ವರದಿ: ಎಂ.ಇಕ್ಬಾಲ್, ಉಚ್ಚಿಲ, ದುಬೈ
ಫೋಟೋ:ಅಶೋಕ್ ಬೆಳ್ಮಣ್
ದುಬೈ, ಸೆ.27: ದುಬೈಯ ಅಲ್ನಾಸರ್ ಲೀಸರ್ಲ್ಯಾಂಡ್ನ ಅಲ್ನಶ್ವಾನ್ ಸಭಾಂಗಣದಲ್ಲಿ ಖ್ಯಾತ ಕನ್ನಡ ಸಾಹಿತಿ ಜಯಂತ ಕಾಯ್ಕಿಣಿಯವರ ‘ಇತೀ ನಿನ್ನ ಅಮೃತಾ’ ಕನ್ನಡ ನಾಟಕ ಬಹಳ ಉತ್ತಮವಾಗಿ ಮೂಡಿಬಂದಿದ್ದು, ನಾಟಕ ನಿರ್ದೇಶಿಸಿದ ನಾಟಕಕಾರ, ರಂಗಭೂಮಿ ನಿರ್ದೇಶಕ ಪ್ರಕಾಶ್ರಾವ್ ಪಯ್ಯರ್ರ ಕಲಾನೈಪುಣ್ಯತೆ ಮೆಚ್ಚುಗೆಗೆ ಪಾತ್ರವಾಯಿತು.
ದುಬೈಯ ಪ್ರಕಾಶ್ರಾವ್ ಪಯ್ಯರ್ರ ನೇತೃತ್ವದ ಧ್ವನಿ ಬಳಗದ ಆಶ್ರಯದಲ್ಲಿ ನಡೆದ ‘ಇತೀ ನಿನ್ನ ಅಮೃತಾ’ ನಾಟಕವು ವಿಶ್ವದ ಎಲ್ಲೆಡೆ ಶಭಾನಾ ಆಝ್ಮಿ ಹಾಗೂ ಫಾರೂಖ್ ಶೇಖ್ರವರಿಂದ ಅಭಿನಯಿಸಲ್ಪಟ್ಟು ದಾಖಲೆ ನಿರ್ಮಿಸಿದ ಜಾವೇದ್ ಸಿದ್ದಿಕಿಯವರ ಹಿಂದಿ ನಾಟಕ ‘ತುಮಾರಿ ಅಮೃತ’ದ ಕನ್ನಡ ರೂಪಾಂತರವಾಗಿದ್ದು, ಸಾಹಿತಿ ಜಯಂತ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ.
ಹಲವು ಕನ್ನಡ ನಾಟಕಗಳನ್ನು ಬಹಳ ಯಶಸ್ವಿಯಾಗಿ ನಿರ್ದೇಶಿಸಿ ಪ್ರದರ್ಶಿಸಿದ ಪ್ರಕಾಶ್ರಾವ್ ಪಯ್ಯರ್, ‘ಇತೀ ನಿನ್ನ ಅಮೃತಾ’ವನ್ನು ನಿರ್ದೇಶಿಸಿದ್ದು, ಈ ನಾಟಕವು ವೀಕ್ಷಕರನ್ನು ತಲ್ಲಣಗೊಳಿಸಿತು. ಆರಂಭದಿಂದ ಕೊನೆಯ ವರೆಗೂ ನಾಟಕ ಜನರ ಮನಗೆದ್ದಿತು.
ಹಲವಾರು ನಾಟಕಗಳಲ್ಲಿ ಅದ್ಭುತ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ ಗೋಪಿಕಾ ಮಯ್ಯ ಹಾಗೂ ಪ್ರಭಾಕರ ಕಾಮತ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ ‘ಇತೀ ನಿನ್ನ ಅಮೃತಾ’ ನಾಟಕದಲ್ಲಿ ತಮ್ಮ ಕಲಾಪ್ರೌಡಿಮೆಯನ್ನು ಪ್ರದರ್ಶಿಸಿದ್ದಾರೆ. ಸುಮಾರು ಮೂವತ್ತೈದು ವರ್ಷಗಳವರೆಗೆ ಪತ್ರಮುಖೇನ ಪ್ರೀತಿಸುವ ಇಬ್ಬರು ನಡೆಸುವ ಸಂವಾದ ಈ ನಾಟಕದ ಜೀವಾಳವಾಗಿದೆ. ಈ ಅವಧಿಯಲ್ಲಿ ಒಂದಾಗಲೂ ಸಾಧ್ಯವಾಗದೇ ಬೇರ್ಪಡಲೂ ಆಗದೆ ಜೀವನ ಸವೆಸುವ ಸಂದ್ಗಿಗ್ಧತೆಯ ದುರಂತಕತೆ ಇದಾಗಿದೆ.
