ಕರ್ನಾಟಕ

ಮೂರು ದಿನಗಳ ಹಂಪಿ ಉತ್ಸವ: ಇಂದಿನಿಂದ ಐತಿಹಾಸಿಕ ತಾಣದಲ್ಲಿ ಕಲೆಯ ಅನಾವರಣ

Pinterest LinkedIn Tumblr

hampi

ಹಂಪಿ (ಬಳ್ಳಾರಿ ಜಿಲ್ಲೆ): ತುಂಗಭದ್ರೆಯ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ಶುಕ್ರವಾರದಿಂದ (ಇದೇ 9ರಿಂದ) ಆರಂಭವಾಗಲಿರುವ ಸಾಂಸ್ಕೃತಿಕ ಉತ್ಸವದ ರಂಗು, ಸತತ ಮೂರು ದಿನಗಳ ಕಾಲ ಕಲಾ­ಪ್ರೇಮಿ­ಗಳಿಗೆ ಕಲೆಯ ಗುಂಗು ಹಿಡಿಸಲಿದೆ.

ಶತಮಾನಗಳ ಹಿಂದೆ ಮುತ್ತು, ರತ್ನಗಳನ್ನು ಬೀದಿಯಲ್ಲಿ ಮಾರಾಟ ಮಾಡಿದ್ದ ವಿಜಯನಗರ ಸಾಮ್ರಾಜ್ಯದ ವೈಭವಕ್ಕೆ ಇಲ್ಲಿನ ಸ್ಮಾರಕಗಳು ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಇತಿಹಾಸಪ್ರೇಮಿ ಪ್ರವಾಸಿ­ಗರ ಕಣ್ಮನ ತಣಿಸಲು ಕಾತರಿಸುತ್ತಿವೆ.

ಅರಸರ ಕಾಲದಲ್ಲಿ ಆಚರಣೆಯಲ್ಲಿದ್ದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆ  ಮತ್ತೊಮ್ಮೆ ವಿಜೃಂಭಿಸಲಿದ್ದು, ಗತವೈಭವ ಮರುಕಳಿಸಲಿದೆ. ಹಂಪಿಯತ್ತ ದೌಡಾಯಿಸು­ತ್ತಿರುವ ಸ್ಥಳೀಯ ಹಾಗೂ ದೇಶ– ವಿದೇಶಗಳ ಹಲವಾರು ಕಲಾವಿದರ ಪ್ರತಿಭೆ ಅನಾವರಣ­ಗೊಳ್ಳಲಿದೆ.

ಶಾಸ್ತ್ರೀಯ ಸಂಗೀತ, ನೃತ್ಯ, ನಾಟಕ, ಜಾನಪದ ವಾದ್ಯಮೇಳ, ಭಾವಗೀತೆ, ಸುಗಮ ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಆಸಕ್ತರ ಮನತಣಿಸಲಿದ್ದು, ಹಂಪಿಯ ಪ್ರಮುಖ ಸ್ಮಾರಕಗಳು ರಂಗುರಂಗಿನ  ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿವೆ.

ಐದು ವೇದಿಕೆಗಳು, ಖ್ಯಾತ ಕಲಾವಿದರು: ಉತ್ಸವಕ್ಕಾಗಿ ಈ ಬಾರಿ ಶ್ರೀ ಕೃಷ್ಣದೇವರಾಯ, ಎಂ.ಪಿ. ಪ್ರಕಾಶ್‌, ದರೋಜಿ ಈರಮ್ಮ, ವಿದ್ಯಾರಣ್ಯ ಹಾಗೂ ಹಕ್ಕ–ಬುಕ್ಕರ ಹೆಸರಿನಲ್ಲಿ ಅತ್ಯಾಕರ್ಷಕವಾದ ಐದು ವೇದಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಹಲವಾರು ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ.

ಬಾಲಿವುಡ್‌ನ ಹಿನ್ನೆಲೆ ಗಾಯಕರಾದ ಹಿಮೇಶ ರೇಶಮಿಯಾ, ಮಿಕಾ ಸಿಂಗ್‌, ಜಾವೇದ್‌ ಅಲಿ, ಶಾಲ್ಮಲಿ ಕೋಲ್ಗಡೆ, ರಿಚಾ, ಕನ್ನಡ ಚಿತ್ರಸಂಗೀತ ನಿರ್ದೇಶಕರಾದ ಗುರುಕಿರಣ್‌, ವಿ.ಹರಿಕೃಷ್ಣ, ಅರ್ಜುನ್‌ ಜನ್ಯ ಅವರಿಂದ ರಸಮಂಜರಿ ನಡೆಯಲಿವೆ.

