫ್ಯಾಸೇಜ್ ಬಳಿ ಹೆಣವಾಗಿ ಮಲಗಿದ್ದರು. ತಂದೆಯನ್ನು ನೋಡಬೇಕು…ಅವರೊಂದಿಗೆ ಮಾತಾಡಬೇಕು..ಮುಂಬೈಗೆ ತೆರಳಬೇಕು ಎಂದು ಮೈಸೂರಿನಿಂದ ದೊಡ್ಡ ಮಗಳು ಪ್ರತಿಭಾ ಪತಿ ಹಾಗೂ ಮಗುವಿನ ಜೊತೆಯಾಗಿ ಬಂದಿದ್ದರು. ಬೆಳಿಗ್ಗೆ ಬರುವಾಗಲೆ ಅವರಿಗೆ ಶಾಕ್ ಕಾದಿತ್ತು. ಮನೆಯ ಮುಂಭಾಗಕ್ಕೆ ಬೀಗ ಹಾಕಲಾಗಿತ್ತು.
ಮಗಳಿಗೆ ತಂದೆ ನೋಡಲು ಸಿಕ್ಕಿದ್ದು ಹೆಣವಾಗಿ…
ತಂದೆ ಮನೆಯಲ್ಲಿರದದ್ದನ್ನು ನೋಡಿ ಮನೆ ಸಮೀಪದ ಕುಟುಂಬಿಕರ ಮನೆಯಲ್ಲಿ ವಿಚಾರಿಸಿದಾಗ ಬೆಳಿಗ್ಗೆನ ವಾಕಿಂಗ್ ಹೋಗಿರಬಹುದು ಈಗೇನು ಬರುತ್ತಾರೆ ಎನ್ನುವ ಉತ್ತರ ಪ್ರತಿಭಾಗೆ ಸಿಕ್ಕಿತ್ತು. ಗಂಟೆಗಳ ಕಾಲ ಕಾದರೂ ಕೂಡ ತಂದೆ ಸುಳಿವಿಲ್ಲದಾಗ ಆತಂಕಗೊಂದ ಪ್ರತಿಭಾ ಅವರು ತಮ್ಮ ತಾಯಿ ಗುಲಾಬಿಗೆ ಫೋನಾಯಿಸಿ ವಿಚಾರಿಸಿದಾಗ ಬಾಗಿಲು ಒಡೆದು ನೋಡುವಂತೆ ಸೂಚಿಸಿದ್ದು ಬಳಿಕ ಬಾಗಿಲ ಬೀಗ ಒಡೆದು ಒಳಹೋಗಿ ಮನೆಯಲ್ಲ ಹುಡುಕುವಾಗ ಮನೆಯ ಬಾತ್ ರೂಂ ಪ್ಯಾಸೇಜ್ ಬಳಿ ಬೋರಲಾಗಿ ಮಾಧವ ಪೂಜಾರಿ ಶವವಾಗಿ ಮಲಗಿದ್ದರು. ಕೊನೆಗೂ….. ತನ್ನ ತಂದೆಯೊಂದಿಗೆ ಸಂಸಾರ ಸಮೇತ ತಾಯಿಯನ್ನು ಭೇಟಿ ಮಾಡಲು ಮುಂಬೈಗೆ ತೆರಳಬೇಕೆಂದು ಬಂದಿದ್ದ ಪ್ರತಿಭಾಗೆ ತಂದೆ ಸಿಕ್ಕಿದ್ದು ಹೆಣವಾಗಿ.
ಮಾಡಿದ್ದ ಅಡುಗೆ ಹಾಗೆಯೇ ಇತ್ತು..!
ಶುದ್ಧ ಸಸ್ಯಹಾರಿಯಾಗಿದ್ದ ಮಾಧವ ಅವರು ಶುಕ್ರವಾರ ಸಂಜೆ ವೇಳೆ ಅಡುಗೆ ಮಾಡಲೆಂದು ಮೆಣಸು ತಂದು ರಾತ್ರಿಗಾಗಿ ತನಗೆ ಬೇಕಾದ ಅಡುಗೆ ತಯಾರಿಸಿದ್ದರು. ಆದರೇ ಮಾಡಿದ ಅಡುಗೆ (ರೊಟ್ಟಿ ಮತ್ತು ಚಟ್ನಿ ಇತ್ತು ಎನ್ನಲಾಗಿದೆ) ಮಾತ್ರ ಹಾಗೆಯೇ ಇತ್ತು. ರಾತ್ರಿ ಮನೆಗೆ ಬಂದ ಬಳಿಕ ಅಂದರೇ (7.30-9.30) ಊಟದ ಸಮಯದ ನಡುವೆಯೇ ಈ ಕೊಲೆ ನಡೆದಿರಬಹುದು ಎನ್ನಲಾಗಿದ್ದು ಹಲವು ಸಂಶಯಗಳಿಗೆ ಎಡೆಮಾಡಿದೆ. ಬೋರಲು ಮಲಗಿದ ಸ್ಥಿತಿಯಲ್ಲಿ ಶವ ಸಿಕ್ಕಿದ್ದು ಒಳಚಡ್ಡಿ ಹಾಗೂ ಬನಿಯನ್ ಮಾತ್ರ ಧರಿಸಿದ್ದು ಕಂಡುಬಂದಿದೆ.
