ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿರುವ ನವಿಲುಧಾಮದಲ್ಲಿ ನವಿಲುಗಳ ಸಂಖ್ಯೆ ಕ್ಷೀಣಿಸುತ್ತಿದೆ. ನವಿಲುಧಾಮ ಪುನರುಜ್ಜೀವನಗೊಳ್ಳದಿದ್ದರೆ, ನವಿಲುಗಳು ಶಾಶ್ವತವಾಗಿ ನಶಿಸಿಹೋಗಿಬಿಡುತ್ತವೆ ಎಂದು ಮುಂಬೈನಲ್ಲಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ಇತ್ತೀಚೆಗೆ ವರದಿ ಮಾಡಿತ್ತು. ಆದರೆ, ಅಲ್ಲಿನ ಚಿತ್ರಣ ಬೇರೆಯೇ ಇದೆ. ಮೊದಲಿಗಿಂತ, ಈಗ ನವಿಲುಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಲಭ್ಯವಿರುವ ಅಂಕಿ–ಅಂಶಗಳೂ ಇದನ್ನು ಪುಷ್ಟೀಕರಿಸುತ್ತವೆ.
‘ಕೇಂದ್ರಸರ್ಕಾರ 2001ರಲ್ಲಿ ಬಂಕಾಪುರ ಸಂರಕ್ಷಿತ ಪ್ರದೇಶವನ್ನು ನವಿಲು ಧಾಮ ಎಂದು ಘೋಷಿಸಿದಾಗಿನಿಂದ ಈವರೆಗೆ ನವಿಲುಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆಯೇ ಹೊರತು ಎಂದೂ ಕ್ಷೀಣಿಸಿಲ್ಲ. 2009ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ವಿನೋದ ಭಟ್ ಇಲ್ಲಿ ನಡೆಸಿದ ಗಣತಿಯಲ್ಲಿ 400 ನವಿಲುಗಳಿದ್ದವು. ಅವರು ಅಂತಿಮ ವರದಿಯನ್ನೇನೂ ನೀಡಿಲ್ಲ. ಈಗ 500 ರಿಂದ 600 ನವಿಲುಗಳು ಇವೆ’ ಎನ್ನುತ್ತಾರೆ ಬಂಕಾಪುರದ ಖಿಲ್ಲಾರಿ ತಳಿ ಗೋವು ಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ. ಟಿ. ಪರಮೇಶ್ವರ ನಾಯಕ. ‘ಸಾಮಾನ್ಯವಾಗಿ 1:20ರ ಅನುಪಾತದಲ್ಲಿ ಗಂಡು ಮತ್ತು ಹೆಣ್ಣು ನವಿಲುಗಳು ಇರುತ್ತವೆ. ಇಲ್ಲಿ ಸುಮಾರು 89 ಗಂಡು ನವಿಲುಗಳಿವೆ. ಸಾಮಾನ್ಯ ಅನುಪಾತದ ಪ್ರಕಾರ ಲೆಕ್ಕ ಹಾಕಿದರೂ, ಅವುಗಳ ಸಂಖ್ಯೆ ಸಾವಿರ ಮೀರುತ್ತದೆ’ ಎನ್ನುತ್ತಾರೆ.
‘ರಾಷ್ಟ್ರೀಯ ಪಕ್ಷಿ ಎಂಬ ಗೌರವ ಇರುವುದರಿಂದಲೂ ನವಿಲುಗಳಿಗೆ ಹಾನಿ ಉಂಟು ಮಾಡಲು ಯಾರೂ ಬಯಸುವುದಿಲ್ಲ. ಅಲ್ಲದೆ, ಕಾಡಿನ ಕ್ರೂರ ಮೃಗಗಳಿಗಿಂತ, ಮನುಷ್ಯನೇ ವಾಸಿ ಎಂಬ ಭಾವನೆಯಲ್ಲಿ ಅವುಗಳು ಹೊಲಗಳ ಕಡೆಗೆ ಬರುತ್ತಿವೆ. ಮನುಷ್ಯನಿಂದ ಯಾವುದೇ ತೊಂದರೆ ಇಲ್ಲ ಎಂದು ಖಚಿತವಾದ ಮೇಲೆ ಆ ಪ್ರದೇಶದಲ್ಲಿಯೇ ವಂಶಾಭಿವೃದ್ಧಿ ಪ್ರಾರಂಭಿಸುತ್ತವೆ. ಇಲ್ಲಿ ಅವುಗಳ ವಾಸಕ್ಕೆ, ವಂಶಾಭಿವೃದ್ಧಿಗೆ ಪೂರಕವಾದ ವಾತಾವರಣವಿದೆ’ ಎಂದು ಪರಮೇಶ್ವರ ನಾಯಕ ಹೇಳಿದರು.