ಝುಲ್ಪಿ ಹಾಗೂ ಅಮೃತಾರ ಪ್ರೇಮದ ಕುರಿತ ನಾಟಕವು ಕೇವಲ ಇಬ್ಬರ ಮಧ್ಯೆಯೇ ಕೇಂದ್ರೀಕೃತವಾಗಿದ್ದು, ಇವರಿಬ್ಬರು ತಮ್ಮ ಪ್ರೀತಿಯನ್ನು ಪತ್ರದ ಮೂಲಕವೇ ಸಾದರಪಡಿಸುವ ರೀತಿ, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದೆ, ಕೇವಲ ಪತ್ರವೇ ಇವರಿಬ್ಬರ ಸಂವಾಹನವಾಗಿ ಆರಂಭದಿಂದ ಕೊನೆಯವರೆಗೆ ಯಾವ ರೀತಿ ಪಾತ್ರವನ್ನು ನಿರ್ವಹಿಸುತ್ತದೆ, ಕೊನೆಯಲ್ಲಿನ ಇವರಿಬ್ಬರ ದುರಂತಕಥೆಯನ್ನು ಪಯ್ಯರ್ರವರು ತುಂಬಾ ಅದ್ಭುತವಾಗಿ ನಿರ್ದೇಶಿಸಿದ್ದಾರೆ. ಜೊತೆಗೆ ಗೋಪಿಕಾ ಮಯ್ಯ ಹಾಗೂ ಪ್ರಭಾಕರ ಕಾಮತ್ರ ಮಾತುಗಾರಿಕೆ ನಾಟಕಕ್ಕೆ ಇನ್ನಷ್ಟು ಜೀವತುಂಬಿದೆ.
ನಾಟಕದ ರಂಗಸಜ್ಜಿಕೆ, ಬೆಳಕು, ಧ್ವನಿ ಬಹಳ ಉತ್ತಮವಾಗಿ ರಚಿಸಲಾಗಿದ್ದು, ಪಯ್ಯರ್ರ ನಿರ್ದೇಶನವು ಒಟ್ಟಾರೆ ನಾಟಕವನ್ನು ಬಹಳಷ್ಟು ಚೆಂದವಾಗಿ ಮೂಡಿಬರುವಂತೆ ಮಾಡಿದೆ. ವಿನಯ್ ಕುಮಾರ್ ನಾಯಕ್ರ ಬೆಳಕು ಮತ್ತು ವಿನ್ಯಾಸ, ಗಣೇಶ್ ರೈಯವರ ರಂಗಪರಿಕಲ್ಪನೆ, ಸಂಪತ್ ಶೆಟ್ಟಿ, ಸಂತೋಷ್ ಪೂಜಾರಿ, ಸಂದೇಶ್ ಜೈನ್, ಸತೀಶ್ ಉಳ್ಳಾಲ್ರ ರಂಗ ಸಂಯೋಜನೆ, ಪದ್ಮರಾಜ ಎಕ್ಕಾರು, ಗಣೇಶ್ ಕುಲಾಲ್, ಸುಗಂಧರಾಜ್ ಬೇಕಲ್ರ ಮೇಲ್ವಿಚಾರಣೆ ನಾಟಕಕಕ್ಕೆ ಮತ್ತಷ್ಟು ಮೆರುಗನ್ನು ನೀಡಿತು.
