Uncategorized

ಎಪ್ರಿಲ್.2 : “ಬಾಂಧವ್ಯ” ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ / ಸಾಧಕರಿಗೆ ಸನ್ಮಾನ, ವಿಶ್ವ ಬಂಟರ ಮಾಹಿತಿ ಕೋಶ ಮಾಹಿತಿ ಸಂಗ್ರಹಣೆಗೆ ಚಾಲನೆ.

Pinterest LinkedIn Tumblr

Bunts_Bandavya_Press_1

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ ೨ರಂದು ಗುರುವಾರ ಸಂಜೆ 3.00 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ ಜರಗಲಿದೆ. ‘ಬಾಂಧವ್ಯ’ ಹೆಸರಿನಲ್ಲಿ ಜರಗುವ ಬಹಿರಂಗ ಅಧಿವೇಶನದಲ್ಲಿ, ‘ವಿಶ್ವ ಬಂಟರ ಮಾಹಿತಿ ಕೋಶ’ ಮಾಹಿತಿ ಸಂಗ್ರಹಣೆಗೆ ಚಾಲನೆ, ಸಾಧಕರಿಗೆ ಸನ್ಮಾನ, ವಿಕಲ ಚೇತನರಿಗೆ ಸಹಾಯ ಹಸ್ತ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈಯವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಹಿರಂಗ ಅಧಿವೇಶನ ಮತ್ತು ‘ವಿಶ್ವ ಬಂಟರ ಮಾಹಿತಿ ಕೋಶ’ ಮಾಹಿತಿ ಸಂಗ್ರಹ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಓಂಪ್ರಕಾಶ್, ಐಪಿ‌ಎಸ್, ಡೈರೆಕ್ಟರ್ ಜನರಲ್ ಆಂಡ್ ಇನ್ಸ್‌ಪೆಕ್ಟರ್ ಅಫ್ ಪೊಲೀಸ್, ಕರ್ನಾಟಕ ಇವರು ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀ ಎ.ಜೆ. ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ, ಬೆಂಗಳೂರು ಎಂ.ಆರ್.ಜಿ ಗ್ರೂಫ್ ಅಫ್ ಹೋಟೇಲ್ಸ್‌ನ ಎಂ.ಡಿ ಶ್ರೀ ಪ್ರಕಾಶ್ ಶೆಟ್ಟಿ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ|| ಎಂ. ಮೋಹನ್ ಆಳ್ವ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ. ನರೇಶ್ ಶೆಟ್ಟಿ, ಮುಂಬಯಿ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಶ್ರೀ ಶ್ಯಾಮ ಎನ್. ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸೋಮವಾರ ನಗರದಲ್ಲಿ  ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

