ಮಂಗಳೂರು,ಅ.14: ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ಸಿನಿಮಾ ಮತ್ತು ನಾಟಕಗಳ ಕೊಡುಗೆ ಮಹತ್ತರವಾದುದು ಆದುದರಿಂದ ತುಳು ಭಾಷೆಯ ವಿಷಯದ ಚರ್ಚೆ ನಡೆಯುವಾಗ ತುಳು ಸಿನಿಮಾ ಮತ್ತು ನಾಟಕಗಳ ವಿಷಯಗಳ ಚರ್ಚೆಯಲ್ಲಿ ಆಧ್ಯತೆ ನೀಡಬೇಕು ಎಂದು ಚಲನ ಚಿತ್ರ ನಟಿ ಜಯಮಾಲಾ ಸಲಹೆ ಮಾಡಿದ್ದಾರೆ. ಡಿ.12ರಿಂದ 14ರವರೆಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಡೆಯಲಿರುವ ವಿಶ್ವ ತುಳು ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ಬೆಂಗಳೂರಿನಲ್ಲಿರುವ ಶಾಸಕರ ಭವನದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ನಿಯೋಗಕ್ಕೆ ಅವರು ಈ ಮನವಿ ಮಾಡಿದರು.
ವಿಶ್ವ ತುಳು ಪರ್ಬ ಕಾರ್ಯಕ್ರಮದಲ್ಲಿ ತುಳು ಸಿನಿಮಾ ಮತ್ತು ನಾಟಕಗಳ ಕುರಿತು ಕೋಡೆ ಇನಿ ಎಲ್ಲೆ ವಿಚಾರ ಗೋಷ್ಠಿ ಏರ್ಪಡಿಸಿ ಎಂದು ಕಾರ್ಯಕ್ರಮ ಸಂಘಟಕರಲ್ಲಿ ಜಯಮಾಲಾ ಮನವಿ ಮಾಡಿದರು.ಸಮ್ಮೇಳನ ನಡೆಯುವ ಮೂರು ದಿನಗಳ ಕಾಲವೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಭರವಸೆಯನ್ನು ಜಯಮಾಲಾ ನೀಡಿದರು.
ಮೂಲತಃ ತುಳುನಾಡಿನವರಾಗಿ ತುಳು ಭಾಷೆ ಬಲ್ಲವರಾದ ಜಯಮಾಲರಿಗೆ ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲು ತೆರಳಿದ್ದ ನಿಯೋಗದಲ್ಲಿ ಅಖಿಲ ಭಾರತ ತುಳು ಒಕ್ಕೂಟದ ಗೌರವ ಅಧ್ಯಕ್ಷ ದಾಮೋದರ ನಿಸರ್ಗ, ಪದಾಧಿಕಾರಿಗಳಾದ ಎ.ಸಿ.ಭಂಡಾರಿ, ಧರ್ಮಪಾಲ್ ದೇವಾಡಿಗ, ಪ್ರೊ.ಎಂ.ಬಿ.ಪುರಾಣಿಕ್ ನಿಟ್ಟೆ ಶಶಿಧರ ಶೆಟ್ಟಿ, ಚಂದ್ರಶೇಖರ ಸುವರ್ಣ ಮತ್ತಿತರರು ಇದ್ದರು. ಬಳಿಕ ವಿಶ್ವ ತುಳು ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಲು ತೆರಳಿದ ನಿಯೋಗದೊಂದಿಗೂ ಜಯಮಾಲಾ ಸೇರಿಕೊಳ್ಳುವ ಮೂಲಕ ಭಾಷಾಭಿಮಾನ ಪ್ರದರ್ಶಿಸಿದರು.