ಚಿತ್ರ,ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಕುಂದಾಪುರದಲ್ಲಿ ವಿವಿಧ ಕಾರಣದಿಂದಾಗಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಮೊದಲಾದ ಸಮಸ್ಯೆಯಿಂದಾಗಿ ವಾಹನ ಸವಾರರು, ಪಾದಾಚಾರಿಗಳು, ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದು ಜನರ ಸಮಸ್ಯೆಗೆ ಪೊಲೀಸ್ ಇಲಾಖೆ ಶೀಘ್ರವಾಗಿ ಸ್ಪಂದಿಸಿದೆ. ಈ ಮೂಲಕ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಅಧಿಕಾರಿಗಳು ವ್ಯವಸ್ಥಿತ ಕೆಲಸವನ್ನು ಮಾಡುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ…
ಗುರುವಾರ ಬೆಳಿಗ್ಗೆ 9.30ರ ವೇಳೆಗೆ ಡಿವೈಎಸ್ಪಿ, ಕುಂದಾಪುರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ. ಹಾಗೂ ಟ್ರಾಫಿಕ್ ಠಾಣೆ ಸಿಬ್ಬಂದಿಗಳ ತಂಡ ಬಸ್ರೂರು ಮೂರುಕೈ ಪ್ರದೇಶದಲ್ಲಿ ಪರಿಶೀಲನೆ ನಡೆಸಿ ಸುವ್ಯವ್ಯಸ್ಥಿತ ಸಂಚಾರಕ್ಕಾಗಿ ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಸ್ಥಳದಲ್ಲಿ ಅಳವಡಿಸುವ ಕಾರ್ಯವನ್ನು ಮಾಡಿದರು. ಸತತ ನಾಲ್ಕು ಗಂಟೆ ಹೆದ್ದಾರಿಯಲ್ಲಿ ಅಧಿಕಾರಿಗಳು ಟ್ರಾಫಿಕ್ ನಿರ್ವಹಣೆ ಸಂಬಂದಪಟ್ಟ ಕಾರ್ಯವನ್ನು ಮಾಡುವ ಮೂಲಕ ನಾಗರೀಕರ ಮೆಚ್ಚುಗೆಗೆ ಪಾತ್ರರಾದರು.
ಸಮಸ್ಯೆ ಏನು ಮತ್ತು ಯಾಕೆ?
ಬಸ್ರೂರು ಮೂರುಕೈ ಪ್ರದೇಶವು ಕುಂದಾಪುರ ನಗರದಲ್ಲಿ ಬಹುತೇಕ ಟ್ರಾಫಿಕ್ ಕಿರಿಕಿರಿ ಇರುವ ಪ್ರದೇಶವಾಗಿದ್ದು ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಜಂಕ್ಷನ್ ಪ್ರದೇಶವಾದ ಕಾರಣ ವಾಹನ ದಟ್ಟಣೆಯೂ ಅಧಿಕವಾಗಿದೆ. ಅಲ್ಲದೇ ಹದಿನೈದು ದಿನಗಳಿಂದೀಚೆಗೆ ಈ ಭಾಗದಲ್ಲಿ ಚತುಷ್ಪತ ಕಾಮಗಾರಿ ಅರೆಬರೆಯಾಗಿ ನಡೆದಿದ್ದು ಹೆದ್ದಾರಿಯ ಅಗಲ ಹಾಗೂ ರಾಜ್ಯ ಹೆದ್ದಾರಿ ಅಗಲವು ಕಿರಿದಾಗಿದೆ.
ಪೊಲೀಸರು ಕಂಡುಕೊಂಡ ದಾರಿ….
ಗುರುವಾರ ಬೆಳಿಗ್ಗೆ ಪೊಲೀಸರು ರಾಷ್ಟ್ಟ್ರೀಯ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯ ಒಂದಷ್ಟು ದೂರ ಮಧ್ಯ ಭಾಗದಲ್ಲಿ ಬ್ಯಾರಿಕೇಡ್ ಇಡುವ ಮೂಲಕ ಸೂಚನ ಫಲಕ ಅಳವಡಿಸಿ ಒನ್ ವೇ ಮಾಡಿದರು. ಮಾತ್ರವಲ್ಲದೇ ರಾಜ್ಯ ಹೆದ್ದಾರಿಯ ಸಿದ್ದಾಪುರ, ಬಸ್ರೂರು, ಕಂಡ್ಲೂರು ಸೇರಿದಂತೆ ವಿವಿಧ ಭಾಗಗಳಿಂದ ಕುಂದಾಪುರದತ್ತ ಸಾಗುವ ಎಲ್ಲಾ ವಾಹನಗಳು ಕೋಟೇಶ್ವರ ಕಡೆಗೆ ತಿರುಗಿಸಿಕೊಂಡು ಕೊಂಚ ದೂರ ಸಾಗಿ ಅಲ್ಲಿ ರಸ್ತೆ ದಾಟುವ ಮೂಲಕ ಕುಂದಾಪುರದತ್ತ ಸಾಗಿಹೋಗುವ ರೀತಿಯಲ್ಲಿ ಬೇಕದ ಪರ್ಯಾಯ ವ್ಯವಸ್ಥೆ ರೂಪಿಸಲಾಯಿತು. ಇನ್ನು ಟ್ರಾಫಿಕ್ ಸಮಸ್ಯೆ ಜಸ್ಥಿಯಿರುವ ಭಾಗದಲ್ಲಿ ಟ್ರಾಫಿಕ್ ಸಿಬ್ಬಂಧಿಗಳನು ನಿಯೋಜ್ಸಿಉವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ದಟ್ಟಣೆ ಅಧಿಕ….