Bunts_Bandavya_Press_2 Bunts_Bandavya_Press_3

ಬಂಟ ಜನಾಂಗವು ತನ್ನದೇ ಆದ ವಿಶಿಷ್ಟ ಪರಂಪರೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ನಡೆ-ನುಡಿ ಯೊಂದಿಗೆ ಎಲ್ಲಾ ಜಾತಿ-ಮತ-ಬಾಂಧವರೊಂದಿಗೆ ಸಾಮರಸ್ಯದ ಸಹಜೀವನವನ್ನು ನಡೆಸಿ ತಮ್ಮ ಅನುಕರಣೀಯ ನಡತೆಯಿಂದ ಎಲ್ಲರ ಪ್ರೀತ್ಯಾದರ, ವಿಶ್ವಾಸಗಳಿಗೆ ಪಾತ್ರರಾಗಿರುವವರು. ಈ ಹಿಂದೆ ಹೆಚ್ಚಿನ ಸಮಾಜ ಬಾಂಧವರು ಅವಿಭಕ್ತ ಕುಟುಂಬದ ಮನೆಗಳಲ್ಲಿ ವಾಸಿಸುತ್ತಿದ್ದು ಅಲ್ಲಿ ಅವರಿಗೆ ಭದ್ರತೆ ಇತ್ತು. ಕಷ್ಟ ಸುಖಗಳನ್ನು ಹಂಚಿಕೊಳ್ಳುವ, ತ್ಯಾಗ, ಪ್ರೀತಿ, ವಿಶ್ವಾಸ, ಗೌರವ ಇತ್ಯಾದಿ ಉತ್ತಮ ವಿಷಯಗಳು ಅವಿಭಕ್ತ ಕುಟುಂಬದ ಬುನಾದಿಯಾಗಿತ್ತು. ಪರಿವರ್ತಿತ ಕಾಲಘಟ್ಟದಲ್ಲಿ ಹಾಗೂ ಅನಿವಾರ್ಯ ಕಾರಣಗಳಿಂದ ಬಂಟ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿ ಅವಿಭಕ್ತ ಕುಟುಂಬ ವ್ಯವಸ್ಥೆ ಹೆಚ್ಚಿನ ಮಟ್ಟಿಗೆ ನಶಿಸಿ ಹೋದಂತಾಯಿತು. ನಮ್ಮ ಸಮಾಜ ಬಾಂಧವರು, ಬಂಧುಗಳು ಹಾಗೂ ಊರಿನವರು ಜಗತ್ತಿನಾದ್ಯಂತ ಚದುರಿ, ಪಸರಿಸಿ ಹೋಗಿದ್ದಾರೆ. ಜೀವನ ನಡೆಸುವ ರೀತಿಯಲ್ಲಿ ಅಮೂಲಾಗ್ರವಾದ ಬದಲಾವಣೆಯಾದ ಕಾರಣ ನಾವು ನಮ್ಮವರಿಂದ ದೂರವಾಗಿ ಅಣ್ಣ ತಮ್ಮಂದಿರ, ಅಕ್ಕ ತಂಗಿಯಂದಿರ ಮಕ್ಕಳೊಂದಿಗೆ, ಕುಟುಂಬದ ಸದಸ್ಯರೊಂದಿಗೆ ಪರಸ್ಪರ ಪರಿಚಯ, ಪ್ರೀತಿ, ವಿಶ್ವಾಸ, ಬಾಂಧವ್ಯಗಳು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಶಿಸಿ ಹೋಗುತ್ತಿದ್ದ ನೂರಾರು ದೇವಸ್ಥಾನ, ದೈವಸ್ಥಾನ, ನಾಗಬನ, ಬ್ರಹ್ಮಸ್ಥಾನ, ಗರಡಿಗಳು, ಶಾಲೆಗಳು, ಕೆರೆಗಳು, ಆಲಯಗಳು, ಇವೆಲ್ಲವುಗಳ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರ್ ನಿರ್ಮಾಣ, ಪುನರುತ್ಥಾನ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸಮಾಜ ನಮ್ಮದು. ಇಂದು ನಶಿಸಿ ಹೋಗುತ್ತಿರುವ ನಮ್ಮ ಸಮಾಜ ಬಾಂಧವರೊಳಗಿನ ಬಾಂಧವ್ಯವನ್ನು ಪುನರುತ್ಥಾನ ಮಾಡುವ ಮಹೋನ್ನತ ಕಾರ್ಯವನ್ನು ಮಾಡುವ ನಿಟ್ಟಿನಲ್ಲಿ ‘ಬಾಂಧವ್ಯ’ ಎಂಬ ನಾಮಾಂಕಿತದೊಂದಿಗೆ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಜೌದ್ಯೋಗಿಕ, ವೈವಾಹಿಕ, ಆರೋಗ್ಯ, ಕೃಷಿ, ವಸತಿ, ಸಾಂಸ್ಕೃತಿಕ ಹಾಗೂ ಒಟ್ಟು ಜೀವನದ ವ್ಯವಸ್ಥೆ, ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ದೂರಗಾಮಿ ಪರಿಣಾಮವನ್ನು ಬೀರುವ ವಿಶ್ವ ಬಂಟರ ಮಾಹಿತಿ ಕೋಶವನ್ನು ತಯಾರು ಮಾಡಲು ಮುಂದಡಿ ಇಟ್ಟಿದ್ದೇವೆ. ಮುಖ್ಯವಾಗಿ ವಿದ್ಯಾಭ್ಯಾಸ, ಉದ್ಯೋಗ, ವಧೂ-ವರರ ಅನ್ವೇಷಣೆ, ವೈದ್ಯಕೀಯ ಚಿಕಿತ್ಸೆ, ರಕ್ತದಾನ, ಅಂಗದಾನ, ಹಾಗೂ ಯಾವುದೇ ಸಮಸ್ಯೆ, ಸಂಕಷ್ಟದ ಸಮಯದಲ್ಲಿ ಸಹಾಯ ಅಥವಾ ಸಹಕಾರ ಪಡೆಯಲು, ವ್ಯಾಪಾರ ವ್ಯವಹಾರ, ಮಾರ್ಗದರ್ಶನ ಮಾಹಿತಿ ಪಡೆಯಲು ಈ ಮಾಹಿತಿ ಕೋಶವು ಖಂಡಿತವಾಗಿಯೂ ಉಪಯುಕ್ತವಾಗುತ್ತದೆ. ಸಹಾಯ ಸಹಕಾರದ ಅಗತ್ಯವಿರುವವರನ್ನು ಹಾಗೂ ಸಹಾಯ, ಸಹಕಾರ ನೀಡಲು ಶಕ್ತರಾಗಿರುವವರನ್ನು ಗುರುತಿಸುವ ಮೂಲಕ ಸಂಪರ್ಕ ಕೊಂಡಿಯಾಗಿ ಸುಖೀ ಸಮಾಜವನ್ನು ನಿರ್ಮಾಣ ಮಾಡುವ ಸದುದ್ದೇಶದೊಂದಿಗೆ ಕಾರ್ಯಪೃವತ್ತರಾಗಿದ್ದೇವೆ. ಒಂದು ಭವ್ಯ ಬಂಟ ಸಮಾಜಭವನದ ನಿರ್ಮಾಣ ಕಾರ್ಯವನ್ನು ಜೂನ್ ತಿಂಗಳ ನಂತರ ಪ್ರಾರಂಭಿಸಲಾಗುವುದು. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ಸೂರಿನಡಿ ಸೇರಿಸಿ ಜಾಗತಿಕ ಬಂಟರ ಸಮ್ಮೇಳನವನ್ನು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುವುದು ಎಂದರು.