ಅನುರಾಧಾ ಪೌಡ್ವಾಲ್‌ ಭಕ್ತಿಸಂಗೀತ, ಬಾಪು ಪದ್ಮನಾಭ ಅವರ ಕೊಳಲು ವಾದನ, ಕೈವಲ್ಯಕುಮಾರ್‌ ಗುರವ್ ಹಿಂದೂಸ್ತಾನಿ ಸಂಗೀತ, ರಾಧಾಶ್ರೀಧರ್‌ ತಂಡದ ನೃತ್ಯರೂಪಕ, ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್‌ ಅವರಿಂದ ಗಾಯನ, ಪಂ.ಬಸವರಾಜ ಹೆಡಿಗ್ಗೊಂಡ ಅವರ ಶಹನಾಯ್‌ ವಾದನ, ಲಕ್ಷ್ಮಿ ಗೋಪಾಲಸ್ವಾಮಿ ಅವರ ಭರತನಾಟ್ಯದ ಸೊಬಗು ಕಲಾ ಆರಾಧಕರ ಮನಸ್ಸನ್ನು ಅರಳಿಸಲಿದೆ.

ಮಧ್ಯಪ್ರದೇಶದ ಬದಾಯಿ ನೃತ್ಯ, ಮಹಾರಾಷ್ಟ್ರದ ಸೋಂಗಿ ಮುಖವಾಟೆ, ಮಣಿಪುರದ ರಾಸಲೀಲಾ, ಪುದುಚೇರಿ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳ ಕಲಾವಿದರು ಹಾಗೂ ಬಳ್ಳಾರಿಯ ರೇಣುಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಲೈಂಗಿಕ ಅಲ್ಪಸಂಖ್ಯಾತರಿಂದ ಜಾನಪದ ನೃತ್ಯ ಪ್ರದರ್ಶನವಿದೆ.

ಈ ಬಾರಿಯ ಉತ್ಸವಕ್ಕೆ ವಿದೇಶಗಳ ಕಲಾವಿದರನ್ನೂ ಆಹ್ವಾನಿಸಲಾಗಿದ್ದು,  ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್‌ ವತಿಯಿಂದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಜಾನಪದ ನೃತ್ಯ, ಆಫ್ರಿಕನ್‌ ತಂಡದಿಂದ ಕಾಂಗೊ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶಿಷ್ಟ ಕಾರ್ಯಕ್ರಮಗಳು: ಜ. 9ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವ ಉದ್ಘಾಟಿಸ­ಲಿದ್ದು, 11ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪಾಲ್ಗೊಳ್ಳುವರು.

ಈ ಬಾರಿಯೂ ‘ಹಂಪಿ ಬೈ ಸ್ಕೈ’ ಕಾರ್ಯಕ್ರಮ ಮುಂದುವರಿಸಲಾಗಿದ್ದು, ಎರಡು ಹೆಲಿಕಾಪ್ಟರ್‌ಗಳು ಬಾನಂಗಳದಲ್ಲಿ ವಿಹರಿಸುವ ಮೂಲಕ ತುಂಗಭದ್ರಾ ಜಲಾಶಯ ಹಾಗೂ ಹಂಪಿಯ ಪುರಾತನ ಸ್ಮಾರಕಗಳನ್ನು ಆಗಸದಿಂದ ವೀಕ್ಷಿಸಲು ಅನುವು ಮಾಡಿಕೊಡಲಿವೆ.

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಲ್ಲಕಂಬ, ಕುಸ್ತಿ, ಕಬಡ್ಡಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನ, ಗಾಳಿಪಟ ಉತ್ಸವ, ಮಹಿಳೆಯರು, ಮಕ್ಕಳು ಹಾಗೂ ಅಂಗ­ವಿಕಲರಿಗೂ ವಿಶೇಷ ಸ್ಪರ್ಧೆಗಳು ನಡೆಯಲಿವೆ.
ಹಂಪಿ ಪರಿಸರದಲ್ಲಿ ಕಲೆಯ ಉಗ್ರಾಣದಂತೆ ಕಂಗೊಳಿಸುತ್ತ, ವರ್ಷವಿಡೀ ಬರುವ ಪ್ರವಾಸಿಗರ ಹೃನ್ಮನಗಳಿಗೆ ಮುದ ನೀಡುವ ಶಿಲೆಯು ಉತ್ಸವದ ನೆಪದಲ್ಲಿ ಇದೀಗ ಕೈಬೀಸಿ ಕರೆಯುತ್ತಿದೆ.

Write A Comment