ಇತ್ತ ಪೊಲೀಸ್ ಅಧಿಕಾರಿಗಳು ನೂತನ ವ್ಯವ್ಸ್ಥೆ ಮೂಲಕವು ವಾಹನ ದಟ್ಟಣೆಗೆ ಹರಸಾಹಸ ಪಡುತ್ತಿದ್ದರೇ ಇತ್ತ ಶುಭಸಮಾರಂಭಗಳು ಸೇರಿದಂತೆ ವಿವಿಧ ಕಡೆಗಳಿಗೆ ತೆರಳುವ ಪ್ರವಾಸಿ ಬಸ್ಸುಗಳು ಹಾಗೂ ಇತರೇ ವಾಹನಗಳು ರಸ್ತೆಯಲ್ಲಿ ಗುರುವಾರವೂ ಅಧಿಕ ಪ್ರಮಾಣದಲ್ಲಿದ್ದವು. ಶುಕ್ರವಾರವೂ ತಾಲೂಕಿನಾದ್ಯಂತ ಬಹಳಷ್ಟು ಕಾರ್ಯಕ್ರಮಗಳಿದ್ದು ಶುಕ್ರವಾರವೂ ಕುಂದಾಪುರದಲ್ಲಿ ವಾಹನ ದಟ್ಟಣೆ ಅಧಿಕವಾಗಿರುವ ಸಂಭವ ಬಹಳಷ್ಟಿದೆ.
ಗುತ್ತಿಗೆ ಕಂಪೆನಿಗೆ ಜನರ ಹಿಡಿಶಾಪ…
ಕುಂದಾಪುರ ನಗರದ ಆಸುಪಾಸಿನಲಲ್ಲಿ ಕೆಲವು ಪ್ರದೇಶಗಳಲ್ಲಿ ಅರೆಬರೆ ಕಾಮಗಾರಿ ನಡೆಸಿ ವಾಹನ ಸವಾರರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಚತುಷ್ಪತ ಕಾಮಗಾರಿ ಗುತ್ತಿಗೆ ಕಂಪೆನಿ ವಿರುದ್ಧ ವಾಹನ ಸವಾರರು ಕಿಡಿಕಾರಿದ್ದಾರೆ. ಇನ್ನೇನು ಒಂದೆದೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಕಾಮಗಾರಿ ಅವ್ಯವಸ್ಥೆಯಿಂದಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗುವ ಮೊದಲು ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಜೆಪಿ ಕ್ಷೇತ್ರಾಧ್ಯಕ್ಷರ ಆಗ್ರಹ…
ಇಂದಿನ ದಿನಗಳಲ್ಲಿ ವಾಹನಗಳ ಸಂಖ್ಯೆ ತುಂಬಾ ಜಾಸ್ತಿ ಇರುವುದರಿಂದ ಮತ್ತು ರಸ್ತೆ ಅಗಲೀಕರಣದಿಂದಾಗಿ ಜನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿತ್ತು. ಬೇಸಿಗೆ ರಜಾ ಕಾರಣ ಹೆಚ್ಚಿನ ಜನರು ಪ್ರವಾಸ ಮತ್ತು ಮದುವೆ ಇತ್ಯಾದಿ ಸಮಾರಂಭಗಳಿಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದರಿಂದ ಒಮ್ಮೊಮ್ಮೆ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಸಂಚಾರಕ್ಕೆ ತುಂಬಾ ತೊಂದರೆಯಾಗಿ ಆಗಾಗ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇದನ್ನು ಸರಿಪಡಿಸಲು ಪೋಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಮತ್ತು ಮುಂದಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕಾಗಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ ತಿಳಿಸಿರುತ್ತಾರೆ.