Bunts_Bandavya_Press_4 Bunts_Bandavya_Press_5

ದೂರದೃಷ್ಟಿತ್ವವನ್ನು ಹೊಂದಿದ್ದ ಹಾಗೂ ತ್ಯಾಗಜೀವಿಗಳಾದ ನಮ್ಮ ಸಮಾಜದ ಹಿರಿಯರು ಬಂಟರ ಯಾನೆ ನಾಡವರ ಮಾತೃ ಸಂಘವನ್ನು ಸ್ಥಾಪಿಸಿ ಕಾಸರಗೋಡು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ತಾಲೂಕುಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳನ್ನು ನಿರ್ಮಾಣ ಮಾಡಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲಾ ಜಾತಿ ಮತ ಬಾಂಧವರು ಜೊತೆಯಾಗಿ ಬಾಳಲು ಅವಕಾಶ ಮಾಡಿಕೊಟ್ಟು, ಒಂದು ವಿದ್ಯಾವಂತ ಸುಸಂಸ್ಕೃತ ಸಮಾಜವನ್ನು ನಿರ್ಮಾಣ ಮಾಡಲು ಕಾರಣೀಭೂತರಾಗಿದ್ದರು. ಎಲ್ಲಾ ಜಾತಿ ಮತ ಬಾಂಧವರು ಅಭಿವೃದ್ಧಿಯ ಪಥದಲ್ಲಿ ಸಾಗಬೇಕು, ಸುಖ ಶಾಂತಿ ನೆಮ್ಮದಿಯಿಂದ ಬಾಳಬೇಕು ಎಂಬುವುದು ಸಂಘದ ಮೂಲೋದ್ದೇಶ. ಅನುಕರಣೀಯ ಕೆಲಸ ಮಾಡಿದ ಹಿರಿಯರು ತೋರಿಸಿದ ದಾರಿದೀಪದ ಬೆಳಕಿನಲ್ಲಿ ನಡೆದುಕೊಂಡು ಹೋಗಿ ಒಂದು ಸಮೃದ್ಧ ಸುಖೀ ಸಮಾಜವನ್ನು ನಿರ್ಮಾಣ ಮಾಡಿ, ಎಲ್ಲರನ್ನೂ ಸೇರಿಸಿಕೊಂಡು ಸಮಾಜಮುಖಿ ಕೆಲಸಗಳಿಂದ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಿ ದೇಶದ ಸರ್ವತೋಮುಖವಾದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುವ ಸಲುವಾಗಿ ವಿಶ್ವವ್ಯಾಪಿಯಾಗಿ ನೆಲೆಸಿರುವ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ -ಬಾಂಧವ್ಯ-. ಎಂದು ಅವರು ತಿಳಿಸಿದರು.

ಸಮಾಜ ಭವನ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ

ಜೂನ್ ತಿಂಗಳ ನಂತರ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಮಾತ್ರ ಸಂಘದ ಈ ಸಭಾಂಗಣವಿರುವ ಸ್ಥಳದಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ವಿನೂತನ ಶೈಲಿಯ ಸಮಾಜ ಭವನ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಎಲ್ಲಾ ರೀತಿಯ ರೂಪುರೇಶೆಗಳನ್ನು ಸಿದ್ದಪಡಿಸಲಾಗಿದೆ. ಮೂರು ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಜಿತ್ ಕುಮಾರ್ ರೈ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ವರ್ಷ ಡಿಸೆಂಬರ್ ತಿಂಗಳಲ್ಲಿ ಜಾಗತಿಕ ಬಂಟ ಸಮ್ಮೇಳನ ನಡೆಸುವ ಯೋಜನೆ ಇದೆ – ಮಾಲಾಡಿ ಅಜಿತ್ ಕುಮಾರ್ ರೈ

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಸಿ‌ಎ. ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ ಉಪಸ್ಥಿತರಿದ್ದರು.

Write A Comment