ಮುಂಬಯಿ: ಖಾರ್ಘರ್ ಸೆಕ್ಟರ್ ನಂಬರ್ 22, ಪ್ಲಾಟ್ ನಂಬರ್- 9, ಎಸ್ಆರ್ಎಸ್ ಮಠದಲ್ಲಿ ನಿರ್ಮಾಣವಾಗಲಿರುವ ಮಂತ್ರಾಲಯ ಶಾಖಾ ಮಠಕ್ಕೆ ಜು. 24ರಂದು ಶಿಲಾನ್ಯಾಸಗೈದು, ಆಶೀರ್ವಚನ ನೀಡಿದ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರು, ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ಯೋಗ ಶಕ್ತಿಯಿಂದ ಬೃಂದಾವನ ಸೇರಿ 300 ವರ್ಷ ತುಂಬುವ ಸರಿ ಸಮಯದಲ್ಲಿ ಈ ಬೃಂದಾವನ ನಿರ್ಮಾಣ ಗೊಳ್ಳಲಿದೆ. ಮಂತ್ರಾಲಯದ ಬೃಂದಾವನಕ್ಕೆ ಸರಿಹೊಂದುವ ಬೃಂದಾವನ ಇದಾಗಲಿದೆ. ಶ್ರೀಮದ್ ಸುಜೀಂದ್ರ ತೀರ್ಥ ಶ್ರೀಪಾದರು ಇದರ ನಿರ್ಮಾಣಕ್ಕೆ ಕಾರಣಕರ್ತರು. ಇದು ಮಹಾನಗರದಲ್ಲಿ ಮುಂದಿನ ದಿನಗಳಲ್ಲಿ ಅತೀ ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ಮೂಡಿ ಬರಲಿದೆ. ಶ್ರೀನಿವಾಸನ ಸನ್ನಿಧಾನ, ಮುಖ್ಯಪ್ರಾಣ ಸನ್ನಿಧಾನ, ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರತಿಷ್ಠಾಪನೆ, ನವಗ್ರಹಗಳು, ಗ್ರಾಮ ದೇವತೆ ಮಂಚಾಲಮ್ಮನ ಗುಡಿ ಇತ್ಯಾದಿಗಳೊಂದಿಗೆ ಅನ್ನ ಛತ್ರ, ಯೋಗಕೇಂದ್ರ, ಕಲ್ಯಾಣ ಮಂಟಪ, ಗುರು ಕುಲದೊಂದಿಗೆ ಟೆಂಪಲ್ ಕಾಂಪ್ಲೆಕ್ಸ್ ಆಗಿ ಹೊರ ಹೊಮ್ಮಲಿದೆ. ನಿಮ್ಮೆಲ್ಲರ ಸೇವೆ ಸಹಕಾರದಿಂದ ಈ ನೂತನ ಮಂದಿರ ಅತೀ ಶೀಘ್ರದಲ್ಲಿ ಭಕ್ತರಿಗೆ ದೊರೆಯಲಿ. ಮುಂದೆ ಈ ಸ್ಥಳಕ್ಕೆ ಆಗಾಗ ಕಟ್ಟಡದ ಪ್ರಗತಿಯ ಬಗ್ಗೆ ಕಣ್ಣಾರೆ ಕಾಣಲು ಆಗಮಿಸುತ್ತೇನೆ, ಅಲ್ಲದೆ ಚಾತುರ್ಮಾಸ್ಯ ವ್ರತವನ್ನು ಇಲ್ಲಿ ಪ್ರಾರಂಭಿಸಿ ಭಕ್ತರಿಗೆ ಆಶೀರ್ವಚನ ನೀಡುತ್ತೇನೆ ಎಂದರು.
ಮಠದ ಎಲ್ಲ ಅರ್ಚಕರು, ಮಂತ್ರಾಲಯದಿಂದ ಬಂದ ಆಡಳಿತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅನಂತರ ನೆರೆದ ಭಕ್ತರೆಲ್ಲರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು.
ಸಂಸ್ಥಾನದ ಮುಖ್ಯಸ್ಥ ಡಿ. ವಿ. ಪೂರ್ಣ ಪ್ರಜ್ಞ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕೆಲವು ಸಮಸ್ಯೆಗಳು ಎದುರಾದ ಕಾರಣ ಮಂದಿರ ನಿರ್ಮಾಣ ತಡವಾಯಿತು. ಆದರೂ ಎಲ್ಲ ಕೆಲಸಗಳಲ್ಲೂ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ದೊರೆಯು ತ್ತಿತ್ತು. ಶ್ರೀಮದ್ ಸುಜೀಂದ್ರ ತೀರ್ಥ ಸ್ವಾಮೀಜಿಗಳ ಹಸ್ತದಿಂದ ಸ್ಥಾಪಿತ ಗೊಂಡ ಈ ಮಂತ್ರಾಲಯ ಅತಿ ಶೀಘ್ರದಲ್ಲಿ ನೂತನ ಅಭಿನವ ಮಂತ್ರಾಲಯವಾಗಿ ರಾರಾಜಿಸ ಲಿದೆ ಎಂದು ಹೇಳಿ ಕಟ್ಟಡದ ಕಾಗದ ಪತ್ರಗಳನ್ನು ಶ್ರೀಪಾದರಿಗೆ ಅರ್ಪಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್