https://youtu.be/LxeVoeqgl7Y
ನೆಲ್ಲೂರು(ಆಂಧ್ರ ಪ್ರದೇಶ): ವಿಜಯವಾಡದ ಮದ್ದೂರು ಪಾಡುವಿನಲ್ಲಿರುವ ಡಿವಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕಿಯಾಗಿದ್ದ ವೀರ ಮಾಧವಿ ಮಂಗಳವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೂ ಮುನ್ನ ತಮ್ಮ ವಿಡಿಯೋ ರೆಕಾರ್ಡ್ ಮಾಡಿ ಅದರಲ್ಲಿ ತಮ್ಮ ಆತ್ಮಹತ್ಯೆಗೆ ಕಾರಣಗಳನ್ನು ಹೇಳುತ್ತಿರುವುದು ಭಾರೀ ಸಂವೇದನೆ ಸೃಷ್ಟಿಸುತ್ತದೆ.
ಉಪನ್ಯಾಸಕಿ ಆತ್ಮಹತ್ಯೆ ಮಾಡುವ ಮುನ್ನ ತನ್ನ ಮನೆಯ ಕೋಣೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ತಾನು ಪ್ರೀತಿಸಿದ ಹುಡುಗ ಕೊನೆಗೆ ತಿರಸ್ಕರಿಸಿದ್ದಕ್ಕಾಗಿ ನೊಂದು ಆತ್ಮಹತ್ಯೆಮಾಡಿಕೊಂಡಿದ್ದಾಳೆ.
ಸಾಯುವ ಮುನ್ನ ತನ್ನ ವಿಡಿಯೋ ರೆಕಾರ್ಡ್ ಮಾಡಿದ್ದು, ಅದೀಗ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ನೋಡುಗರಲ್ಲಿ ಭಾರೀ ಸಂವೇದನೆ ಸೃಷ್ಟಿಸಿದೆ. ಅದರಲ್ಲಿ ” ನಾನು ಈ ಜಗತ್ತನ್ನು ಬಿಟ್ಟುಹೋಗಲು ಇಚ್ಛಿಸಿದ್ದೇನೆ. ನಿನ್ನ ನೆನಪಿನಿಂದ ದೂರಾಗುತ್ತಿದ್ದೇನೆ. ನಾನು ನಿನ್ನ ಜೊತೆ ಕಳೆದ ಕ್ಷಣಗಳು ತುಂಬಾ ಸುಂದರವಾಗಿದ್ದವು. ನಿನ್ನನ್ನು ಬಿಟ್ಟು ನನಗೆ ಬದುಕಲು ಸಾಧ್ಯವಿಲ್ಲ” ಎಂದು ದುಃಖದಿಂದ ಹೇಳಿದ್ದಾಳೆ.
ಉಪನ್ಯಾಸಕಿ ಮಾಧವಿ ಮತ್ತು ನೆಲ್ಲೂರಿನ ಭಾನು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಭಾನು ಚಿನ್ನದ ಅಂಗಡಿ ನಡೆಸುತ್ತಿದ್ದ. ಇತ್ತೀಚೆಗೆ ಭಾನು ಮಾಧವಿಯನ್ನು ಮದುವೆಯಾಗಲು ನಿರಾಕರಿಸಿದ್ದನು. ಇದರಿಂದ ಮಾಧವಿ ಮಾನಸಿಕವಾಗಿ ತುಂಬಾ ನೊಂದು ಖಿನ್ನಳಾಗಿದ್ದಳು. ಮಾಧವಿಯ ಸಹೋದರಿ ಜಾನಕಿ ಹೇಳುವ ಪ್ರಕಾರ, ಇತ್ತೀಚೆಗೆ ಮಾಧವಿ ತುಂಬಾ ಖಿನ್ನಳಾದಂತೆ ಕಂಡುಬರುತ್ತಿದ್ದಳು. ನಮ್ಮ ತಂದೆ ಜನವರಿ 31ರಂದು ತೀರಿಕೊಂಡರು. ಅದರ ಆಘಾತದಿಂದ ಅವಳಿಗೆ ಹೊರಬರಲಾಗದೆ ಅವಳು ಈ ರೀತಿ ವರ್ತಿಸುತ್ತಿದ್ದಾಳೆ ಎಂದು ಭಾವಿಸಿದ್ದೆನೇ ಹೊರತು ಅವಳ ಜೀವನದಲ್ಲಿ ಹುಡುಗನೊಬ್ಬ ಬಂದು ಹೋಗಿದ್ದಾನೆ ಎಂದು ಕಲ್ಪನೆಯೇ ಇರಲಿಲ್ಲ” ಎನ್ನುತ್ತಾಳೆ.
ಮಾಧವಿಯ ಮೊಬೈಲ್ ನಲ್ಲಿ ಇದ್ದ ಸಂದೇಶಗಳು ಮತ್ತು ವಿಡಿಯೋ ಕ್ಲಿಪಿಂಗ್, ಏಕೆ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿಸುತ್ತದೆ. ಯುವಕ ಭಾನು ಮಾಧವಿಯನ್ನು ಪ್ರೀತಿಸುವ ನಾಟಕವಾಡಿ ಅವಳಿಂದ ಸುಮಾರು 5 ಲಕ್ಷ ರೂಪಾಯಿ ಹಣ ಕಿತ್ತುಕೊಂಡು ಕೊನೆಗೆ ತನ್ನ ಪೋಷಕರು ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಕಾರಣ ನೀಡಿ ಬಿಟ್ಟುಬಿಟ್ಟ ಎಂದು ಜಾನಕಿ ವಿವರಿಸಿದಳು. ಮಾಧವಿಯ ಪೋಷಕರು ನೀಡಿದ ದೂರಿನ ಮೇರೆಗೆ ಕವಾಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.