‘ಹುಳ, ಹುಪ್ಪಡಿ ತಿಂದು ಬದುಕುವ ನವಿಲುಗಳಿಂದ ಬೆಳೆಗೂ ತೊಂದರೆಗಳೂ ಹೆಚ್ಚಿಲ್ಲ. ಹೀಗಾಗಿ ಸುತ್ತ–ಮುತ್ತಲ ರೈತರು ಅವುಗಳಿಗೆ ತೊಂದರೆ ಮಾಡುವುದಿಲ್ಲ’ ಎಂದು ಹೇಳಿದರು.
‘139 ಎಕರೆ ಪ್ರದೇಶದಲ್ಲಿ ನವಿಲುಧಾಮ ಹರಡಿಕೊಂಡಿದೆ. ಈ ಪ್ರದೇಶವನ್ನು ನವಿಲುಧಾಮ ಎಂದು ಘೋಷಿಸಿದಾಗಿನಿಂದ ನಾನು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಯಾರೂ ಈವರೆಗೆ ಸರಿಯಾಗಿ ನವಿಲುಗಳ ಗಣತಿ ಮಾಡಿಲ್ಲ. ವಂಶಾಭಿವೃದ್ಧಿ ಮುಂದುವರಿಸುತ್ತಾ ಅವು ಬೇರೆ ಕಡೆಗೆ ವಲಸೆ ಹೋಗುವುದರಿಂದ ನಿಖರವಾಗಿ ಸಂಖ್ಯೆ ಹೇಳಲೂ ಸಾಧ್ಯವಿಲ್ಲ. ಆದರೆ, ಮೊದಲಿಗಿಂತ ಅವುಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿರುವುದು ಸತ್ಯ’ ಎಂದು ಹೇಳುತ್ತಾರೆ ಪರಮೇಶ್ವರ ನಾಯಕ.
‘ಕಾರ್ಯಕ್ರಮ ನಿಲ್ಲಲಿ’
ನವಿಲುಧಾಮ ಪ್ರವೇಶಿಸುತ್ತಿದ್ದಂತೆಯೇ ಯಲ್ಲಮ್ಮನ ದೇವಸ್ಥಾನ ಸಿಗುತ್ತದೆ. ವರ್ಷಕ್ಕೆ ಎರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆ. ಅಲ್ಲದೆ, ಮದುವೆ ಸಮಾರಂಭಗಳು ನಡೆಯುತ್ತಿರುತ್ತವೆ. ಅದರೊಂದಿಗೆ, ಬಕ್ರೀದ್, ರಂಜಾನ್ ವೇಳೆ ಈ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಸಹ ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಿದ್ದಾರೆ. ಈ ವೇಳೆ ವಾಹನ ಸಂಚಾರ, ಜನರ ಗದ್ದಲ, ಸಿನಿಮಾ ಹಾಡುಗಳ ಭರಾಟೆ ಜೋರಾಗಿರುತ್ತದೆ. ಇದರಿಂದ ನವಿಲುಗಳು ಗಾಬರಿಗೊಳ್ಳುತ್ತವೆ. ಈ ಪ್ರದೇಶದಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಉತ್ತಮ ಎಂಬುದು ಪಕ್ಷಿಪ್ರಿಯರ ಮನವಿ.