ಮನೆ ಮುಂದಿನ ಬಾವಿಯಲ್ಲಿ..
ಮನೆಯ ಮುಂದಿನ ಬಾವಿಯಲ್ಲಿ ಮುಂಬಲಿಗೆ ಹಾಕಿದ್ದ ಬೀಗದ ಕೈ ಹಾಗೂ ಲೇಡಿಸ್ ಪರ್ಸ್ ದೊರಕಿದ್ದು ಕಪಾಟಿನ ಕೀಲಿಕೈಗಳು ಸಿಕ್ಕಿದೆ. ಅದರೊಳಗೆ ಯಾವುದಾದರೂ ಮಾರಕಾಯುಧಗಳು ಎಸೆದಿರಬಹುದೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಯಿತಾದರೂ ಯವುದೇ ಪ್ರಯೋಜನವಾಗಿಲ್ಲ.
ಕೊಲೆ ಸುತ್ತ ಅನುಮಾನದ ಹುತ್ತ..
ಎಲ್ಲರೊಂದಿಗೂ ಆತ್ಮೀಯವಾಗಿದ್ದ ಮಾಧವ ಪೂಜಾರಿ ಕೊಲೆಯ ಸುತ್ತ ಅನುಮಾನಗಳು ಕಾಡುತ್ತಿದೆ. ಮುಂಬೈಗೆ ತೆರಳುವ ಮುನ್ನ ದಿನವೇ ತಮ್ಮ ಮನೆಯಲ್ಲಿ ಬರ್ಬರ ಕೊಲೆ ನಡೆದಿರುವುದು ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ರಾತ್ರಿಯೇ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು ಹಲವು ಅನುಮಾನಗಳು ಸಾರ್ವಜನಿಕರನ್ನು ಕಾಡತೊಡಗಿದೆ. ಮಾಧವ ಪೂಜಾರಿ ಕುತ್ತಿಗೆಯಲ್ಲಿದ್ದ ಬಂಗಾರದ ಸರ ಹಾಗೂ ಕೈಯಲ್ಲಿದ್ದ ಉಂಗುರವನ್ನು ಕೊಲೆಗಾರರು ಎಗರಿಸಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನು ಮನೆಯೊಳಕ್ಕೆ ಏನಾದರೂ ದೋಚಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ತನಿಖೆ ಜಾಡು ತಪ್ಪಿಸುವ ನಿಟ್ಟಿನಲ್ಲಿ ದುಷ್ಕರ್ಮಿಗಳು ಮನೆ ಒಳಭಾಗದಲ್ಲಿ ಕೊಬ್ಬರಿ ಎಣ್ಣೆ ಚೆಲ್ಲಿದ್ದಾರೆ.
ಎಸ್ಪಿ ಹಾಗೂ ಸ್ಥಳೀಯ ಪೊಲೀಸರು ದೌಡು
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬೈಂದೂರು ಎಸ್.ಐ. ಸಂತೋಷ ಕಾಯ್ಕಿಣಿ, ಗಂಗೊಳ್ಳಿ ಎಸ್.ಐ. ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.
ಎಸ್ಪಿ ಏನು ಹೇಳ್ತಾರೇ ಗೊತ್ತಾ?
ಕಳ್ಳತನ ಮಾಡಲು ಬಂದು ಈ ಕೊಲೆ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ತಿಂಗಳ ಹಿಂದಷ್ಟೇ ಉಡುಪಿ ಕಟಪಾಡಿ ಸಮೀಪ ಒಂಟಿ ವೃದ್ಧನೋರ್ವನ ಕೊಲೆ ನಡೆದಿರುವುದಕ್ಕೂ ಇದಕ್ಕೂ ಸಾಮ್ಯತೆ ಕಂಡುಬರುತ್ತಿದ್ದು. ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದೇವೆ ಎಂದರು.
ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳಬೇಕು: ಶಾಸಕ ಗೋಪಾಲ ಪೂಜಾರಿ
ನಡೆಯಬಾರದ ಘಟನೆ ನಡೆದುಹೋಗಿದೆ. ಘಟನೆಯಿಂದಗಿ ಅತೀವ ನೋವಾಗಿದೆ. ರಾತ್ರಿ ವೇಳೆ ಇಂತಹ ಘಟನೆಗಳು ಜಾಸ್ಥಿಯಾಗಿದ್ದು ಪೊಲೀಸರು ರಾತ್ರಿ ಗಸ್ತು ಜಾಸ್ಥಿ ಮಾಡಬೇಕಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆದು ತಪ್ಪಿತಸ್ಥರ ಬಂಧನವಾಗಬೇಕಿದೆ. ಮುಂದಿನ ದಿನದಲ್ಲಿ ಪೊಲೀಸ್ ಇಲಾಖೆಯೂ ಮುಂಜಾಗ್ರತಾ ಕ್ರಮ ವಹಿಸಬೇಕಿದೆ.
ಶ್ವಾನದಳವು ಸ್ಥಳಕ್ಕೆ ಆಗಮಿಸಿದ್ದು, ನಾವುಂದ ರಿಕ್ಷಾ ನಿಲ್ದಾಣದವರೆಗೂ ತೆರಳಿ ವಾಪಾಸ್ಸಾಗಿದೆ. ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ಉಡುಪಿ ಎಸ್ಪಿ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.