2010ರ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತರಾದ ಪ್ರಕಾಶ್ರಾವ್ ಪಯ್ಯರ್, ಇದುವರೆಗೆ ಸುಮಾರು 27 ನಾಟಕಗಳನ್ನು ನಿರ್ದೇಶಿಸಿದ್ದು, ಅದರಲ್ಲಿ ಗಿರೀಶ್ ಕಾರ್ನಾಡರ ನಾಗಮಂಡಲ,ಹಯವದನ,ಒಡಕಲು ಬಿಂಬ,ಬಲಿ ಮತ್ತು ಮೋಹನ್ ರಾಕೇಶ್ರವರ ಅಶಾಢದ ಒಂದು ದಿನ ನಾಟಕಗಳು ಪ್ರಮುಖವಾಗಿವೆ.
ಪ್ರೊ.ಎಚ್.ಎಸ್.ಶಿವಪ್ರಕಾಶ್ರಿಗೆ ‘ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ಕನ್ನಡ ರಂಗಭೂಮಿ ಪ್ರಶಸ್ತಿ ಪ್ರದಾನ
ಕವಿ, ಲೇಖಕ, ಅನುವಾದಕರಾಗಿರುವ ಪ್ರೊ.ಎಚ್.ಎಸ್.ಶಿವಪ್ರಕಾಶ್ರಿಗೆ ನಾಟಕ ಪ್ರದರ್ಶನದ ವೇಳೆ ‘ಧ್ವನಿ ಶ್ರೀರಂಗ’ ಅಂತಾರಾಷ್ಟ್ರೀಯ ಕನ್ನಡ ರಂಗ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಎಚ್.ಎಸ್.ಶಿವಪ್ರಕಾಶ್, ಕನ್ನಡನಾಡಿನಲ್ಲಿಯೇ ಕನ್ನಡ ಭಾಷೆ ಅವನತಿಯ ಹಾದಿ ಹಿಡಿದಿರುವ ವೇಳೆ ಹೊರನಾಡಿನ ಕನ್ನಡಿಗರು ತಮ್ಮ ಭಾಷೆಯ ಉಳಿವಿಗಾಗಿ ಮಾಡುತ್ತಿರುವ ಕೆಲಸ ಕಾರ್ಯ ಅನನ್ಯ. ಭಾಷೆ-ಸಂಸ್ಕೃತಿಯ ಉಳಿವಿಗಾಗಿ ಮಾಡುತ್ತಿರುವ ಉದಾತ್ತ ಧ್ಯೇಯವನ್ನು ಕೊಂಡಾಡಿದರು.
ಶಿಕ್ಷಣ, ಉದ್ಯಮ, ವೈದ್ಯಕೀಯ, ವಿದ್ಯುನ್ಮಾ ಕ್ಷೇತ್ರಗಳಲ್ಲಿ ತೊಡಗಿರುವ ಹೊರನಾಡಿನಲ್ಲಿರುವ ಕನ್ನಡಿಗರು, ಭಾಷೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಇನ್ನೂ ಭಾಷೆಯನ್ನು ಜೀವಂತವಾಗಿ ಉಳಿಸಿರುವುದೇ ಇಂಥ ಒಳ್ಳೆಯ ಕಾರ್ಯಕ್ರಮಗಳಿಗೆ ಸಾಕ್ಷಿ ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಗಣ್ಯರೆಲ್ಲರೂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿಲಿವಿಲಿಯ ಸತೀಶ್ ವೆಂಕಟರಮಣ, ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸಿತಾರ್ ವಾದಕ ಮಧುಸೂದನ್, ಅರಬ್ ಉಡುಪಿಯ ಶೇಖರ್ ಶೆಟ್ಟಿ, ಸರ್ವೋತಮ ಶೆಟ್ಟಿ, ರಾಮಚಂದ್ರ ಹೆಗ್ಡೆ, ಬರಹಗಾರ ಗಣೇಶ್ ರೈ, ಧ್ವನಿ ಬಳಗದ ಅಧ್ಯಕ್ಷ, ನಾಟಕ ನಿರ್ದೇಶಕ ಪ್ರಕಾಶ್ರಾವ್ ಪಯ್ಯರ್ ಉಪಸ್ಥಿತರಿದ್ದರು.
1 Comment
Cheers to Gopika Mayya & Prakash Payyar. Hearty Congrats & Best Wishes