ಮಂಗಳೂರು: ಜೆಪ್ಪಿನಮೊಗರು ಬಳಿಯ ಮೈದಾನವನ್ನು ಸುಳ್ಳು ದಾಖಲೆ ಸೃಷ್ಠಿಸಿ ಮಾರಾಟ ಮಾಡಲು ಬಿಲ್ಡರ್ಗಳು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ರವಿವಾರ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಾರ್ವಜನಿಕರ ಜೊತೆ ಸೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಕಾರರನ್ನುದೇಶಿಸಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೇಶ್ ಶೆಟ್ಟಿ ಜೆಪ್ಪು ಮಾತನಾಡಿ, ಆಟದ ಮೈದಾನವನ್ನು ಹಲವು ಬಿಲ್ಡರ್ಗಳು ಆಕ್ರಮಿಸಿಕೊಳ್ಳುವ ತವಕದಲ್ಲಿದ್ದಾರೆ. ಅದಕ್ಕಾಗಿ ಸುಳ್ಳು ದಾಖಲೆಯನ್ನು ಸೃಷ್ಟಿಸಲಾಗಿದೆ. ಆದರೆ ಮೂಲ ದಾಖಲೆ ಜಾಗವನ್ನು ಸಾರ್ವಜನಿಕರಿಗೆ ದಾನ ಮಾಡಿರುವ ಲಾರೆನ್ಸ್ ಮುಸ್ಕರೇನಸ್ ಎಂಬವರ ಹೆಸರಿನಲ್ಲಿದೆ. ಆದರೆ ಈಗ ಅದನ್ನು ಅಶೋಕ್ ರೈ ಹೆಸರಿನಲ್ಲಿ ಪೋರ್ಜರಿ ದಾಖಲೆ ಸೃಷ್ಟಿಸಲಾಗಿದೆ. ಅಶೋಕ್ ರೈಯಂತಹಾ ಬಿಲ್ಡರ್ಗಳು ಮೈದಾನವನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವುದು ಖಂಡನಾರ್ಹ. ನಾವು ಆಟದ ಮೈದಾನವನ್ನು ಅತಿಕ್ರಮಿಸಲು ಬಿಡುವುದಿಲ್ಲ. ಹಾಗೊಂದು ವೇಳೆ ಏನಾದರೂ ಇಂಥ ಘಟನೆ ಸಂಭವಿಸಿದ್ದಲ್ಲಿ, ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸ್ಥಳೀಯ ನಿವಾಸಿ ಜಯಕಲಾ ಎಂಬ ಹಿರಿಯರೋರ್ವರು, ನಾವು ಚಿಕ್ಕಮಕ್ಕಳಿದ್ದಾಗ ಈ ಮೈದಾನದಲ್ಲಿ ಆಟವಾಡಿ ಕೊಂಡು ಬಂದಿದ್ದೇವೆ. ಈಗ ಈ ರೀತಿ ಪೋರ್ಜರಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲು, ಕಟ್ಟಡಗಳನನು ಕಟ್ಟಲು ತೊಡಗಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಮತ್ತು ನಮ್ಮ ಜೀವ ಹೋಗುವವರೆಗೂ ಅತಿಕ್ರಮ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಅವರು ಹೇಳಿದರು.
ನಂತರ ಮಾತನಾಡಿದ ಸ್ಥಳೀಯ ಕಾರ್ಪೊರೇಟರ್ ರತಿಕಲಾ ಇಲ್ಲಿ ಕೆಲವರು ಪಾಲಿಕೆಯಲ್ಲಿ ಪೋರ್ಜರಿ ದಾಖಲೆ ಸೃಷ್ಟಿಯಾಗಿರುವುದು ನಿಮ್ಮ ಗಮನಕ್ಕೆ ಬರದೆ ಹೇಗೆ ನಡೆಯಿತು ಎಂದು ಪ್ರಶ್ನಿಸುತ್ತಿದ್ದಾರೆ. ನಾನು ಆರು ತಿಂಗಳ ಹಿಂದೆಯಷ್ಟೇ ಕಾರ್ಪೊರೇಟರ್ ಆಗಿದ್ದೇನೆ. ನನಗೆ ಇಂತಹದ್ದೊಂದು ಸಂಚು ನಡೆಯುತ್ತಿದೆ ಎಂದು ಗೊತ್ತಾದ ಘಳಿಗೆಯಿಂದ ಮಾನಸಿಕವಾಗಿಯೂ, ದೈಹಿಕವಾಗಿಯೂ ಪ್ರತಿಭಟಿಸಲು ಸಿದ್ಧವಾಗಿದ್ದೇನೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಸಮೇತ ಹಲವರು ನೆರೆದಿದ್ದರು. ರಸ್ತೆ ತಡೆದು ಪ್ರತಿಭಟಿಸಿರುವುದೂ ಅಲ್ಲದೆ, ರಸ್ತೆಯಲ್ಲೇ ಕ್ರಿಕೆಟ್ ಆಡುವುದರ ಮೂಲಕ, ಮೈದಾನ ಅತಿಕ್ರಮಕ್ಕೆ ಅವಕಾಶ ಮಾಡಿಕೊಟ್ಟಲ್ಲಿ ರಸ್ತೆಯಲ್ಲೇ ಆಟವಾಡಲಾಗುವುದು ಎಂಬ ಪರೋಕ್ಷ ಎಚ್ಚರಿಕೆ ನೀಡಲಾಯಿತು.
2010ರಲ್ಲಿ ಜಯಕಿರಣ ಪತ್ರಿಕೆಯಲ್ಲಿ ವರದಿ ಪ್ರಕಟ :
`ಸರಕಾರಿ ಜಾಗ ಮಾರಾಟಕ್ಕೆ ಸಂಚು’ ಎಂಬ ತಲೆಬರಹದಡಿಯಲ್ಲಿ ಜೆಪ್ಪಿನಮೊಗರು ಬಳಿಯ ಮೈದಾನ ವನ್ನು ಮಾರಲು ಬಿಲ್ಡರ್ಗಳು ಸಂಚು ರೂಪಿಸಿದ್ದಾರೆ ಎಂದು ಜಯಕಿರಣ ಪತ್ರಿಕೆ 2010ರ ನವೆಂಬರ್ 9ರಂದು ವರದಿ ಮಾಡಿರುವುದನ್ನು ಇಲ್ಲಿ ಸ್ಮರಿಸ ಬಹುದು.